ಸರ್ಕಾರಕ್ಕೆ ಇದು ಕೊನೆ ಅವಕಾಶ: ರೈತ ಸಂಘಟನೆಗಳ ಎಚ್ಚರಿಕೆ
ನವದೆಹಲಿ, ಡಿಸೆಂಬರ್ 2: ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ನೀಡಿವೆ. ಡಿ.3ರಂದು ನಡೆಯಲಿರುವ ಮಾತುಕತೆಯು ಸರ್ಕಾರಕ್ಕೆ ಕೊನೆಯ ಅವಕಾಶವಾಗಲಿದೆ ಎಂದು ಹೇಳಿವೆ.
ಈ ಪ್ರತಿಭಟನೆಯು ಪಂಜಾಬ್ನ ರೈತರ ಚಳವಳಿಯಷ್ಟೇ ಎಂದು ಬಿಂಬಿಸಲು ಸರ್ಕಾರ ಪ್ರಯತ್ನಿಸಿದೆ. ಸರ್ಕಾರ ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಕ್ರಾಂತಿಕಾರಿ ಕಿಸಾನ್ ಒಕ್ಕೂಟದ ಅಧ್ಯಕ್ಷ ಡಾ. ದರ್ಶನ್ ಪಾಲ್ ಆರೋಪಿಸಿದ್ದಾರೆ.
ಎಲ್ಲ ಮೂರೂ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಹೊಸ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಸಂಸತ್ನ ವಿಶೇಷ ಅಧಿವೇಶನ ಕರೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನಾವು ಇಡೀ ದೇಶದ ಎಲ್ಲ ಕಡೆಗಿನ ರೈತ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಬೇಕು ಎಂದು ನಿರ್ಧರಿಸಿದ್ದೇವೆ. ಡಿ. 5ರಂದು ನಾವು ದೇಶವ್ಯಾಪಿ ಪ್ರತಿಭಟನೆಯನ್ನು ನಡೆಸಲಿದ್ದೇವೆ. ನರೇಂದ್ರ ಮೋದಿ ಸರ್ಕಾರ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಪ್ರತಿಕೃತಿಗಳನ್ನು ದಹಿಸಲಿದ್ದೇವೆ. ನಾಳೆನ ಮಾತುಕತೆಯು ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರಕ್ಕೆ ಇರುವ ಕೊನೆಯ ಅವಕಾಶ. ಇಲ್ಲದಿದ್ದರೆ ಈ ಚಳವಳಿ ಇನ್ನಷ್ಟು ದೊಡ್ಡದಾಗಲಿದೆ. ಈ ಸರ್ಕಾರ ಪತನಗೊಳ್ಳಲಿದೆ ಎಂದು ಲೋಕ ಸಂಘರ್ಷ ಮೋರ್ಚಾದ ಪ್ರತಿಭಾ ಶಿಂಧೆ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾದರೆ ನಾವು ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ರಾಜಧಾನಿ ದೆಹಲಿಯ ಇತರೆ ಎಲ್ಲ ರಸ್ತೆಗಳಿಗೂ ತಡೆಯೊಡ್ಡುತ್ತೇವೆ ಎಂದು ರೈತ ಸಂಘಟನೆಗಳು ಬೆದರಿಕೆ ಒಡ್ಡಿವೆ.












Click it and Unblock the Notifications