ರೈತರ ಸಾಲ ಮನ್ನಾ ಮಾಡಲು ಇಷ್ಟೆಲ್ಲಾ ತಯಾರಿ ನಡೆದಿದೆ
Recommended Video

ಬೆಂಗಳೂರು, ಜೂನ್ 20 : ಸಾಲಮನ್ನಾ ಮಾಡಿಯೇ ಸಿದ್ಧ ಎಂದು ಪುನರ್ಉಚ್ಚರಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, 'ಅತ್ಯಂತ ವೈಜ್ಞಾನಿಕ ಮಾನದಂಡಗಳನ್ನು ರೂಪಿಸಿ ರೈತರ ಸಾಲ ಮನ್ನಾ ಮಾಡಲಾಗುವುದು' ಎಂದಿದ್ದಾರೆ.
ಬೆಂಗಳೂರು ವರದಿಗಾರರ ಕೂಟದ ಸಹಯೋಗದೊಡನೆ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಆಯೋಜಿಸಿದ್ದ ಮುಖ್ಯಮಂತ್ರಿಯವರ ಜೊತೆ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾತ್ಯಾತೀತ ಜನತಾದಳ ಪಕ್ಷಕ್ಕೆ ಸಂಪೂರ್ಣ ಬಹುಮತ ಕೊಟ್ಟರೆ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ನೀಡಿದ ಹೇಳಿಕೆಗೆ ತಾವು ಈಗಲೂ ಬದ್ಧ. ತಮ್ಮ ಈ ಬದ್ಧತೆಯಿಂದ ತಾವೆಂದೂ ಹಿಂದಕ್ಕೆ ಸರಿಯುವುದಿಲ್ಲ ಎಂದು ಪುನರುಚ್ಛರಿಸಿದರು.

ಹಣದ ಹೊಂದಾಣಿಕೆಗೆ ಸಮಯ ಬೇಕು
ಹಣ ಹೊಂದಾಣಿಕೆಗೆ ಹಾಗೂ ಸಂಪನ್ಮೂಲ ಕ್ರೋಢಿಕರಣಕ್ಕೆ ಸಮಯದ ಬೇಕಾಗುತ್ತದೆ. ಅನಾವಶ್ಯಕ ವೆಚ್ಚಗಳನ್ನು ಕಡಿಮೆ ಮಾಡುವುದು ಹೇಗೆ ? ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು ಹೇಗೆ ? ಸೋರಿಕೆ ತಡೆ ಹೇಗೆ? ಎಂಬುದಕ್ಕೆ ಪರಿಹಾರ ಕಂಡು ಹಿಡಿಯಲು ಕಾಲಾವಕಾಶದ ಅಗತ್ಯವಿದೆ ಎಂದು ಕುಮಾರಸ್ವಾಮಿ ಹೇಳಿದರು.

ನಮ್ಮದು ಬಹುಮತದ ಸರ್ಕಾರವಲ್ಲ
ತಮ್ಮದು ಸಂಪೂರ್ಣ ಬಹುಮತದ ಸರ್ಕಾರವಲ್ಲ. ಸಮ್ಮಿಶ್ರ ಸರ್ಕಾರ. ಈ ಹಿನ್ನೆಲೆಯಲ್ಲಿ ಇಂತಹ ಪ್ರಮುಖ ನಿಲುವು-ನಿರ್ಧಾರಗಳನ್ನು ಒಮ್ಮೆಲೇ ಕೈಗೊಳ್ಳುವುದು ಕಷ್ಟವಾಗುತ್ತದೆ ಎಂದ ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಸಾಲ ಮನ್ನಾ ಘೋಷಣೆಯಿಂದ ತಾವು ಹಿಂದೆ ಸರಿಯುವುದಿಲ್ಲ ಎಂದರು.

ಪ್ರಧಾನಿಗೆ ಮನವಿ
ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಹಿನ್ನೆಲೆಯಲ್ಲಿ ಬಾಂಡ್ ಮೂಲಕ ಎರಡು ಲಕ್ಷ ಕೋಟಿ ರೂ. ಸಂಗ್ರಹಿಸಲು ಕೇಂದ್ರ ಸರ್ಕಾರವು ಬ್ಯಾಂಕ್ಗಳಿಗೆ ಅವಕಾಶ ಕಲ್ಪಿಸಿರುವ ಮಾದರಿಯಲ್ಲೇ ಸಾಲದ ಸಂಕಷ್ಟದಿಂದ ರೈತರನ್ನು ಪಾರು ಮಾಡಲು ಈ ಮೊತ್ತದಲ್ಲಿ ಕನಿಷ್ಠ ಶೇಕಡಾ 25 ರಷ್ಟು ಮೀಸಲಿರಿಸಲು ಪ್ರಧಾನಿಗೆ ಎಂದು ಮನವಿ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.

ರಾಷ್ಟ್ರೀಕೃತ ಬ್ಯಾಂಕ್ಗಳ ಮುಖ್ಯಸ್ಥರ ಸಭೆ
ಇನ್ನೆರಡು ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗಳ ಮುಖ್ಯಸ್ಥರ ಸಭೆಯನ್ನು ಆಯೋಜಿಸಿ ರಾಜ್ಯದ ಜನತೆಗೆ ಹೊರೆಯಾಗದಂತೆ ಸಾಲ ಮನ್ನಾ ಮಾಡುವ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸುತ್ತೇನೆ. ರಾಜ್ಯದಲ್ಲಿ ಅಭಿವೃದ್ಧಿ ಪೂರಕ ವಾತಾವರಣವನ್ನು ಮುಂದುವರೆಸುತ್ತೇನೆ ಎಂದರು.

ಉತ್ತರ ಕರ್ನಾಟಕ ರೈತರಿಗೆ ಹೆಚ್ಚು ಲಾಭ
ರೈತರ ಸಾಲ ಮನ್ನಾ ಆದಲ್ಲಿ, ಉತ್ತರ ಕರ್ನಾಟಕದ ರೈತರಿಗೆ ಹೆಚ್ಚು ಲಾಭವಾಗಲಿದೆ ಎಂಬುದು ವಾಸ್ತವ. ಆದರೆ, ಸಾಲ ಮನ್ನಾ ಎಲ್ಲಕ್ಕೂ ಪರಿಹಾರವಲ್ಲ. ಕೃಷಿ ಪದ್ಧತಿಯಲ್ಲಿ ಬದಲಾವಣೆ ತರುವ ಅಗತ್ಯವಿದೆ ಎಂಬುದರ ಅರಿವು ತಮಗಿದೆ. ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರಕಿಸಿಕೊಡುವ, ಉಗ್ರಾಣ ಮತ್ತು ಶೀತಲೀಕರಣ ಸೌಲಭ್ಯ ಕಲ್ಪಿಸುವ, ಆಹಾರ ಸಂಸ್ಕರಣೆ ಹಾಗೂ ಪೊಟ್ಟಣಿಕರಣ ವ್ಯವಸ್ಥೆ ಮತ್ತು ಪದ್ಧತಿಗಳ ಅನುಷ್ಠಾನಕ್ಕೆ ತರುವಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು ಎಂದರು.

ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ
ಕೃಷಿ ಕ್ಷೇತ್ರದಲ್ಲಿ ಹೊಸ ಅವಿಷ್ಕಾರಗಳನ್ನು ಅಳವಡಿಸಿಕೊಂಡಲ್ಲಿ ರೈತರ ಬವಣೆ ಕಡಿಮೆ ಆಗಲಿದೆ. ಮಾವು ಬೆಳೆಗಾರರನ್ನೇ ನೋಡಿ. ನಮ್ಮಲ್ಲಿ 40 ವರ್ಷಗಳ ಕಾಲ ಒಂದೇ ಮಾವಿನ ಗಿಡವನ್ನು ಅವಲಂಭಿಸುವವರೇ ಹೆಚ್ಚಾಗಿದ್ದಾರೆ. ಇತರೆಡೆಗಳಲ್ಲಿ ಒಂಭತ್ತು ವರ್ಷಗಳಿಗೇ ಗಿಡವನ್ನು ತೆಗೆಯುತ್ತಾರೆ. ಇವೆಲ್ಲದರ ಬಗ್ಗೆ ನಾವು ಗಮನಹರಿಸಬೇಕು ಎಂದರು.












Click it and Unblock the Notifications