ಸಾಲದ ಸುಳಿಗೆ ಸಿಲುಕಿ ತಿರುಮಲಾಪುರ ರೈತ ಮಹಿಳೆ ಆತ್ಮಹತ್ಯೆ
ಮಂಡ್ಯ, ಡಿಸೆಂಬರ್ 1: ಕೃಷಿಗೆ ಮಾಡಿದ ಸಾಲದ ಬಡ್ಡಿ ಬೆಳೆಯುತ್ತಿದ್ದರಿಂದ, ಬರದ ಕಾರಣ ಯಾವುದೇ ಬೆಳೆ ಬೆಳೆಯದೆ ಆರ್ಥಿಕ ಮುಗ್ಗಟ್ಟು ಹೆಚ್ಚಿದ್ದರಿಂದ ರೈತ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಂಡವಪುರ ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ನಡೆದಿದೆ.
ತಿರುಮಲಾಪುರ ಗ್ರಾಮದ ಲತಾ (38) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೈತ ಮಹಿಳೆ. ಈಕೆಯ ಗಂಡ ತೀರಿಕೊಂಡಿದ್ದು, ತಮಗಿದ್ದ 3 ಎಕರೆ ಪ್ರದೇಶದಲ್ಲಿ ಕೃಷಿ ಮಾಡಿಕೊಂಡಿದ್ದರು. ಅತ್ತೆ ಮುತ್ತಮ್ಮ ಅವರ ಜೊತೆಗಿದ್ದುಕೊಂಡು ಜೀವನ ಸಾಗಿಸುತ್ತಿದ್ದ ಇವರು, ಕೃಷಿ ಮತ್ತು ಮನೆ ನಿರ್ವಹಣೆಗಾಗಿ ದೊಡ್ಡಬ್ಯಾಡರಹಳ್ಳಿ ಕಾವೇರಿ ಗ್ರಾಮೀಣ ಬ್ಯಾಂಕ್ ಮತ್ತು ಸ್ಥಳೀಯ ಲೇವಾದೇವಿಗಾರರಿಂದ ಸುಮಾರು 4 ಲಕ್ಷ ರುಪಾಯಿ ಸಾಲ ಮಾಡಿದ್ದರು.[ಡಿ.ಕೆ.ರವಿ ಸಾವು ಆತ್ಮಹತ್ಯೆ: ಅಂತಿಮ ಶರಾ ಬರೆದ ಸಿಬಿಐ]

ಕಳೆದ ವರ್ಷದಿಂದ ಮಳೆ ಕೈಕೊಟ್ಟು, ಜಮೀನಿಗೆ ನೀರು ಹರಿಯದೆ ಬರ ಕಾಣಿಸಿಕೊಂಡಿತ್ತು. ಹೀಗಾಗಿ ಕೃಷಿಗೆ ತಕ್ಕ ಪ್ರತಿಫಲ ದೊರೆಯದೆ ಕೈ ಸುಟ್ಟುಕೊಂಡಿದ್ದರು. ಅಲ್ಲದೆ ಸಾಲ ಕೊಟ್ಟವರು ಕೇಳಲಾರಂಭಿಸಿದ್ದರು. ಮಾಡಿದ ಸಾಲವನ್ನು ತೀರಿಸಲು ಸಾಧ್ಯವಾಗದ ಕಾರಣ ಕಂಗಾಲಾಗಿದ್ದರು.[ಮದ್ದೂರು: ಬಾರದ ನೀರಿಗಾಗಿ ಮರ ಏರಿ ಆತ್ಮಹತ್ಯೆಗೆ ಯತ್ನಸಿದ ರೈತ]
ಐದು ದಿನಗಳ ಹಿಂದೆ ಲತಾ ನಾಪತ್ತೆಯಾಗಿದ್ದರು. ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಸುಳಿವು ದೊರೆತಿರಲಿಲ್ಲ. ಆದರೆ ಬುಧವಾರ ಗ್ರಾಮದ ಹೊರವಲಯದ ಬಾವಿಯಲ್ಲಿ ಅವರ ಶವ ಪತ್ತೆಯಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಹನುಮಂತರಾಯಪ್ಪ ಹಾಗೂ ಪೊಲೀಸರು ಭೇಟಿ ನೀಡಿ ಶವದ ಮಹಜರು ನಡೆಸಿದರು. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ವಾರಸುದಾರರಿಗೆ ನೀಡಲಾಯಿತು. ಘಟನೆಗೆ ಸಂಬಂಧಿಸಿದಂತೆ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.











Click it and Unblock the Notifications