ರೈಲು ಹಳಿ ತಡೆಯ ಎಚ್ಚರಿಕೆ ನೀಡಿದ ರೈತರು: ಮತ್ತೆ ಮಾತುಕತೆಗೆ ಕರೆದ ಸರ್ಕಾರ
ನವದೆಹಲಿ, ಡಿಸೆಂಬರ್ 10: ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಭರವಸೆ ಹಾಗೂ ಕೃಷಿ ಕಾಯ್ದೆಗಳ ಇತರೆ ನಿಯಮಗಳಿಗೆ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ಲಿಖಿತ ಪ್ರಸ್ತಾವವನ್ನು ರೈತ ಒಕ್ಕೂಟಗಳು ತಿರಸ್ಕರಿಸಿದ ಮರುದಿನ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಪ್ರತಿಭಟನೆ ನಿಲ್ಲಿಸಿ ಸಂಧಾನ ಮಾತುಕತೆಗೆ ಮರಳುವಂತೆ ರೈತರಿಗೆ ಮನವಿ ಮಾಡಿದ್ದಾರೆ.
ಆದರೆ, ತಮ್ಮ ಬೇಡಿಕೆಗಳು ಈಡೇರದೆ ಹೋದರೆ ಮುಂದೆ ರೈಲು ಹಳಿಗಳಿಗೆ ತಡೆಯೊಡ್ಡುವುದಾಗಿ ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
ಪ್ರಸ್ತುತ ಮಾತುಕತೆಯಲ್ಲಿ ಬಿಗಿಪಟ್ಟು ಇದ್ದರೂ ಸೂಕ್ತ ಪರಿಹಾರ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಪ್ರತಿಭಟನಾನಿರತ ರೈತರ ಜತೆ ಮುಂದಿನ ಚರ್ಚೆಗಳನ್ನು ನಡೆಸಲು ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.

ಆದರೆ ಮೂರು ಕಠಿಣ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂಬ ರೈತರ ಬೇಡಿಕೆಯನ್ನು ಒಪ್ಪಿಕೊಳ್ಳಲು ಅವರು ನಿರಾಕರಿಸಿದ್ದಾರೆ. ಹೊಸ ಕಾಯ್ದೆಗಳಲ್ಲಿ ರೈತರಿಗೆ ಎಲ್ಲಿ ಸಮಸ್ಯೆಗಳಿವೆಯೋ ಅದರ ಬಗ್ಗೆ ಮುಕ್ತವಾಗಿ ಚರ್ಚಿಸಲು ಸರ್ಕಾರ ಸಿದ್ಧವಿದೆ. ಅವರ ಎಲ್ಲ ಗ್ರಹಿಕೆಗಳಿಗೂ ನಾವು ಸ್ಪಷ್ಟನೆ ಕೊಡಲು ಬಯಸಿದ್ದೇವೆ ಎಂದು ತಿಳಿಸಿದ್ದಾರೆ.
ತಮ್ಮ ಬೇಡಿಕೆಗಳು ಈಡೇರದೆ ಹೋದರೆ ರೈಲು ಹಳಿಗಳಿಗೆ ತಡೆಯೊಡ್ಡಲಾಗುವುದು. ಅದರ ದಿನಾಂಕದ ಬಗ್ಗೆ ಚರ್ಚಿಸಿ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ರೈತರು ಹೇಳಿದ್ದಾರೆ.
'ಈ ಕಾಯ್ದೆಗಳು ವ್ಯಾಪಾರಿಗಳಿಗಾಗಿ ಮಾಡಿದ್ದು ಎಂದು ಸರ್ಕಾರ ಒಪ್ಪಿಕೊಂಡಿದೆ. ಕೃಷಿ ಮುಖ್ಯ ವಿಷಯವಾಗಿದ್ದರೆ, ಅದಕ್ಕೆ ಶಾಸನ ರೂಪಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿಲ್ಲ' ಎಂದು ಆರೋಪಿಸಿದ್ದಾರೆ.












Click it and Unblock the Notifications