ನೀರಿಗಾಗಿ ಸನ್ಯಾಸ ಸ್ವೀಕರಿಸಿದ ರೈತ ಮುಖಂಡ
ಗದಗ, ಅಕ್ಟೋಬರ್ 18: ರೈತ ಮುಖಂಡನಾಗಿ ಕಳಸಾ ಬಂಡೂರಿ ಹಾಗೂ ಮಹದಾಯಿ ಹೋರಾಟದಲ್ಲಿ ಕಾಣಿಸಿಕೊಂಡಿದ್ದ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರು ಸೋಮವಾರದಂದು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ.
ರೈತ ಮುಖಂಡ ವೀರೇಶ ಸೊಬರದಮಠ ಅವರು ಹರ ಗುರು ಚರ ಮೂರ್ತಿಗಳ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಕಿಲ್ಲಾ ತೋರಗಲ್ ಗಚ್ಚಿನಮಠದ ಚನ್ನಮ್ಮಲ್ಲ ಶಿವಾಚಾರ್ಯರು ಸನ್ಯಾಸ ದೀಕ್ಷೆ ನೀಡಿ, ಭಕ್ತರ ಜೋಳಿಗೆ ಸಮರ್ಪಿಸಿದರು.

'ಇದು ಹೋರಾಟದ ದೀಕ್ಷೆ, ರೈತರಿಗಾಗಿ ಜೀವನವನ್ನೇ ಮುಡಿಪಾಗಿಡುತ್ತೇನೆ, ಮಹದಾಯಿ, ಕಳಸಾ ಬಂಡೂರಿಗಾಗಿ ನಿರಂತರವಾಗಿ ಆಂದೋಲನ ನಡೆಸಲಾಗುತ್ತಿದೆ. ರಾಜಕೀಯ ನಾಯಕರು ಇದಕ್ಕೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ, ಕಾವೇರಿಗೆ ಕೊಡುತ್ತಿರುವ ಪ್ರಾಮುಖ್ಯತೆಯನ್ನು ಮಹದಾಯಿಗೆ ನೀಡುತ್ತಿಲ್ಲ ಎಂದು ವೀರೇಶ ಸೊಬರದಮಠ ಅವರು ಹೇಳಿದರು.
ಶಿರಹಟ್ಟಿ ಫಕೀರ ಸಿದ್ಧರಾಮ ಸ್ವಾಮಿಗಳು, ಗದಗ ತೋಂಟದ ಸಿದ್ಧಲಿಂಗ ಸ್ವಾಮಿಗಳು, ಅಡ್ನೂರ ದಾಸೋಹ ಮಠದ ಪಂಚಾಕ್ಷರ ಶಿವಾಚಾರ್ಯರು, ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸೇರಿ 25ಕ್ಕೂ ಹೆಚ್ಚು ಮಠಾಧೀಶರು, 4 ಸಾವಿರ ರೈತರು ಈ ಸಂದರ್ಭದಲ್ಲಿ ಹಾಜರಿದ್ದರು.(ಒನ್ಇಂಡಿಯಾ ಸುದ್ದಿ)












Click it and Unblock the Notifications