ಸರ್ಕಾರ ರೈತರ ಸಮಸ್ಯೆಯನ್ನು ಆಲಿಸುತ್ತಿಲ್ಲ: ಮಂಡ್ಯದಲ್ಲಿ ಎಚ್.ಡಿ.ದೇವೇಗೌಡ ಆಕ್ರೋಶ
ಮಂಡ್ಯ, ಡಿಸೆಂಬರ್, 02: ಇಷ್ಟೊಂದು ಬೇಜವಾಬ್ದಾರಿ ಸರ್ಕಾರವನ್ನು ನಾನು ಎಂದೂ ನೋಡಿಲ್ಲ. ರೈತರ, ಜನಸಾಮಾನ್ಯರ ಸಮಸ್ಯೆಗಳನ್ನು ಈಡೇರಿಸದೆ ಅಸಡ್ಡೆ ತೋರುತ್ತಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮಂಡ್ಯದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಟನ್ ಕಬ್ಬಿನಗೆ 4,500 ರೂಪಾಯಿ, ಪ್ರತೀ ಲೀಟರ್ ಹಾಲಿಗೆ 40 ರೂಪಾಯಿ ನೀಡಬೇಕು. ಇವುಗಳನ್ನು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ 25 ದಿನಗಳಿಂದಲೂ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತರು ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ಸರ್ಕಾರದ ಪ್ರತಿನಿಧಿಗಳು ಮಾತ್ರ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಿಡಿಕಾರಿದರು.
ನಾನೂ ಸಹ ರೈತನ ಮಗನಾಗಿ ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ಕಂಡಿದ್ದೇನೆ. ನಿಮ್ಮ ಈ ಹೋರಾಟಕ್ಕೆ ನನ್ನ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡುತ್ತಿದ್ದೇನೆ ಎಂದು ಹೇಳಿದರು. ನೀವು ಕಳೆದ 25 ದಿನನಗಳಿಂದಲೂ ಹೋರಾಟ ನಡೆಸುತ್ತಿದ್ದೀರಿ. ನಾನೂ ಸಹ ನಿಮ್ಮ ಪರವಾಗಿ ಹೋರಾಟ ಮಾಡುತ್ತೇನೆ. ನಿಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ, ರೈತ ಮುಖಂಡರಾದ ಎಸ್.ಸಿ. ಮಧುಚಂದನ್, ಸಿದ್ದೇಗೌಡ, ಲಿಂಗಪ್ಪಾಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಿರ್ಮಲಾನಂದನಾಥ ಸ್ವಾಮಿ ಭಾಗಿ
ಇನ್ನು ಇತ್ತೀಚೆಗಷ್ಟೇ ಪ್ರತಿ ಟನ್ ಕಬ್ಬಿಗೆ 4,500 ರೂಪಾಯಿ ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂಪಾಯಿ ನಿಗದಿ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಮಂಡ್ಯದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರು. ಸ್ವಾಮೀಜಿ ಬೆಂಬಲದಿಂದ ಈ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ರೈತರು ವಿಶ್ವಾಸ ವ್ಯಕ್ತಪಡಿಸಿದ್ದರು.

ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ
ರೈತರ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದ್ದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ದೇಶದ ಆಹಾರ ಸಾರ್ವಭೌಮತ್ವದಲ್ಲಿ ಕೃಷಿ ಹಾಗೂ ರೈತರು ಮಹತ್ವದ ಪಾತ್ರ ವಹಿಸುತ್ತಾರೆ. ಆದರೆ ಪ್ರಸ್ತುತ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನಿಷ್ಟ ಲಾಭವೂ ಸಿಗದಾಗ ಕೃಷಿಯಿಂದ ವಿಮುಖವಾಗುವ ನಿರ್ಧಾರ ಮಾಡುತ್ತಾರೆ. ಯುವಜನರು ಗ್ರಾಮೀಣ ಪ್ರದೇಶವನ್ನು ತೊರೆದು ವಲಸೆ ಹೋಗುವಂತಾಗುತ್ತದೆ. ಅಲ್ಲದೆ ಆಹಾರ ಸಾರ್ವಭೌಮತ್ವಕ್ಕೆ ಧಕ್ಕೆಯುಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಬೇಕು
ಮಾತು ಮುಂದುವರಿಸಿದ ಅವರು, ರೈತರು ಬೆಳೆ ಬೆಳೆಯಲು ಖರ್ಚು ಮಾಡುತ್ತಿರುವ ದರಕ್ಕೂ ಹಾಗೂ ಬರುತ್ತಿರುವ ಹಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹಾಕಿದ ಬಂಡವಾಳವೂ ಸಿಗದಂತಹ ಸ್ಥಿತಿ ಬರುತ್ತಿದೆ. ಪರಿಣಾಮ ರೈತರಿಗೆ ಸಮಸ್ಯೆ ಆಗುತ್ತಿರುವುದರಿಂದ ಸರ್ಕಾರ ನೆರವಿಗೆ ಬರಬೇಕು. ಈ ಹಿನ್ನೆಲೆಯಲ್ಲಿ ಆದಾಯ ಮತ್ತು ಖರ್ಚಿನ ವ್ಯತ್ಯಾಸ ಗಮನಿಸಿ ಎಸ್ಎಪಿ ದರ ನೀಡಲು ಕ್ರಮ ವಹಿಸಬೇಕು. ಕೃಷಿ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗಲು ನೆರವಾಗಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಸಮಸ್ಯೆಯಾಗಲಿದೆ. ಇನ್ನು ಕಬ್ಬು ಹಾಗೂ ಹಾಲಿನ ದರ ನಿಗದಿ ಸಂಬಂಧ ರೈತರು ನಡೆಸುತ್ತಿರುವ ಹೋರಾಟದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಲಾಗುವುದು ಎಂದು ಭರವಸೆ ನೀಡಿದ್ದರು.

ಮಂಡ್ಯದಲ್ಲಿ ರೈತರ ಆಕ್ರೋಶ
ಕಬ್ಬಿನ ಬೆಲೆ ನಿಗದಿಗೆ ಮಂಡ್ಯದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲಿಸಿ ಮಂಡ್ಯ ತಾಲೂಕು ಹಳೇಬೂದನೂರು, ಚಿಕ್ಕಮಂಡ್ಯ, ಹಲ್ಲೇಗೆರೆ, ಉಪ್ಪಾರಕನಹಳ್ಳಿ ಗ್ರಾಮಸ್ಥರು ಹಾಗೂ ಕೀರೆಮಡಿ ಒಕ್ಕೂಟದ ಮಹಿಳೆ ಸದಸ್ಯರು ಭಾಗವಹಿಸಿದ್ದರು. ಈ ವೇಳೆ ರೈತ ಮಹಿಳೆಯರು ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಹಾಕಿದ್ದರು.












Click it and Unblock the Notifications