ನೀರಿನ ಕೊರತೆ ನಡುವೆಯೇ ದ್ರಾಕ್ಷಿ ಬೆಳೆದ ಕೋಲಾರ ರೈತನಿಗೆ ಕೊರೊನಾ ಪೆಟ್ಟು
ಕೋಲಾರ, ಮೇ 26: ಕೋಲಾರ ಜಿಲ್ಲೆಯಲ್ಲಿ ಮೊದಲೇ ನೀರಿನ ಬವಣೆಯಿಂದ ಕಂಗಾಲಾಗಿದ್ದ ರೈತರಿಗೆ ಈಗ ಕೊರೊನಾ ಕೂಡ ಏಟು ನೀಡಿದೆ. ಕೋಲಾರದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಅಲ್ಪಸ್ವಲ್ಪ ಬರುವ ನೀರಿನಲ್ಲಿ ದ್ರಾಕ್ಷಿ ಬೆಳೆದಿರುವ ರೈತನ ಆದಾಯದ ಕನಸಿಗೆ ಕೊರೊನಾ ತಣ್ಣೀರೆರಚಿದೆ.
Recommended Video
ಕೋಲಾರ ಜಿಲ್ಲೆಯ ಕೆಜಿಎಫ್ ಸಮೀಪದ ಕೊತ್ತೂರು ಗ್ರಾಮದಲ್ಲಿನ ರೈತ ಮುನಿವೆಂಕಟಪ್ಪ ಎಂಬುವವರು ತಮ್ಮ ಮೂರು ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆ ಬೆಳೆದಿದ್ದಾರೆ. ಸಾಲಸೋಲ ಮಾಡಿ ಇಡೀ ಕುಟುಂಬ ಹಗಳಿರುಳೆನ್ನದೆ ದುಡಿದರ ಪರಿಣಾಮ ಉತ್ತಮ ಫಸಲು ಬಂದಿದೆ. ಆದರೆ ದ್ರಾಕ್ಷಿ ಬೆಳೆ ಕಟಾವಿಗೆ ಬಂದಿದರೂ ಕೊರೊನಾದಿಂದಾಗಿ ಸೂಕ್ತ ಮಾರುಕಟ್ಟೆ ಇಲ್ಲದೆ ತೋಟದಲ್ಲೇ ಕೊಳೆಯುವಂತಾಗಿದೆ. ಹೀಗಾಗಿ ರೈತ ಮುನಿವೆಂಕಟಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಎರಡು ಸಾವಿರ ಅಡಿಗಳಿಂದ ನೀರು ತೆಗೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯೆ ದ್ರಾಕ್ಷಿ ಬೆಳೆದಿರುವ ರೈತ, ತಮ್ಮ ಜಮೀನಿನಲ್ಲಿ ಐದರಿಂದ ಆರು ಬೋರ್ವೆಲ್ಗಳನ್ನು ಕೊರೆಸಿ ಕೈಸುಟ್ಟುಕೊಂಡಿದ್ದಾರೆ. ಹೀಗಿರುವಾಗ ಆರು ತಿಂಗಳ ಹಿಂದೆ ಮತ್ತೊಂದು ಬೋರ್ವೆಲ್ ಕೊರೆಸಿ, ಕೃಷಿ ಹೊಂಡದ ನೆರವಿನಿಂದ ದ್ರಾಕ್ಷಿ ಬೆಳೆದಿದ್ದಾರೆ. ಇದೀಗ ಇವರ ಆದಾಯದ ಕನಸು ನುಚ್ಚುನೂರಾಗಿದೆ.

ಸರ್ಕಾರ ನಮ್ಮಂಥವರ ಸಮಸ್ಯೆ ಆಲಿಸಿ ಬೆಳೆ ಪರಿಹಾರ ನೀಡಬೇಕೆಂದು ಮುನಿವೆಂಕಟಪ್ಪ ಕುಟುಂಬ ಮನವಿ ಮಾಡಿಕೊಂಡಿದೆ.












Click it and Unblock the Notifications