ವಿವಿ ಸಾಗರಕ್ಕೆ ಭದ್ರೆ ನೀರು ಹರಿಯಲಿಲ್ಲ, ತೆಂಗು ಉಳಿಯಲಿಲ್ಲ
ಹಿರಿಯೂರು, ಏಪ್ರಿಲ್ 28: ತಾಲೂಕಿನಲ್ಲಿ ಅಂತರ್ಜಲ ಕುಸಿತ ಮಟ್ಟವನ್ನು ಸುಧಾರಿಸಲು ಜಾರಿಗೆ ತಂದ ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆ ರಾಜಕೀಯ ಸುಳಿಗೆ ಸಿಲುಕಿದ ಪರಿಣಾಮವಾಗಿ ಬರಪಿಡಿತ ಪ್ರದೇಶ ಹಿರಿಯೂರಿನ ರೈತರ ತೋಟಗಳು ಒಣಗಿ ನಿಂತಿವೆ.
ತಾಲೂಕಿನ ಮಸ್ಕಲ್, ಆಲೂರು, ಯಳನಾಡು, ಹುಚ್ಚವನಹಳ್ಳಿ,ಆರನಕಟ್ಟೆ, ಜವನಗೊಂಡನಹಳ್ಳಿ ಹೋಬಳಿ, ಧರ್ಮಪುರ ಹೋಬಳಿ, ಐಮಂಗಲ ಗ್ರಾಮದ ರೈತರ ತೋಟಗಳಿಗೆ ನೀರು ಇಲ್ಲದೆ ಸುಮಾರು 20 ಸಾವಿರಕ್ಕೂ ಹೆಚ್ಚು ಎಕರೆಗಳಲ್ಲಿ ತೆಂಗು, ಅಡಿಕೆ, ಬಾಳೆ ಸೇರಿದಂತೆ ಮತ್ತಿತರ ಬೆಳೆಗಳು ಒಣಗಿ ರೈತರ ಬಾಳು ಚಿಂತಾಜನಕ ಸ್ಥಿತಿಯಲ್ಲಿದೆ.
ರೈತರು ಕೃಷಿಯ ಬಗ್ಗೆ ನಂಬಿಕೆ ಕಳೆದುಕೊಂಡಿದ್ದು, ಸತತ ಬರಗಾಲಕ್ಕೆ ತುತ್ತಾಗಿರುವ ಹಿರಿಯೂರು ತಾಲೂಕಿನ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಜೊತೆಗೆ ತಾಲೂಕಿನ ಎಲ್ಲ ಕೆರೆ ಕಟ್ಟೆಗಳು ಕೂಡ ಸಂಪೂರ್ಣ ಒಣಗಿದ್ದು, ಪ್ರಾಣಿ ಪಕ್ಷಿಗಳ ಜೀವನಕ್ಕೂ ಕುತ್ತು ಬಂದಿದೆ.

ಈ ಭಾಗದ ರೈತರು ಜೀವನ ನಡೆಸುವುದೇ ಕಷ್ಟಕರವಾಗಿದ್ದು, ಸದ್ಯ ಉಳಿದ ತೋಟಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ಮೂಲಕ ನೀರು ಹರಿಸುತ್ತಿದ್ದಾರೆ. ಅದು ಕೂಡ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆ ಪ್ರಾರಂಭವಾಗಿ ಸುಮಾರು ಹತ್ತು ವರ್ಷ ಕಳೆದರೂ ತಾಲೂಕಿಗೆ ನೀರು ಬರಲಿಲ್ಲ.
2017ರಲ್ಲಿ ನೀರು ಬರುತ್ತದೆ ಅಂತ ಹೇಳಿದರು. ನಂತರ 2018ಡಿಸೆಂಬರ್ ಅಂತ್ಯದೊಳಗೆ ನೀರು ಬರುತ್ತದೆ ಎಂದು ಬಣ್ಣದ ಮಾತಾಡಿದರು. ಕೊನೆಗೆ 2019 ಮೇ ತಿಂಗಳಲ್ಲಿ ಯಾವುದೇ ಕಾರಣಕ್ಕೂ ನೀರು ನಿಲ್ಲುವುದಿಲ್ಲ. ವಿವಿ ಸಾಗರಕ್ಕೆ ಭದ್ರೆ ಹರಿದು ಬರ್ತಾಳೆ ಅಂತ ಘಂಟಘೋಷವಾಗಿ ಸುಳ್ಳು ಹೇಳಿ, ಕಾಮಗಾರಿ ವೀಕ್ಷಣೆಗೆ ತಂಡೋಪ ತಂಡವಾಗಿ ಜನರನ್ನು ಕರೆದುಕೊಂಡು ಹೋಗಿ ರೈತರಿಗೆ ದಾರಿ ತಪ್ಪಿಸಿದ್ದಾರೆಂದು ಎಲ್ಲರಿಗೂ ತಿಳಿದಿದೆ.

ಇತ್ತ ರೈತರು ಆಗ ನೀರು ಬರುತ್ತದೆ, ಈಗ ನೀರು ಬರುತ್ತದೆ ಅಂತ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಆದರೆ ಸದ್ಯ ಆಕಾಶವನ್ನು ಎದುರು ನೋಡುವುದನ್ನು ಬಿಟ್ಟರೆ ಬೇರೆ ದಾರಿ ಇಲ್ಲದಂತಾಗಿದೆ.












Click it and Unblock the Notifications