"ಸರ್ಕಾರದ ಪತ್ರ ರೈತರನ್ನು ಮೋಸಗೊಳಿಸುವ ಒಂದು ತಂತ್ರವಷ್ಟೆ"
ನವದೆಹಲಿ, ಡಿಸೆಂಬರ್ 22: ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಯಲ್ಲಿ ರೈತರು ಕೈಗೊಂಡಿರುವ ಪ್ರತಿಭಟನೆ 27ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರ್ಕಾರವು ಆರನೇ ಸುತ್ತಿನ ಮಾತುಕತೆ ನಡೆಸಲು ರೈತ ಸಂಘಗಳಿಗೆ ಪತ್ರ ಬರೆದಿದೆ. ಆದರೆ ಈ ಪತ್ರದ ಕುರಿತು ವಿರೋಧ ವ್ಯಕ್ತಪಡಿಸಿರುವ ರೈತರು, "ಸರ್ಕಾರದ ಈ ಪತ್ರ ರೈತರನ್ನು ಮೋಸಗೊಳಿಸುವ ತಂತ್ರವಷ್ಟೆ" ಎಂದಿದ್ದಾರೆ.
ಕೃಷಿ ಕಾಯ್ದೆ ತಿದ್ದುಪಡಿ ಕುರಿತು ಕೇಂದ್ರ ಸರ್ಕಾರವು ಭಾನುವಾರ ರೈತರಿಗೆ ಪತ್ರ ಬರೆದು, ಮಾತುಕತೆಗೆ ದಿನಾಂಕ ನಿಗದಿ ಮಾಡುವಂತೆ ತಿಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸರ್ವಣ್ ಸಿಂಗ್, "ಇದು ರೈತರೆಡೆಗೆ ಸರ್ಕಾರದ ಹೆಜ್ಜೆಯಲ್ಲ, ರೈತರನ್ನು ಮೋಸಗೊಳಿಸುವ ತಂತ್ರ" ಎಂದಿದ್ದಾರೆ.
"ಸರ್ಕಾರ ಕೃಷಿ ಕಾಯ್ದೆಗಳ ಕುರಿತು ತನ್ನ ನಿಲುವನ್ನು ಬದಲಿಸಿದಂತೆ ಕಾಣುತ್ತಿಲ್ಲ. ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ಮಾತೂ ಸರ್ಕಾರದಿಂದ ಬಂದಿಲ್ಲ. ಕಾಯ್ದೆಗಳಲ್ಲಿ ತಿದ್ದುಪಡಿ ತರುವ ಕುರಿತು ಚರ್ಚಿಸಲು ರೈತರು ದಿನಾಂಕ ನಿಗದಿಪಡಿಸಿ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಕಾಯ್ದೆಯನ್ನು ಸಂಪೂರ್ಣ ರದ್ದುಗೊಳಿಸಿ ಎಂಬುದು ರೈತರ ಆಗ್ರಹವಾಗಿದ್ದರೂ ಸರ್ಕಾರ ಆ ಬಗ್ಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಐದು ಸುತ್ತಿನ ಮಾತುಕತೆ ನಂತರವೂ ಕೇಂದ್ರ ಹಾಗೂ ರೈತರ ನಡುವಿನ ಬಿಕ್ಕಟ್ಟು ಕೊನೆಯಾಗಿಲ್ಲ. ಆರನೇ ಸುತ್ತಿನ ಮಾತುಕತೆಗೆ ದಿನ ನಿಗದಿ ಮಾಡುವಂತೆ ಸರ್ಕಾರ ಪತ್ರ ಬರೆದಿದೆ. ರೈತರ ಪ್ರತಿಭಟನೆಯೂ ಮುಂದುವರೆದಿದ್ದು, 27ನೇ ದಿನಕ್ಕೆ ಕಾಲಿಟ್ಟಿದೆ.












Click it and Unblock the Notifications