ಲಂಚದ ಮೇವುಂಡ ಲಾಲು ಈಗ ಕೈತೋಟದ ಮಾಲಿ!

ಲಂಚದ 'ಮೇವುಂಡರಾಯ' ಲಾಲು ಖುಷ್ ಹುವಾ:
ಜೈಲಿನಲ್ಲಿ ಜೀವನೋಪಾಯಕ್ಕೆ ಪರಿಹಾರ ಕಂಡುಕೊಂಡಿರುವ ಲಾಲುಜಿ ಕೈತೋಟದ ಮಾಲಿಯಾಗಿದ್ದಾರೆ! ಬಿರಸಾ ಮುಂಡಾ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಲಾಲು ಎಂಬ ಮಹಾ ಭ್ರಷ್ಟಾಚಾರಿ ಜೈಲು ತೋಟದಲ್ಲಿ ಹೂಗಿಡ ಬೆಳೆಸುತ್ತಾ, ತರಕಾರಿ ಬೆಳೆಸುತ್ತಾ ಒಂದಷ್ಟು ಮೈಬೆವರು ಹರಿಸುತ್ತಿದ್ದಾರೆ. ಇದಕ್ಕೆ ಜೈಲು ಅಧಿಕಾರಿಗಳು ಈತನ ಕೆಲಸದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ್ದು, ದಿನಕ್ಕೆ 14 ರೂಪಾಯಿ ಕೂಲಿಯನ್ನೂ ಫಿಕ್ಸ್ ಮಾಡಿದ್ದಾರೆ.
ಅಕ್ಟೋಬರ್ 30ರಂದು ಜಾರ್ಖಂಡ್ ಹೈಕೋರ್ಟ್ ತಮ್ಮ ಜಾಮೀನು ಅರ್ಜಿಯನ್ನು ತಿರಸ್ಕರಿಸುವವರೆಗೂ ಜೈಲಿಂದ ಹೊರಬೀಳುವ ಬಗ್ಗೆ ಹೈ ಹೋಪ್ಸ್ ಹೊಂದಿದ್ದ ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಲಾಲು, ಅನ್ಯ ಮಾರ್ಗ ಕಾಣದೆ ಅಂದೇ ಜೈಲು ತೋಟದಲ್ಲಿ ಮಾಲಿ ಕೆಲಸವನ್ನು ಶುರುಹಚ್ಚಿಕೊಂಡರು. ಆದರೆ, ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಇತರೆ 3 ಐಎಎಸ್ ಮತ್ತು ಒಬ್ಬ ಐಆರ್ ಎಸ್ ಅಧಿಕಾರಿ ಶಿಕ್ಷಕರಾಗಿ ಜೈಲಿನಲ್ಲಿ ದುಡಿಯುತ್ತಿದ್ದಾರೆ.
52 ಎಕರೆ ಪ್ರದೇಶದ ವಿಶಾಲ ಸಂಪದ್ಭರಿತ ಜೈಲು ತೋಟದಲ್ಲಿ ಸಹ ಮಾಲಿಗಳೊಂದಿಗೆ ಕಾರ್ಯಮಗ್ನರಾಗುವ ಲಾಲು, ತಮ್ಮ ಕೆಲಸವನ್ನು ಖುಷಿಯಿಂದ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದು ಜೈಲು ವಾರ್ಡನುಗಳು ತಿಳಿಸಿದ್ದಾರೆ.
ಅದೊಮ್ಮೆ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದ ಲಾಲುಗೆ ಜೆಡಿಯು ಸಂಸದ ಜಗದೀಶ್ ಶರ್ಮಾ ಮತ್ತು ಲಾಲುರ ಆರ್ ಜೆಡಿ ಪಕ್ಷದ ಮಾಜಿ ಶಾಸಕ ಆರ್ ಕೆ ರಾಣಾ ಜೈಲಿನಲ್ಲಿ ಲಾಲು ಜತೆಗೂಡಿ ತೋಟಕ್ಕೆ ನೀರು ಬಿಡುತ್ತಿದ್ದಾರೆ. ಜೈಲಿನಲ್ಲಿ ಒಟ್ಟು 3,000 ಮಂದಿ ಕೈದಿಗಳು ಇದ್ದಾರೆ. ಅವರಲ್ಲಿ ಶೇ. 30ರಷ್ಟು ಮಂದಿ ದೊಡ್ಡ ಕ್ರಿಮಿನಲ್ಲುಗಳು ಮತ್ತು ಶೇ. 10ರಷ್ಟು ಮಾವೋ ಉಗ್ರರು ಇದ್ದಾರೆ.












Click it and Unblock the Notifications