ಮಂಡ್ಯದಲ್ಲಿ ರೈತರ ಆತ್ಮಹತ್ಯೆ ನಿಲ್ಲುತ್ತಿಲ್ಲ ಏಕೆ?
ಮಂಡ್ಯ,
ಜೂನ್ 18: ಮಳೆಯಾಗದೆ, ಬೆಳೆಯಿಲ್ಲದೆ ಮಾಡಿದ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಮಂಡ್ಯ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇವೆ. ಸರ್ಕಾರ ಸಾಲಮನ್ನಾ ಯೋಜನೆ ಘೋಷಣೆ ಮಾಡಿದರೂ, ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ನಿಂತಿಲ್ಲ. ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಜಿಲ್ಲೆ ಮಂಡ್ಯ ಎಂಬ ಕುಖ್ಯಾತಿ ಪಡೆದಿರುವುದು ಬೇಸರದ ಸಂಗತಿ. id="toptextpromo"> id='are-slot-1' class='oiad oi-axt oiadv'>2015
ರಿಂದ ಜಿಲ್ಲೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಶ್ರೀರಂಗಪಟ್ಟಣ ತಾಲ್ಲೂಕಿನ ರೈತ ನಾಗೇಂದ್ರ ಅವರಿಂದ ಶುರುವಾದ ಆತ್ಮಹತ್ಯೆ ಪ್ರಕರಣದಿಂದ ನಿನ್ನೆ ಕೆ.ಆರ್.ಪೇಟೆ ತಾಲ್ಲೂಕಿನ ಅಘಲಯ ಗ್ರಾಮದ ಸುರೇಶ್ ವರೆಗೂ ಮುಂದುವರೆದಿದೆ. id='are-slot-2' class='oiad oi-axt oiadv'>
ರೈತರ ಕಾಪಾಡಲು ಸುರೇಶ್ ಮನವಿ
ಸಾಲಬಾಧೆಯಿಂದ ನರಳುತ್ತಿದ್ದ ರೈತ ಸುರೇಶ್ ವಿಡಿಯೋ ಮಾಡುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಂದೇಶ ರವಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರನ್ನು ಕಾಪಾಡಿ ಎಂದು ವಿಡಿಯೋದಲ್ಲಿ ಸಿಎಂಗೆ ಮನವಿ ಮಾಡಿದ್ದಾರೆ. ಆದರೆ ಅಧಿಕಾರಕ್ಕೆ ಬರುವ ಯಾವ ಸರ್ಕಾರದಿಂದಲೂ ರೈತರ ಆತ್ಮಹತ್ಯೆ ತಡೆಗಟ್ಟಲು ಸಾಧ್ಯವಾಗಿಲ್ಲ.

ಸಾಲ ಮನ್ನಾ ಘೋಷಣೆ ನಂತರವೂ ಆತ್ಮಹತ್ಯೆ
ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸುಮಾರು 350ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಕಳೆದ ಬಾರಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಹಾಗೂ ಜಾ.ದಳ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಾಲಮನ್ನಾ ಯೋಜನೆ ಘೋಷಿಸಿದರು. ಸಾಲಮನ್ನಾ ಘೋಷಣೆ ನಡುವೆಯೂ 2018ರಲ್ಲಿ ಸುಮಾರು 57 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ 12 ಪ್ರಕರಣಗಳು ತಿರಸ್ಕೃತವಾದರೆ, ಉಳಿದ 45 ಪ್ರಕರಣಗಳಲ್ಲಿ ಮೃತ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ.
ಇದರ ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಲಿನಲ್ಲಿ ಸಹಕಾರ ಬ್ಯಾಂಕ್ ಗಳಲ್ಲಿ 50 ಸಾವಿರದವರೆಗಿನ ಸಾಲ ಮನ್ನವನ್ನೇನೋ ಘೋಷಣೆ ಮಾಡಿತ್ತು. ಆದರೂ 110 ಮಂದಿ ರೈತರು ಆತ್ಮಹತ್ಯೆ ದಾರಿಯನ್ನು ಹಿಡಿದಿದ್ದರು. ಇದರಲ್ಲಿ 26 ಪ್ರಕರಣ ತಿರಸ್ಕೃತಗೊಂಡರೆ ಉಳಿದ 84 ಪ್ರಕರಣಗಳಲ್ಲಿ ಮೃತ ರೈತ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. ಪ್ರಸಕ್ತ ವರ್ಷ ಯಾವುದೇ ಆತ್ಮಹತ್ಯೆ ಪ್ರಕರಣ ವರದಿಯಾಗಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಬೆಳೆ ಬೆಳೆಯಲು ನೀರಿಲ್ಲ
ಈ ಹಿಂದೆ, 150 ಅಡಿಗಳಿಗೆ ಬಾವಿ ತೋಡಿದರೆ ಸಾಕು ನೀರು ಸಿಗುತ್ತಿತ್ತು. ಆದರೆ ಇಂದು ಸಾವಿರ ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುವುದು ಅಸಾಧ್ಯವಾಗಿದೆ. ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಸಾಲ ಮಾಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ನಾಲೆಗಳ ಲೈನಿಂಗ್ ಆದ ಬಳಿಕ ನಾಲಾ ಬಯಲು ಪ್ರದೇಶದಲ್ಲಿ ಅಂತರ್ಜಾಲ ಕ್ಷೀಣವಾಗಿದೆ. ತಕ್ಕಮಟ್ಟಿಗೆ ಕೊಳವೆ ಬಾವಿ ಆಶ್ರಯಿಸಿದ್ದ ರೈತರಿಗೆ ಈಗ ಅದು ಕೈಗೆಟುಕದಂತಾಗಿದೆ.

ಬಹುತೇಕ ಕೆರೆಗಳು ಖಾಲಿ ಖಾಲಿ
ಕೆಆರ್ ಎಸ್ ಅಣೆಕಟ್ಟೆಯಾದ ಬಳಿಕ ನಳನಳಿಸುತ್ತಿದ್ದ ಮಂಡ್ಯ ಭಾಗದ ಕೆರೆ ಕಟ್ಟೆಗಳು ಇಂದು ಖಾಲಿ ಹೊಡೆಯುತ್ತಿವೆ. 2018-19ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೆಆರ್ಎಸ್ ಜಲಾಶಯ ಭರ್ತಿಯಾಗಿತ್ತು. ಅಲ್ಲಲ್ಲಿ ಕೆಲವೊಂದಿಷ್ಟು ಕೆರೆಗಳು ಭರ್ತಿಯಾಗಿದ್ದವು. ಆದರೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇಂದು ಎಲ್ಲ ಕೆರೆಗಳು ನೀರಿಲ್ಲದೆ ಸೊರಗುತ್ತಿವೆ. ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕೆರೆಗಳಿವೆ. ಆದರೆ ಅದರಲ್ಲಿ ಭಾಗಶಃ ಎಲ್ಲಾ ಕೆರೆಗಳು ಖಾಲಿ ಹೊಡೆಯುತ್ತಿದ್ದು, ರೈತ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾನೆ. ಇನ್ನಾದರೂ ಸರ್ಕಾರ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುವುದೇ ಕಾದು ನೋಡಬೇಕಿದೆ.












Click it and Unblock the Notifications