Arecanut Price: ಅಡಿಕೆ ಧಾರಣೆ ಏರಿಕೆ, ರೈತರು ಫುಲ್ ಖುಷ್
ಶಿವಮೊಗ್ಗ, ಫೆಬ್ರವರಿ 04: ಮುಂಗಾರು ಮಳೆಯ ಆರ್ಭಟ, ಕೊಳೆ ರೋಗ, ಎಲೆ ಚುಕ್ಕಿ ರೋಗದಿಂದ ಕಂಗೆಟ್ಟಿದ್ದ ಮಲೆನಾಡು ಭಾಗದ ಅಡಿಕೆ ಬೆಳೆಯುವ ರೈತರು ಸಂತಸಗೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹೆಚ್ಚುತ್ತಿರುವುದು. ಈ ಬಾರಿ ಫಸಲು ಕಡಿಮೆ ಎಂದು ಚಿಂತೆಗೊಳಗಾಗದ್ದ ರೈತರು ಈಗ ಇರುವ ಅಡಿಕೆ ಧಾರಣೆ ನೋಡಿ ಸಂತಸಗೊಂಡಿದ್ದಾರೆ.
2024ರ ನೈಋತ್ಯ ಮುಂಗಾರು ಮಳೆ ಮಲೆನಾಡು, ಕರಾವಳಿ ಭಾಗದ ಅಡಿಕೆ ಬೆಳೆಗಾರರನ್ನು ಇನ್ನಿಲ್ಲದಂತೆ ಕಾಡಿತ್ತು. ವಾಡಿಕೆಗಿಂತಲೂ ಅಧಿಕ ಮಳೆಯಾದ ಕಾರಣ ಅಡಿಕೆ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡಿತ್ತು. ಫಸಲು ಕಡಿಮೆಯಾಗಿತ್ತು.

ಈ ಕಾರಣಕ್ಕೆ ಮಾರುಕಟ್ಟೆಗೆ ಅಡಿಕೆ ಕೊರತೆ ಎದುರಾಗಿದೆ. ಆದ್ದರಿಂದ ವಿವಿಧ ಮಾದರಿಯ ಕ್ವಿಂಟಾಲ್ ಅಡಿಕೆ ಧಾರಣೆ 50 ರಿಂದ 62 ಸಾವಿರ ರೂ. ತನಕ ಇದ್ದು, ರೈತರು ಸಂತಸಗೊಂಡಿದ್ದಾರೆ. ಆದರೆ ಮಲೆನಾಡು ಭಾಗದಲ್ಲಿ ರೈತರು ಫಸಲಿನ ಕೊರತೆ ಎದುರಿಸುತ್ತಿದ್ದು, ದರ ಹೆಚ್ಚಿದ್ದರೂ ಮಾರಾಟ ಮಾಡಲು ಅಡಿಕೆ ಲಭ್ಯವಿಲ್ಲ.
ಶಿವಮೊಗ್ಗದಲ್ಲಿ ಅಡಿಕೆ ಧಾರಣೆ: ಫೆಬ್ರವರಿ 3ರ ಮಾಹಿತಿಯಂತೆ ಶಿವಮೊಗ್ಗದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹೀಗಿದೆ. ಬೆಟ್ಟೆ 45,699-55,399 ರೂ.ಗಳು. ಗೊರಬಲು 18,100-26,009. ರಾಶಿ 30,899-50,699 ಮತ್ತು ಸರಕು 52,999-62,100 ರೂ. ತನಕ ಇದೆ.
ಬಯಲು ಸೀಮೆ ಭಾಗದ ಅಡಿಕೆ ಕೊಯ್ಲು ಮುಕ್ತಾಯಗೊಂಡಿದೆ. ಮಲೆನಾಡು ಭಾಗದಲ್ಲಿ 3ನೇ ಹಂತದ ಕೊಯ್ಲು ಅಂತಿಮ ಹಂತದಲ್ಲಿದೆ. ಇನ್ನೂ 15 ದಿನಗಳಿಗೆ ಕೊಯ್ಲು ಸಂಪೂರ್ಣವಾಗಿ ಮುಗಿದು ಹೋಗುತ್ತದೆ. ರೈತರು ಎಷ್ಟು ಅಡಿಕೆ ಈ ಬಾರಿ ಕಡಿಮೆ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ.
2024ರ ಅಕ್ಟೋಬರ್, ನವೆಂಬರ್ನಿಂದ ಅಡಿಕೆ ಧಾರಣೆ ಒಂದೇ ಮಾದರಿಯಲ್ಲಿದೆ. ಅತಿಯಾಗಿ ಏರಿಕೆಯೂ ಕಾಣದೆ ದರ ಕುಸಿಯದೇ ಒಂದೇ ರೀತಿಯಲ್ಲಿದ್ದು, ರೈತರಿಗೆ ಸಹಾಯಕವಾಗಿದೆ. ಅಲ್ಲದೇ ಕ್ವಿಂಟಾಲ್ ಅಡಿಕೆ ಧಾರಣೆ 60 ಸಾವಿರ, 80 ಸಾವಿರ ರೂ. ಆಗುತ್ತದ ಎಂದು ಹೇಳುವ ಸ್ಥಿತಿಯಲ್ಲಿ ಸದ್ಯ ಯಾವ ರೈತರು ಸಹ ಇಲ್ಲ.
ಮಲೆನಾಡು ಭಾಗದ ರೈತರು ಕಾರ್ಮಿಕರ ಕೊರತೆ, ಕೊಳೆ ರೋಗ, ಎಲೆ ಚುಕ್ಕಿ ರೋಗದಿಂದ ಕಂಗೆಟ್ಟಿದ್ದಾರೆ. ಅಡಿಕೆ ಸುಲಿಯುವ ಯಂತ್ರಗಳು ಕಾರ್ಮಿಕರ ಕೊರತೆಗೆ ಸ್ವಲ್ಪ ಮಟ್ಟಿನ ಪರಿಹಾರವನ್ನು ಕೊಟ್ಟಿದೆ. ಆದರೆ ರೋಗ ಕಾರಣಕ್ಕೆ ಫಸಲು ಕಡಿಮೆಯಾಗಿದ್ದು, ದರ ಅಧಿಕವಾದರೂ ಮಾರಾಟ ಮಾಡಲು ಅಡಿಕೆ ಇಲ್ಲ ಎನ್ನುವಂತಹ ಪರಿಸ್ಥಿತಿ ಇದೆ.
ಈ ಬಾರಿ ಮಲೆನಾಡು ಮಾತ್ರವಲ್ಲ ಬಯಲು ಸೀಮೆ ಭಾಗದಲ್ಲಿಯೂ ಅಡಿಕೆ ಫಸಲು ಕಡಿಮೆಯಾಗಿದೆ. ಆದ್ದರಿಂದ ಮಾರುಕಟ್ಟೆಗೆ ಅಡಿಕೆ ಬರುತ್ತಿಲ್ಲ. ದರಗಳು ಒಂದೇ ಮಾದರಿಯಲ್ಲಿ ಇದೆ ಎನ್ನುತ್ತಾರೆ ಶಿವಮೊಗ್ಗ ಮಾರುಕಟ್ಟೆಯ ಅಡಿಕೆ ವ್ಯಾಪಾರಿ ಸುಂದರೇಶ್. ದರ ಇನ್ನಷ್ಟು ಹೆಚ್ಚಾಗಲಿದೆ ಎಂಬ ಸುಳಿವು ಸದ್ಯಕ್ಕೆ ಇಲ್ಲ ಎಂದು ಅವರು ಹೇಳುತ್ತಾರೆ.
ಅಡಿಕೆ ಧಾರಣೆ ಒಂದೇ ಮಾದರಿಯಲ್ಲಿ ಇರುವುದು ರೈತರಿಗೆ ಕೊಂಚ ನೆಮ್ಮದಿ ತಂದಿದೆ. ಆದರೆ ಈ ಬಾರಿ ಕೊಳೆ ರೋಗದ ಹೊಡೆತಕ್ಕೆ ಸಿಲುಕಿದ ಮರಗಳು ಮುಂದಿನ ಬಾರಿ ಸರಿಯಾಗಿ ಫಸಲು ನೀಡಲಿದೆಯೇ? ಅತಿಯಾದ ರೋಗದಿಂದ ಮರಗಳು ಸಾವನ್ನಪ್ಪಿದರೆ ರೈತರಿಗೆ ಮತ್ತಷ್ಟು ಸಂಕಷ್ಟ ಉಂಟಾಗಲಿದೆ.












Click it and Unblock the Notifications