ಬೇಡಿಕೆ ಈಡೇರದಿದ್ದರೆ ಗಣರಾಜ್ಯ ದಿನದಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಮೆರವಣಿಗೆ
ನವದೆಹಲಿ, ಜನವರಿ 2: ಕೃಷಿ ಕಾಯ್ದೆಗಳ ವಿರುದ್ಧದ ತಮ್ಮ ಬೇಡಿಕೆಗಳು ಈಡೇರದೆ ಹೋದರೆ ಗಣರಾಜ್ಯೋತ್ಸವದ ವೇಳೆಗೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಸುಮಾರು 40 ರೈತ ಒಕ್ಕೂಟಗಳನ್ನು ಒಳಗೊಂಡ ಜಂಟಿ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ಎಚ್ಚರಿಕೆ ನೀಡಿದೆ. ದೆಹಲಿ ಗಡಿಯಲ್ಲಿ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರು, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ತಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರ ಒಪ್ಪದೆ ಹೋದರೆ ರಾಜಧಾನಿಗೆ ಟ್ರ್ಯಾಕ್ಟರ್ ಮೆರವಣಿಗೆ ಮಾಡುವುದಾಗಿ ಶನಿವಾರ ತಿಳಿಸಿದೆ.
ಗಣರಾಜ್ಯೋತ್ಸವ ದಿನದಂದು ಸೇನಾ ಪಡೆಗಳ ಪಥಸಂಚಲನದ ಜತೆ ಕಿಸಾನ್ ಪಥಸಂಚಲನ ನಡೆಯಲಿದೆ. ಇದು ಗಣರಾಜ್ಯೋತ್ಸವದ ಮರುದಿನ ನಡೆಯಲಿದೆ ಎಂದು ರೈತ ಮುಖಂಡ ದರ್ಶನ್ ಪಾಲ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರ ಮತ್ತು ರೈತರ ನಡುವೆ ಜನವರಿ 4ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಈ ಬಾರಿ ಕೂಡ ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುವಲ್ಲಿ ಸರ್ಕಾರ ವಿಫಲವಾದರೆ ಮುಂದಿನ ನಡೆಯನ್ನು ಖಂಡಿತವಾಗಿಯೂ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ.

ರೈತರ ಶೇ 50ರಷ್ಟು ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ ಎಂಬ ಹೇಳಿಕೆ ಶುದ್ಧ ಸುಳ್ಳು. ನಮಗೆ ಅಧಿಕೃತವಾಗಿ ಲಿಖಿತ ರೂಪದಲ್ಲಿ ಏನೂ ಸಿಕ್ಕಿಲ್ಲ ಎಂದು ಸ್ವರಾಜ್ ಇಂಡಿಯಾ ಮುಖಂಡ ಯೋಗೇಂದ್ರ ಯಾದವ್ ಹೇಳಿದ್ದಾರೆ.
'ನಮ್ಮ ಕೊನೆಯ ಸಭೆಯಲ್ಲಿ ಎಂಎಸ್ಪಿಗೆ ನಮ್ಮ 23 ಬೆಳೆಗಳನ್ನು ಖರೀದಿ ಮಾಡುತ್ತೀರಾ ಎಂದು ಸರ್ಕಾರವನ್ನು ಪ್ರಶ್ನಿಸಿದ್ದೆವು. ಅವರು ಇಲ್ಲ ಎಂದಿದ್ದರು. ಹಾಗಿದ್ದ ಮೇಲೆ ದೇಶದ ಜನತೆಗೆ ಏಕೆ ನೀವು ಸುಳ್ಳು ಮಾಹಿತಿ ನೀಡುತ್ತಿದ್ದೀರಿ? ಇದುವರೆಗೂ ಪ್ರತಿಭಟನೆಯಲ್ಲಿ 50ಕ್ಕೂ ಹೆಚ್ಚು ಜನರು ಹುತಾತ್ಮರಾಗಿದ್ದಾರೆ' ಎಂದು ರೈತ ನಾಯಕ ಗುರ್ನಮ್ ಸಿಂಗ್ ಚೋಡುಣಿ ಹೇಳಿದ್ದಾರೆ.












Click it and Unblock the Notifications