ಮಾ. 25ಕ್ಕೆ ದಾವಣಗೆರೆಯಲ್ಲಿ ಮೋದಿ ಎದುರು ಕಪ್ಪುಬಾವುಟ ಪ್ರದರ್ಶನಕ್ಕೆ ತಯಾರಾದ ಹಳೇಕುಂದುವಾಡ ರೈತರು, ಈ ನಿರ್ಧಾರ ಏಕೆ?
ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮಾರ್ಚ್ 25ಕ್ಕೆ ದಾವಣಗೆರೆಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ, ಬಸವರಾಜ ಬೊಮ್ಮಾಯಿ, ಜಿ.ಎಂ. ಸಿದ್ದೇಶ್ವರ ವಿರುದ್ಧ ಹಳೇ ಕುಂದುವಾಡ ರೈತರು ಕಪ್ಪು ಬಾವುಟ ಪ್ರದರ್ಶನ ಮಾಡಲು ತಯಾರಿ ನಡೆಸಿದ್ದಾರೆ.
ದಾವಣಗೆರೆ, ಮಾರ್ಚ್, 22: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ಈ ಬಾರಿಯಂತೂ ಜನರು ರಾಜಕಾರಣಿಗಳ ವಿರುದ್ಧ ಕಿಡಿಕಾರುತ್ತಲೇ ಇದ್ದಾರೆ. ಇದೇ ರೀತಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮಾರ್ಚ್ 25ಕ್ಕೆ ದಾವಣಗೆರೆಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್. ವಿ. ರವೀಂದ್ರನಾಥ್ ವಿರುದ್ಧ ಹಳೇ ಕುಂದುವಾಡ ರೈತರು ಕಪ್ಪು ಬಾವುಟ ಪ್ರದರ್ಶನ ಮಾಡಲು ತಯಾರಿ ನಡೆಸಿದ್ದಾರೆ.
ಇನ್ನು ಮುಂಬರುವ ದಿನಗಳಲ್ಲಿ ದೂಡಾ ಕಚೇರಿಗೆ ಬೀಗ ಹಾಕಿ ಮುತ್ತಿಗೆ ಹಾಕಲಾಗುವುದು ಎಂದು ಹಳೇ ಕುಂದುವಾಡ ಗ್ರಾಮಸ್ಥರು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಕುಂದುವಾಡ ಗ್ರಾಮಸ್ಥ ಜೆ.ಆರ್.ಮಹಾಂತೇಶ್ ಮಾತನಾಡಿ, ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಕೇಂದ್ರ, ರಾಜ್ಯ ಸರ್ಕಾರ, ನಗರಾಭಿವೃದ್ಧಿ, ಅಧಿಕಾರಿಗಳ ನಡೆ ವಿರೋಧಿಸಿ ಮಾರ್ಚ್ 25ರಂದು ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಕಪ್ಪು ಬಾವುಟ ಪ್ರದರ್ಶನ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ.

ರೈತರ ನೆಮ್ಮದಿಯನ್ನು ಕಸಿದಿದ್ದಾರೆ
ದೂಡಾ ಇಲಾಖೆಯವರು ಹಳೇ ಕುಂದುವಾಡ ರೈತರನ್ನು ಮೂರು ವರ್ಷದಿಂದ ಅಲೆದಾಡಿಸಿ ರೈತರ ನೆಮ್ಮದಿಯನ್ನು ಕಸಿದಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿಯವರ ಮಾತಿಗೆ ಒಪ್ಪಿ ನಾವು ಜಮೀನು ನೀಡಲು ಮುದಾಗಿದ್ದೆವು. ಆದರೂ ಸಹ ದೂಡಾದವರು ನಿರ್ಲಕ್ಷ್ಯ ಮಾಡಿ ಎರಡು ವರ್ಷ ಜಮೀನು ಖರೀದಿಗೆ ಮುಂದಾಗಲಿಲ್ಲ. ಈ ಹಿಂದೆಯೂ ಒಂದೂವರೆ ವರ್ಷಗಳ ಕಾಲ ಅಲೆದಾಡಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ಯೆ ಬಗೆಹರಿಸದ ಅಧಿಕಾರಿಗಳು
ಖಾಸಗಿಯವರ ಲೇಔಟ್ಗಳಲ್ಲಿ ಎಂತಹದ್ದೆ ಸಮಸ್ಯೆ ಇದ್ದರೂ ಮೂರ್ನಾಲ್ಕು ತಿಂಗಳಲ್ಲೇ ಬಗೆಹರಿಸಿಕೊಡುತ್ತಾರೆ. ಸ್ವತಃ ಇಲಾಖೆಯ ಹೊಸ ಬಡಾವಣೆ ಬಗ್ಗೆ ಅಂದಿನ ದೂಡಾ ಆಯುಕ್ತರಾದ ಬಿ.ಟಿ. ಕುಮಾರಸ್ವಾಮಿ ಅವರು ತಲೆಕೆಡಿಸಿಕೊಳ್ಳದೇ ರೈತರನ್ನು ಮೂರು ವರ್ಷ ಅಲೆದಾಡಿಸಿದರು ಎಂದು ಆರೋಪಿಸಿದರು.

ಸಮಸ್ಯೆ ಮಾತ್ರ ಬಗೆಹರಿದಿಲ್ಲ
ಮೂರು ತಿಂಗಳು, ಆರು ತಿಂಗಳಿಗೆ ಒಬ್ಬರಂತೆ ದೂಡಾ ಅಧ್ಯಕ್ಷರು ಬದಲಾಗಿ ಇಲ್ಲಿಯವರೆಗೆ ನಾಲ್ವರು ಅಧ್ಯಕ್ಷರು ಬದಲಾದರು. ಆದರೆ ಒಬ್ಬರು ಸಹ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಲಿಲ್ಲ. ಹಿಂದಿನ ಆಯುಕ್ತ ಬಿ.ಟಿ. ಕುಮಾರಸ್ವಾಮಿ ಮೂರು ವರ್ಷದಿಂದ ಹೇಳಿದ್ದನ್ನೇ ಹೇಳಿ ದಿನ ದೂಡಿದರು. ನಂತರ ಅವರು ಬದಲಾಗಿದ್ದು, ಇಬ್ಬರು ಜಿಲ್ಲಾಧಿಕಾರಿಗಳು ಸಹ ವರ್ಗಾವಣೆ ಆದರು. ಈಗ ಸರ್ಕಾರದ ಅವಧಿಯೇ ಮುಗಿಯುತ್ತಿದೆ, ಆದರೆ ನಮ್ಮ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗ ಬೇರೆಡೆ ಜಮೀನುಗಳ ದರ ದುಪ್ಪಟ್ಟಾಗಿದೆ. ನಮ್ಮ ಜಮೀನಿನ ದರ ಮಾತ್ರ ಇವರು ಕೇಳಿದಂತೆ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೇರೆಡೆ ಹೋಗಿ ಜಮೀನು ಕೊಳ್ಳುವುದು ಕಷ್ಟವಾಗಿದೆ. 53 ಹೆಕ್ಟೇರ್ ಪ್ರದೇಶ ಹಿಂದುಳಿದ ಸಮುದಾಯದವರ ಜಾಗವಾಗಿದೆ. ಈ ಹಿಂದೆ ಇದು ನೇರ ಖರೀದಿ, ಯಾವುದೇ ಕಾರಣಕ್ಕೂ ಭೂ ಸ್ವಾಧೀನ ಆಗುವುದಿಲ್ಲ ಎಂದು ಹೇಳಿದ್ದೀರಿ. ಆದರೆ ಈಗ ಭೂ ಸ್ವಾಧೀನ ಮಾಡಲು ದೂಡಾದವರು ಅನುಮತಿ ಕೇಳಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಇದಕ್ಕೆ ದೂಡಾ ಬಜೆಟ್ನಲ್ಲಿ ಹಣ ಮೀಸಲು ಇರಿಸಿದ್ದಾರೆ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಭೂ ಸ್ವಾಧೀನಕ್ಕೆ ಮುಂದಾಗಿದ್ದಾರೆ. ಹಾಗೆಯೇ ಅವರು ಬೇರೆಡೆ ಜಾಗ ನೋಡಿದ್ದಾರೆ ಎಂದು ತಿಳಿದುಬಂದಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಸ್ಥಳ ಬದಲಾವಣೆ ಮಾಡಿ, ಅಲ್ಲಿ ಹೊಸ ಬಡಾವಣೆ ಮಾಡಲು ಅವಕಾಶ ಮಾಡಿದರೆ ರೈತರ ಸಮಸ್ಯೆಯೂ ಬಗೆಹರಿಯುತ್ತದೆ. ದೂಡಾದವರು ಹೊಸ ಬಡಾವಣೆ ಮಾಡಲು ಅನುಮತಿ ಸಿಗುತ್ತದೆ, ರೈತರನ್ನು ಸಮಸ್ಯೆಗೆ ಸಿಲುಕಿಸದೇ ಈ ಪ್ರಕ್ರಿಯೆಯಿಂದ ಮುಕ್ತಿಗೊಳಿಸಿ ಎಂದು ಬೇಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಬಲ್ಲೂರು ರವಿಕುಮಾರ್, ಮಲ್ಲಿಕಾರ್ಜುನ ಎನ್, ಹೆಚ್ ಸೋಮಶೇಖರ್, ರಾಮಪ್ಪ, ಶಿವಪ್ಪ ಸೇರಿದಂತೆ ಮತ್ತಿತರರು ಇದ್ದರು.












Click it and Unblock the Notifications