ಮೈಸೂರು ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸದ ಸರ್ಕಾರ: ಬಡಗಲಪುರ ನಾಗೇಂದ್ರರಿಂದ ಸಿಎಂಗೆ ಬಹಿರಂಗ ಪತ್ರ
ಕೃಷಿಗೆ ಸಂಬಂಧಿದಂತೆ ಸಮಸ್ಯೆಗಳನ್ನು ಈಡೇರಿಸುವಂತೆ ರೈತರು ಒಂದು ವರ್ಷದಿಂದ ಹೋರಾಟ ಮಾಡಿದರೂ ಪ್ರಯೋಜನಾ ಇಲ್ಲದಂತಾಗಿದೆ. ಹೀಗೆ ಭರವಸೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರಹಾಕುತ್ತಲೇ ಇದ್ದಾರೆ. ಮೈಸೂರು, ಫೆಬ್ರವರಿ, 03: ಸತತ 1 ವರ್ಷದಿಂದ ರ
ಮೈಸೂರು, ಫೆಬ್ರವರಿ, 03: ಸತತ 1 ವರ್ಷದಿಂದ ರೈತರ ಹೋರಾಟದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಮೂರು ಕೃಷಿ ಸಂಬಂಧಿತ ಕಾಯ್ದೆಗಳನ್ನು ರದ್ದುಪಡಿಸಿದ್ದಾರೆ. ಅದರ ಭಾಗವಾಗಿಯೇ ಕರ್ನಾಟಕ ಸರ್ಕಾರ ತಿದ್ದುಪಡಿ ತಂದಿರುವ ಎಪಿಎಂಸಿ ಕಾಯಿದೆಯನ್ನು ಮುಂದುವರೆಸಿದೆ. ಇದರಿಂದ ಎಪಿಎಂಸಿಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ಇನ್ನಾದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಹಾಗೆಯೇ ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಒದಗಿಸಿ, ಎಪಿಎಂಸಿ ಕಾಯಿದೆಯನ್ನು ವಾಪಸ್ ಪಡೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಅಕ್ಟೋಬರ್ 15ರಂದು ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಕೇವಲ ಔಪಚಾರಿಕ ಸಭೆ ನಡೆಸಲಾಯಿತು. ನವೆಂಬರ್ 7ರಿಂದ ಮಂಡ್ಯದ ರೈತರು ಅಹೋರಾತ್ರಿ ಧರಣಿ ನಡೆಸಿದರೂ ನೀವು ಕ್ಯಾರೆ ಎನ್ನಲಿಲ್ಲ. ಡಿಸೆಂಬರ್ 30ರಂದು ಮಂಡ್ಯದಲ್ಲಿ ಆಯೋಜಿಸಿದ್ದ ಅಮಿತ್ ಶಾ ಅವರ ಕಾರ್ಯಕ್ರಮ ಸುಸೂತ್ರವಾಗಿ ನಡೆಯಬೇಕೆಂಬ ಉದ್ದೇಶದಿಂದ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ರೈತರು ಹಾಗೂ ಸಾಹಿತಿಗಳನ್ನು ಬಂಧಿಸಲಾಯಿತು. ಇದರಿಂದ ನೊಂದ ರೈತರು ರಾಜ್ಯಾದ್ಯಂತ ಪ್ರತಿಭಟನೆಯನ್ನು ತೀವ್ರಗೊಳಿಸಿದರು.
ಆಗ ಜಿಲ್ಲಾ ಉಸ್ತುವಾರಿ ಸಚಿವರನ್ನು ಮಂಡ್ಯಕ್ಕೆ ಕಳುಹಿಸಿ ರೈತ ಮುಖಂಡರೊಂದಿಗೆ ಸಂಧಾನ ನಡೆಸಿ ಜನವರಿ 17ರೊಳಗೆ ಸಭೆ ಕರೆದು ಕಬ್ಬು ಬೆಳೆಗಾರರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದರು. ಆದರೆ ಅವರು ಕೊಟ್ಟ ಭರವಸೆ ಮಾತ್ರ ಈಡೇರಲಿಲ್ಲ. ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಯಾಗಬೇಕು. ರಾಜ್ಯ ಸರ್ಕಾರ ಎಸ್ಎಪಿ ಘೋಷಣೆ ಮಾಡಬೇಕೆಂದು ರೈತರು ಕಳೆದ ಏಳು ತಿಂಗಳಿನಿಂದ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೂ, ಸಿಎಂ ಬಸವರಾಜ ಬೊಮ್ಮಾಯಿ ಅವರು ತಲೆಕೆಡಿಸಿಕೊಂಡಿಲ್ಲ.

ರೈಲ್ವೆ ನಿಲ್ದಾಣದಲ್ಲಿ ರೈತರ ಬಂಧನ
ಇನ್ನು ಕಳೆದ ವರ್ಷ ಜುಲೈ 11ರಂದು ಸಾವಿರಾರು ರೈತರು ತಮ್ಮ ಮನೆಗೆ ಮುತ್ತಿಗೆ ಹಾಕಲು ಬಂದಾಗ ಹೋರಾಟಗಾರರನ್ನು ಪೊಲೀಸರ ಮೂಲಕ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಯಿತು. ನಂತರ ತಮ್ಮ ಗೃಹ ಕಚೇರಿಗೆ ಕರೆಸಿಕೊಂಡು ಸೌಜನ್ಯದಿಂದಲೇ ಮಾತನಾಡಿ, ಒಂದು ವಾರದೊಳಗೆ ಸಿಹಿಸುದ್ದಿ ಕೊಡುವುದಾಗಿ ಭರವಸೆ ನೀಡಿದ್ದು, ಆ ಭೆರವಸೆ ಇಂದಿಗೂ ಈಡೇರಿಲ್ಲ ಎಂದು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದುವರೆಗೂ ಸಭೆ ಕರೆಯದ ಸಿಎಂ
ಡಿಸೆಂಬರ್ 1ರಂದು ಸಿಎಂ ತಮ್ಮ ಗೃಹ ಕಚೇರಿಯಲ್ಲಿ ಹೋರಾಟಗಾರರನ್ನು ಭೇಟಿಯಾಗಿ ಅದೇ ಭರವಸೆ ನೀಡಿದರು. ಆದರೆ ಇದುವರೆಗೂ ಸಭೆ ಕರೆಯದೇ, ಸಮಸ್ಯೆಗೆ ಸ್ಪಂದಿಸದೆ ಕೊಟ್ಟ ಮಾತನ್ನು ತಪ್ಪಿದ್ದಾರೆ. ಹಿಂದೊಮ್ಮೆ ಸಿಎಂ ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತ ವಿರೋಧಿ ನೀತಿ ಹೊಂದಿರುವ ಕಾನೂನುಗಳಿಗೆ ತಿದ್ದುಪಡಿ ಮಾಡಲಾಗುವುದು. ರೈತರ ಸಾಲ ತೀರಿಸುವ ಅವಕಾಶ ಮಾಡಿಕೊಟ್ಟು ಅವರ ಮನೆ, ಆಸ್ತಿ ಜಪ್ತಿ ಮಾಡುವುದನ್ನು ಸಂಪೂರ್ಣವಾಗಿ ಕಾನೂನು ಮೂಲಕ ನಿಷೇಧಿಸಲು ಮುಂದಿನ ಕ್ಯಾಬಿನೆಟ್ನಲ್ಲಿ ಮಂಡಿಸಲಾಗುವುದು ಎಂದಿದ್ದರು. ಆದರೆ, ಆ ಮಾತನ್ನೂ ಸಿಎಂ ಉಳಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications