ಗದಗದಲ್ಲಿ ಶೀಘ್ರದಲ್ಲೇ ಹೆಸರು ಕಾಳು ಖರೀದಿ ಕೇಂದ್ರ ಆರಂಭ; ಜಿಲ್ಲಾಧಿಕಾರಿ ವೈಶಾಲಿ
ಗದಗ, ಸೆಪ್ಟೆಂಬರ್, 02: ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿಗೆ ಸರ್ಕಾರ ಆದೇಶಿಸಿದೆ. ಶೀಘ್ರವೇ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆದು, ರೈತರು ಬೆಳೆದ ಹೆಸರು ಕಾಳು ಖರೀದಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಈ ಕುರಿತು ಸಭೆಯನ್ನು ಮಾಡಲಾಗಿದ್ದು, ಹೆಸರು ಕಾಳು ಉತ್ಪನ್ನ ಖರೀದಿಸುವ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಂಬಲ ಬೆಲೆ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಖರೀದಿ ಕೇಂದ್ರದ ಮುಂದೆ ಬ್ಯಾನರ್ ಅಳವಡಿಸಬೇಕು. ಕರಪತ್ರಗಳ ಮುದ್ರಣ ಸೇರಿದಂತೆ ವ್ಯಾಪಕ ಪ್ರಚಾರ ಕೈಗೊಂಡು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದರ ಲಾಭ ಪಡೆದುಕೊಳ್ಳುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಹೆಸರು ಬೆಳೆಗೆ ಬೆಂಬಲ ಬೆಲೆ ಸಿಗದೆ ಗದಗ ಜಿಲ್ಲೆಯ ರೈತರು ಹೈರಾಣ
ಸರ್ಕಾರದಿಂದ ಆದೇಶ ಹೊರಡಿಸಲಾಗಿದ್ದ ದಿನದಿಂದ ರೈತರ ನೋಂದಣಿ 45 ದಿನಗಳವರೆಗೆ ನಿಗದಿ ಮಾಡಲಾಗಿದೆ. ಹಾಗೂ ಇದರ ಖರೀದಿ ಕಾಲಾವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ ಮಾರ್ಕಫೆಡ್ ಸಂಸ್ಥೆಯ ಮೂಲಕ ಖರೀದಿಸಲು ಸರ್ಕಾರ ತಿಳಿಸಿದೆ. ನೋಂದಣಿ ಮಾಡಿಸಿದ ರೈರಿಗೆ ನಿಗದಿತ ದಿನದಂದು ಹೆಸರು ಹುಟ್ಟುವಳಿ ತರಲು ಸೂಚಿಸಬೇಕು ಎಂದರು.
ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಕೆ.ಲಕ್ಷಾಮಿ ಅವರು ಸಭೆಗೆ ಮಾಹಿತಿ ಒದಗಿಸಿದ್ದಾರೆ. ಸರ್ಕಾರದ ಆದೇಶದ ಅನ್ವಯ ರಾಜ್ಯದಲ್ಲಿ ಮಾರ್ಕಫೆಡ್ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ಮಾಡಲಾಗಿದೆ. ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ ಕಲಬುರಗಿ ಸಂಸ್ಥೆಗಳನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ಗುರುತಿಸಲಾಗಿದೆ ಎಂದರು.
ಸೊಗಸಾಗಿ ಬೆಳದ ಹೆಸರು,ಉದ್ದು ಬೆಳೆಗೆ ಹಳದಿ ರೋಗ, ರೈತರಲ್ಲಿ ಆತಂಕ
ಹೆಸರು ಬೆಳೆಗೆ ಬೆಂಬಲ ಬೆಲೆ ನಿಗದಿ
ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಹೆಸರು ಹುಟ್ಟುವಳಿಯನ್ನು ಬೆಳೆದಿದ್ದಾರೆ. ಗದಗ, ನರಗುಂದ, ರೋಣ, ಗಜೇಂದ್ರಗಡ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ಮಾರುಕಟ್ಟೆ ಸಮಿತಿಗಳಲ್ಲಿ ಹೆಸರು ಹುಟ್ಟುವಳಿ ಹಾಕಲಾಗಿತ್ತು. ಮಾರುಕಟ್ಟೆ ದರವು ಪ್ರತಿ ಕ್ವಿಂಟಾಲ್ ಹೆಸರಿಗೆ 3,000 ರೂಪಾಯಿಯಿಂದ 7,200 ರೂಪಾಯಿಗಳ ವರೆಗೆ ಇದ್ದು, ಸರಾಸರಿ 6,000 ರೂಪಾಯಿವರೆಗೆ ಬೆಲೆ ನಿಗದಿ ಮಾಡಲಾಗಿದೆ. ಹೆಸರು ಕಾಳು ಪ್ರತಿ ಕ್ವಿಂಟಾಲ್ಗೆ 7,755 ರೂಪಾಯಿಗಳಂತೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ.
ಪ್ರಸ್ತುತ ಮಾರುಕಟ್ಟೆ ದರ ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಕಡಿಮೆ ಇರುತ್ತದೆ. ಜಿಲ್ಲೆಯ 54 ಕಡೆಗಳಲ್ಲಿ ಹೆಸರು ಹುಟ್ಟುವಳಿ ಕೇಂದ್ರ ತೆರೆಯಲು ಸ್ಥಳ ಗುರುತಿಸಲಾಗಿದೆ. ತಾಲೂಕುವಾರು ವಿವರಗಳು ಇಂತಿದ್ದು, ಗದಗ-17, ಶಿರಹಟ್ಟಿ-3, ಲಕ್ಷ್ಮೇಶ್ವರ-3, ಮುಂಡರಗಿ-4, ನರಗುಂದ-9, ರೋಣ-16, ಗಜೇಂದ್ರಗಡದಲ್ಲಿ 2 ಹುಟ್ಟುವಳಿ ಕೇಂದ್ರಗಳು ಇವೆ.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಬಿರಾದಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಕೇಂದ್ರ ಮತ್ತು ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರು, ಮಾರ್ಕೆಟಿಂಗ್ ಫೆಡರೇಶನ್ ಶಾಖಾ ವ್ಯವಸ್ಥಾಪಕರು, ಸಹಕಾರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹೆಸರು ಬೆಳೆಗೆ ಹಳದಿ ರೋಗ, ರೈತರು ಕಂಗಾಲು
ಈ ಹಿಂದೆ ಗದಗದಲ್ಲಿ ಬೆಂಬಲ ಬೆಲೆ ಸಿಗದಿದ್ದಕ್ಕೆ ಬೆಳೆ ಕಾಟಾವು ಮಾಡಿ ಹೆಸರು ಕಾಳುಗಳನ್ನು ರೈತರು ರಾಶಿ ಮಾಡಿದ್ದರು. ಭೂಮಿಯೇ ಕೊಚ್ಚಿ ಹೋಗುವಂತೆ ಸುರಿದ ಮಳೆಯಿಂದ ರೈತರು ಬೆಳೆದ ಬೆಳೆಗಳು ಜಲಾವೃತವಾಗಿದ್ದವು. ಹೆಸರು ಬೆಳೆಗೆ ಹಳದಿ ರೋಗ ಅಂಟಿಕೊಂಡು ಕಟಾವು ಮಾಡಿ ಮಾರಾಟ ಮಾಡಬೇಕು ಎಂದು ಅಂದುಕೊಂಡಿದ್ದ ರೈತರಿಗೆ ನಿರಾಸೆಯೂ ಆಗಿತ್ತು. ಗದಗ ಜಿಲ್ಲೆಯಾದ್ಯಂತ ಇದೇ ದೃಶ್ಯ ಕಂಡು ಬರುತ್ತಿದ್ದು, ಅಲ್ಲಿನ ರೈತರು ಕಂಗೆಟ್ಟು ಹೋಗಿದ್ದರು. ಕೃಷಿ ಕಾಯಕವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ರೈತರಿಗೆ ಪ್ರಕೃತಿ ವಿಕೋಪಗಳು ಪೆಟ್ಟು ನೀಡಿದ್ದವು. ನಿರಂತರವಾಗಿ ಸುರಿದಿದ್ದ ಮಳೆಗೆ ಗದಗ ತಾಲೂಕಿನ ಸಾವಿರಾರು ಎಕರೆಯಲ್ಲಿ ಬೆಳೆದ ಹೆಸರು ಬೆಳೆ ನಾಶವಾಗಿದ್ದು, ಅಲ್ಪಸ್ವಲ್ಪ ಬೆಳೆ ಕೈಗೆ ಬಂದಿತ್ತು. ಆದರೆ ಸರಕಾರ ಖರೀದಿ ಕೇಂದ್ರ ತೆರೆಯದೇ ಇರುವುದರಿಂದ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಹೆಸರು ಕಾಳನ್ನು ಮಾರುವಂತಾಗಿತ್ತು.
ಜಿಲೆಯಾದ್ಯಂತ ಈ ವರ್ಷ 3.17 ಲಕ್ಷ ಹೆಕ್ಟೇರ್ ಹೆಸರು ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ ವರುಣ ಆರ್ಭಟ ಶುರು ಮಾಡಿದ್ದರಿಂದ ಕೇವಲ 1.20 ಲಕ್ಷ ಹೆಕ್ಟೇರ್ ಮಾತ್ರ ಹೆಸರು ಬೆಳೆಯನ್ನು ಬೆಳೆಯಲಾಗಿತ್ತು. ಅಂದಾಜು 79 ಸಾವಿರ ಹೆಕ್ಟೇರ್ ಹೆಸರು ಬೆಳೆ ನಾಶವಾಗಿ ರೈತರು ದಿಕ್ಕೆಟ್ಟು ಕಂಗಾಲಾಗಿ ಹೋಗಿದ್ದರು. ಹೆಸರು ಬೆಳೆಗೆ ಹಳದಿ ರೋಗ ಅಂಟಿಕೊಂಡ ಪರಿಣಾಮ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಹೆಸರು 4,500 ರೂಪಾಯಿಗೆ ಮಾರಾಟ ಆಗುತ್ತಿತ್ತು. ಸರ್ಕಾರದ ಬೆಂಬಲ ಬೆಲೆ 7,250 ರೂಪಾಯಿ ಇರುವುದರಿಂದ ಆದಷ್ಟು ಬೇಗ ಖರೀದಿ ಕೇಂದ್ರ ತೆರೆಯಬೇಕು ಎಂದು ರೈತರು ಆಗ್ರಹಿಸಿದ್ದರು. ಸರ್ಕಾರದಿಂದ ಇದೀಗ ಜಿಲ್ಲೆಯಲ್ಲಿ ಖರೀದಿ ಕೇಂದ್ರ ತೆರೆಯಲು ಮುಂದಾಗಿದ್ದು, ಗದಗ ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿಯೂ ಶೀಘ್ರವೇ ಖರೀದಿ ಕೇಂದ್ರಗಳು ಆರಂಭವಾಗುವ ಸಾಧ್ಯತೆಗಳಿವೆ.