ರೀ ಸ್ವಾಮಿ.. ಬರೀ 5 ಲಕ್ಷ ಅಲ್ಲ 50 ಕೋಟಿ ರೂ. ಕೊಡ್ತೀವಿ ನೀನೇ ಆತ್ಮಹತ್ಯೆ ಮಾಡ್ಕೋ: ಸಕ್ಕರೆ ಸಚಿವರಿಗೆ ರೈತರಿಂದ ಆಫರ್
ಚಾಮರಾಜನಗರ, ಸೆಪ್ಟೆಂಬರ್, 06: ಪರಿಹಾರದ ಆಸೆಗೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಸಕ್ಕರೆ ಸಚಿವರ ಹೇಳಿಕೆ ಖಂಡಿಸಿ ಇಂದು ಕಬ್ಬು ಬೆಳೆಗಾರರು ಚಾಮರಾಜನಗರದಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಅಲ್ಲದೆ ಸಚಿವರಿಗೆ ಒಂದು ಆಫರ್ ಅನ್ನು ಕೂಡ ನೀಡಿದ್ದಾರೆ. ಹಾಗಾದರೆ ಆ ಆಫರ್ ಏನು ಅಂತೀರಾ ಇಲ್ಲಿದೆ ನೋಡಿ ವಿವರ.
ಚಾಮರಾಜನಗರ ಜಿಲ್ಲಾಡಳಿತ ಭವನದ ಎದುರು ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಭಾಗ್ಯರಾಜು ನೇತೃತ್ವದಲ್ಲಿ ಕಾವೇರಿ ನೀರು ನಿಲ್ಲಿಸುವಂತೆ ಹಾಗೂ ಶಿವಾನಂದ ಪಾಟೀಲ್ ಹೇಳಿಕೆ ಖಂಡಿಸಿ ಅರೆ ಬೆತ್ತಲೆಯಾಗಿ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದರು.

ಇದೇ ವೇಳೆ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಓರ್ವ ಅವಿವೇಕಿ, ನಾವು ಅವರಿಗೆ ಆಫರ್ ಕೊಡುತ್ತಿದ್ದೇವೆ. 50 ಕೋಟಿ ರೂಪಾಯಿ ಕೊಡುತ್ತೇವೆ ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಹೋರಾಟಗಾರರು ಕಿಡಿಕಾರಿದರು.
ಸಕ್ಕರೆ ಸಚಿವರಿಗೆ ತಿರುಗೇಟು ಕೋಡೋದಲ್ಲ ಅವನು ಅವಿವೇಕಿ, ರಾಜ್ಯದಲ್ಲಿ 950 ಕೋಟಿ ರೂಪಾಯಿ ಕಬ್ಬಿನ ಬಾಕಿ ಬಿಲ್ ಕೊಡಬೇಕಿದೆ. ಅದನ್ನು ಕೊಡುವ ಯೋಗ್ಯತೆ ಅವನಿಗಿಲ್ಲ, ನಾವು 50 ಕೋಟಿ ರೂಪಾಯಿ ಕೊಡುತ್ತೇವೆ ಆತ್ಮಹತ್ಯೆ ಮಾಡಿಕೊಳ್ಳೂತ್ತಾರಾ?, ಎಲ್ಲ ರೈತರು ಭಿಕ್ಷೆ ಬೇಡಿ 50 ಕೋಟಿ ಕೊಡುತ್ತೇವೆ ಆತ್ಮಹತ್ಯೆ ಮಾಡಿಕೊಳ್ತಾನಾ ಅವನು ಎಂದು ಪ್ರತಿಭಟನಾಕಾರರು ಏಕವಚನದಲ್ಲೇ ಹರಿಹಾಯ್ದರು.
ಇದುವರೆಗೆ ಒಬ್ಬ ಸಚಿವ, ಕಬ್ಬಿನ ಕಾರ್ಖಾನೆ ಮಾಲೀಕ ಆತ್ಮಹತ್ಯೆ ಮಾಡಿಕೊಂಡಿಲ್ಲ. ವರ್ಷ ವರ್ಷ ನಿಮ್ಮ ಆದಾಯ ದ್ವಿಗುಣ ಆಗುತ್ತಿದೆ, ಆದರೆ ರೈತರ ಆದಾಯ ದ್ವಿಗುಣ ಆಗುತ್ತಾ..? ರೈತರಿಗೆ ಏನು ಕೊಡುತ್ತೀರಿ ನೀವು ? ನೀವು ಅಧಿಕಾರಕ್ಕೆ ಬರುವಾಗ ಸಲ್ಲಿಸುವ ಅಫಿಡವಿಟ್ನಲ್ಲಿ ಪ್ರತಿವರ್ಷ ನಿಮ್ಮ ಆದಾಯ ಮಾತ್ರ ದ್ವಿಗುಣ ಆಗುತ್ತದೆ ಎಂದು ಕಿಡಿಕಾರಿದರು.
ನೀವು ಕೊಡುವ ಮೂಲಸೌಕರ್ಯ ಏನು ರೈತರ ಕಣ್ಣು, ಬೆನ್ನು, ತಲೆಗೆ ಮೊಳೆ ಹೊಡಿಯುವ ಕೆಲಸ ಮಾಡುತ್ತೀರಿ. ನಾವೇ 50 ಕೋಟಿ ರೂಪಾಯಿ ಕೊಡುತ್ತೇವೆ ಆತ್ಮಹತ್ಯೆ ಮಾಡಿಕೊಳ್ಳಿ. ಪುಟಗೋಸಿ 5 ಲಕ್ಷಕ್ಕೆ ಯಾರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈಗಲೇ ಸಚಿವರು ಕ್ಷಮೆ ಕೇಳ್ಬೇಕು, ಇಲ್ಲವಾದರೆ ಚಾಮರಾಜನಗರಕ್ಕೆ ಬಂದಾಗ ನಾವೇ 50 ಕೋಟಿ ಕೊಡುತ್ತೇವೆ, ಅವರು ಆತ್ಮಹತ್ಯೆ ಮಾಡಿಕೊಳ್ಳಲಿ. ಈ ಬಗ್ಗೆ ನಾವು ಅಭಿಯಾನ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.












Click it and Unblock the Notifications