12 ಎಕರೆಯಲ್ಲಿ ಹತ್ತಿ ಬಿತ್ತನೆ: ಕೈಕೊಟ್ಟ ಮಳೆಯಿಂದ ಬೆಳೆ ಉಳಿಸಿಕೊಳ್ಳಲು ರೈತನ ಹರಸಾಹಸ
ರಾಯಚೂರು ಜುಲೈ 12: ರಾಯಚೂರು ಜಿಲ್ಲೆಯಲ್ಲಿ ಇರುವುದು ಎರಡೇ ಕಾಲ. ಒಂದು ಬೇಸಿಗೆ ಕಾಲ, ಇನ್ನೊಂದು ಕಡು ಬೇಸಿಗೆ ಕಾಲ ಎನ್ನುವುದು ಜಿಲ್ಲೆಯ ಜನರ ಮಾತು. ಬಿಸಿಲನಾಡು ಎಂದೇ ಹೆಸರುವಾಸಿಯಾಗಿರುವ ರಾಯಚೂರು ಜಿಲ್ಲೆಯಲ್ಲಿ ಮಳೆ ಬರುವುದು ಅಪರೂಪವಾಗಿದೆ.
ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದ್ದರೂ ಕೂಡ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ. ಮುಂಗಾರು ಮಳೆ ಆರಂಭವಾದಾಗ ಸುರಿದ ಅಲ್ಪ ಮಳೆಗೆ ಮಳೆಯಾಶ್ರಿತ ಪ್ರದೇಶದ ಒಣ ಭೂಮಿಯಲ್ಲಿ ರೈತರು ಹತ್ತಿ, ಮೆಣಸಿನಕಾಯಿ ಮತ್ತು ತೊಗರಿ ಬಿತ್ತನೆ ಮಾಡಿ, ಮಳೆಗಾಗಿ ಮುಗಿಲು ನೋಡುತ್ತಾ ಕುಳಿತಿದ್ದಾರೆ.

ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ನೀಲೋಗಲ್ ಗ್ರಾಮದ ರೈತ 12 ಎಕರೆ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದಾರೆ. ಬಿತ್ತಿದ ಹತ್ತಿ ಬೆಳೆಗಳು ಮೊಳಕೆ ಹೊಡೆದು ಬೆಳೆದು ನಿಂತಿದ್ದು, ಮಳೆ ಬಾರದೆ ಇರುವುದರಿಂದ ಬೆಳೆಗಳು ಬಾಡತೊಡಗಿವೆ. ಇದರಿಂದ ರೈತ ಆಂತಕಕ್ಕೊಳಗಾಗಿದ್ದಾನೆ.
12 ಎಕರೆ ಪ್ರದೇಶದಲ್ಲಿ ಸಿರವಾರ ತಾಲೂಕಿನ ನೀಲೋಗಲ್ ಗ್ರಾಮದ ಸಿದ್ದರೆಡ್ಡಿ ಎಂಬುವ ರೈತ ಲಕ್ಷಗಟ್ಟಲೆ ಸಾಲ ಮಾಡಿ ಹತ್ತಿ ಬೀಜ ತಂದು ನಾಟಿ ಮಾಡಿದ್ದಾರೆ. ಮಳೆಬಾರದೆ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ಆಷಾಢ ಮಾಸ ಇರುವುದರಿಂದ ಬರಿ ಗಾಳಿ ಬೀಸುತ್ತಿದ್ದು, ಬೆಳೆ ಬಾಡತೊಡಗಿವೆ. ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕಾಗಿ ರೈತರು ಟ್ಯಾಂಕರ್ ಮೂಲಕ ನೀರು ತಂದು ಹಾಕಿ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ ರೈತರಿಗೆ ಇದು ಬಹಳ ದುಬಾರಿಯಾಗುತ್ತಿದೆ.

ಅಲ್ಲದೇ ಮಳೆ ಬಾರದೆ ಇರುವುದರಿಂದ ಕೆಲವು ಕಡೆಗಳಲ್ಲಿ ಬೀಜ ನಾಟಿಯಾಗದ ಖಾಲಿ ಇದ್ದ ಜಾಗದಲ್ಲಿ ಪುನಃ ಬೀಜಗಳ ಬಿತ್ತನೆ ಮಾಡುತ್ತಿದ್ದಾರೆ. ಇನ್ನು ರಾಯಚೂರು ತಾಲೂಕಿನ ಚಂದ್ರಬಂಡ, ಕಡಗಂದೊಡ್ಡಿ ಗ್ರಾಮದ ರೈತರು ಹತ್ತಿ ಬೀತ್ತನೆ ಮಾಡಿದ್ದು ಕಳಪೆ ಬೀಜದಿಂದ ಹತ್ತಿ ಬೆಳೆಗೆ ಕೆಂಪು ರೋಗ ಬಂದಿದ್ದು, ಲಕ್ಷ್ಮಣ್ಣಗೌಡ ಕಡಗಂ ದೊಡ್ಡಿಯ ರೈತ 12 ಎಕರೆ ಹೊಲದಲ್ಲಿ ಹಸುಗಳನ್ನು ಬಿಟ್ಟು ಬೆಳೆ ನಾಶಮಾಡಿದ್ದಾರೆ.
ತಮ್ಮ ಸಂಕಷ್ಟದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರೆಡ್ಡಿ 'ಬಾಡಿರುವ ಸಸಿಗಳಿಗೆ ನೀರು ಹಾಕುತ್ತಿದ್ದೆವೆ. ಮೂರ್ನಾಲ್ಕು ದಿನದಲ್ಲಿ ಮಳೆ ಬರದಿದ್ದರೆ ಎಲ್ಲಾ ಸಸಿಗಳಿಗೆ ನೀರು ಹಾಕಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈಗ ಬೆಳೆ ಉಳಿಸಿಕೊಳ್ಳವ ಸ್ಥಿತಿ ಬಂದಿದೆ' ಎಂದು ಹೇಳಿದ್ದಾರೆ. ಮಳೆ ಕೊರತೆ ಉತ್ತರ ಕರ್ನಾಟಕದ ಬಹುಭಾಗವನ್ನು ಬಾಧಿಸುತ್ತಿದ್ದು ಒಂದೊಂದು ಕಡೆ ಒಂದೊಂದು ರೀತಿಯ ಸಮಸ್ಯೆ ಉದ್ಭವಿಸಿದೆ. ಈಗಾಗಲೇ ಬಿತ್ತನೆ ಮಾಡಬೇಕಿದ್ದ ರೈತರು ಮಳೆ ಕಾಣದೆ ಕಂಗಾಲಾಗಿದ್ದಾರೆ.












Click it and Unblock the Notifications