ಹಾಲಿನ ಉತ್ಪನಗಳ ಮೇಲಿನ ಆಮದು ಸುಂಕ ನೀತಿ ಖಂಡಿಸಿ ರಸ್ತೆ ತಡೆದ ರೈತರು
ರಾಮನಗರ, ಅಕ್ಟೋಬರ್ 24: ಕೇಂದ್ರ ಸರ್ಕಾರ ವಿದೇಶಿ ಹಾಲು ಹಾಗೂ ಹಾಲು ಉತ್ಪನ್ನಗಳ ಮೇಲಿನ ಸುರಿ ಸುಂಕ ರದ್ದು ಮಾಡಿ ಭಾರತಕ್ಕೆ ಆಮದು ಮಾಡಿಕೊಳ್ಳುವ ನಿರ್ಧಾರ ಮಾಡಿದ್ದು ಈ ನಡೆಯನ್ನು ವಿರೋಧಿಸಿ ಇಂದು ರಾಮನಗರ ಜಿಲ್ಲೆಯ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ರಾಮನಗರದ ಕಂದಾಯ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ದನಕರುಗಳನ್ನು ರಸ್ತೆಯಲ್ಲಿ ಹಿಡಿದುಕೊಂಡು ಮೆರವಣಿಗೆ ನಡೆಸಿದರು.
ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಬೇಕೆಂದು ರೈತರು ಕಚೇರಿಯ ಬಳಿ ಬಂದಾಗ ಪೊಲೀಸರು ಕಚೇರಿಯ ಒಳಗೆ ಪ್ರವೇಶ ನೀಡಲು ನಿರಾಕರಿಸಿ ಗೇಟ್ ಬಂದ್ ಮಾಡಿದರು. ಈ ವೇಳೆ ರೊಚ್ಚಿಗೆದ್ದ ರೈತರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಈ ವೇಳೆ ರೈತರನ್ನು ಸಮಾಧಾನಪಡಿಸಿ ಕಚೇರಿಯ ಒಳಗೆ ಪ್ರವೇಶ ನೀಡಿದರು. ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಸ್ಥಳಕ್ಕೆ ಬಂದು ರೈತರ ಮನವಿ ಸ್ವೀಕರಿಸಿದರು. ಇವತ್ತು ನಡೆದ ಹೋರಾಟದಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಿಂದ ರೈತರು, ಹಾಲು ಉತ್ಪಾದಕರು ಸೇರಿದಂತೆ ವಿವಿಧ ಪಕ್ಷದ ರಾಜಕೀಯ ಮುಖಂಡರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ರೈತ ಸಂಘದ ಮುಖಂಡ ಎಂ.ರಾಮು, "ಕೇಂದ್ರ ಸರ್ಕಾರ ಹೈನುಗಾರಿಕೆ ಉದ್ಯಮವನ್ನು ಮುಕ್ತ ಮಾರುಕಟ್ಟೆ ನೀತಿಯಿಂದ ಹೊರಗಿಡಬೇಕು, ಇಲ್ಲವಾದಲ್ಲಿ ಹೈನುಗಾರಿಕೆಯನ್ನೇ ನಂಬಿರುವ ರಾಜ್ಯದ 80% ಜನ ಉದ್ಯೋಗ ಕಳೆದುಕೊಂಡು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳ ಬೇಕಾಗುತ್ತದೆ. ಇದನ್ನು ಮನಗಂಡು ಕೇಂದ್ರ ಸರ್ಕಾರ ಹಾಲಿನ ಮೇಲಿನ ಪ್ರಸಕ್ತ ವಿಧಿಸುತ್ತಿರುವ ಸುಂಕವನ್ನು ರದ್ದು ಮಾಡದೆ ಮುಂದುವರೆಸೆಬೇಕು" ಎಂದು ಒತ್ತಾಯಿಸಿದರು.












Click it and Unblock the Notifications