ಬೆಲೆ ಕುಸಿತ; ಲಿಂಗಸೂಗೂರು ರೈತರ ಮುಖದಲ್ಲಿ ಕಾಂತಿ ತರದ ಸೂರ್ಯಕಾಂತಿ
ರಾಯಚೂರು ಸೆಪ್ಟೆಂಬರ್ 21: ದೇಶದ ಬೆನ್ನೆಲುಬು ಕೃಷಿಕನಿಗೆ ದ್ವಿಗುಣ ಆದಾಯದ ಬಗ್ಗೆ ಕೇಂದ್ರ ಸರಕಾರ ಒಂದೆಡೆ ಪ್ರಚಾರ ನಡೆಸುತ್ತಿದ್ದರೆ, ಮತ್ತೊಂದೆಡೆ ಬೆಳೆದ ಬೆಳೆಗೆ ಬೆಂಬಲಿತ ಬೆಲೆ ಇಲ್ಲದೆ, ರೈತರು ತೀವ್ರ ಆರ್ಥಿಕ ನಷ್ಟದ ಸಂಕಷ್ಟದಿಂದ ಸಾಲಸೂಲಕ್ಕೆ ಗುರಿಯಾಗುವುದು, ಇಲ್ಲವೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ದಾರುಣ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಸೂರ್ಯಕಾಂತಿ ಬೆಳೆಗಾರರ ಸಂಕಷ್ಟ ರೈತ ಕುಟುಂಬಗಳ ಜೀವನವೇ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಜಿಲ್ಲೆಯಲ್ಲಿ ಹತ್ತಿಯೊಂದಿಗೆ ಎಣ್ಣೆ ಬೀಜ ಸೂರ್ಯಕಾಂತಿ ಬೆಳೆ ಅಧಿಕವಾಗಿ ಬೆಳೆಯಲಾಗುತ್ತದೆ. ಕಳೆದ ವರ್ಷ ಉತ್ತಮ ಬೆಲೆಯಿಂದಾಗಿ ಈ ವರ್ಷ ಹೆಚ್ಚಿನ ರೈತರು ಹತ್ತಿ ಮತ್ತು ಸೂರ್ಯಕಾಂತಿ ಬೆಳೆಗೆ ಆದ್ಯತೆ ನೀಡಿದ್ದರು. ಈಗಾಗಲೇ ಸೂರ್ಯಕಾಂತಿ ಬೆಳೆ ಕಟಾವಿಗೆ ಬಂದು ರೈತರು ಎಪಿಎಂಸಿಗಳಿಗೆ ಸೂರ್ಯಕಾಂತಿ ಬೀಜಗಳನ್ನು ತಂದು ಮಾರಾಟಕ್ಕಾಗಿ ವಾರಗಟ್ಟಲೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದೆಡೆ ಬೆಲೆ ಕುಸಿತ, ಮತ್ತೊಂದೆಡೆ ಖರೀದಿ ಮಾಡುವವರ ಕೊರತೆಯಿಂದ ಲಿಂಗಸೂಗೂರು ತಾಲೂಕಿನ ರೈತರ ಪಾಲಿಗೆ ಸೂರ್ಯಕಾಂತಿ ಬೆಳೆ ಆದಾಯಕ್ಕೆ ಕಾಂತಿ ಇಲ್ಲದಂತೆ ಮಾಡಿದೆ. ಪ್ರತಿ ಎಕರೆ ಸೂರ್ಯಕಾಂತಿ ಬೆಳೆ ಬೆಳೆಯಲು 12 ರಿಂದ 15 ಸಾವಿರ ರೂ. ವೆಚ್ಚವಾಗುತ್ತದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಕ್ವಿಂಟಾಲ್ ಬೆಲೆ 4 ಸಾವಿರದಿಂದ 5 ಸಾವಿರ ಮಾತ್ರ ಇದೆ. ಇದರಿಂದ ರೈತರು ಭಾರೀ ನಷ್ಟಕ್ಕೆ ಗುರಿಯಾಗುವಂತಾಗಿದೆ.

ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಈಗಾಗಲೇ ಬೆಳೆ ನಷ್ಟ ಸಮಸ್ಯೆ ಒಂದೆಡೆಯಾಗಿದ್ದರೆ, ಮತ್ತೊಂದೆಡೆ ಬೆಲೆ ಕುಸಿತ ರೈತರನ್ನು ಭಾರೀ ನಷ್ಟಕ್ಕೆ ತಳ್ಳಿದೆ. ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆಯ ಬೆಲೆ 180 ರೂ. ಗೆ ಮಾರಾಟವಾಗುತ್ತಿದ್ದರೆ, ಸೂರ್ಯಕಾಂತಿಗೆ ಮಾತ್ರ ಬೆಲೆಯೇ ಇಲ್ಲದಿರುವುದು ರೈತರನ್ನು ಭಾರೀ ಸಂಕಷ್ಟಕ್ಕೆ ಗುರಿಯಾಗುವಂತೆ ಮಾಡಿದೆ. ಲಿಂಗಸೂಗೂರು, ಮುದುಗಲ್, ಮಸ್ಕಿ ಭಾಗದಲ್ಲಿ ಸೂರ್ಯಕಾಂತಿ ಖರೀದಿಗೆ ಆಸಕ್ತಿ ತೋರದಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರಗೊಳ್ಳುವಂತೆ ಮಾಡಿದೆ. ರಾಜ್ಯ ಸರ್ಕಾರ ತಕ್ಷಣವೇ ಮಧ್ಯ ಪ್ರವೇಶಿಸಿ, ಸೂರ್ಯಕಾಂತಿ ಬೆಳೆಗಾರರನ್ನು ರಕ್ಷಿಸಬೇಕೆಂದು ರೈತರ ಒತ್ತಾಯಿಸುತ್ತಿದ್ದಾರೆ.
ಜಿಲ್ಲೆಯ ಶಾಸಕರು ಮತ್ತು ಸಂಸದರು ಹಾಗೂ ಉಸ್ತುವಾರಿ ಸಚಿವರು, ರೈತರ ಈ ಸಮಸ್ಯೆಯನ್ನು ಗಂಭೀರ ಪರಿಗಣಿಸಿ, ತಕ್ಷಣವೇ ಸರಕಾರದ ಗಮನ ಸೆಳೆದು, ಬೆಂಬಲಿತ ಬೆಲೆಗೆ ಸೂರ್ಯಕಾಂತಿ ಖರೀದಿಸುವಂತಹ ಪರ್ಯಾಯ ವ್ಯವಸ್ಥೆ ಮಾಡಲು ರೈತರು ಆಗ್ರಹಿಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡ ಪಾಮಯ್ಯ ಮೂರಾರಿ ಸೂರ್ಯಕಾಂತಿ ಬೆಲೆ ಕುಸಿತಕ್ಕೆ ಸಂಬಂಧಿಸಿ ಶಾಸಕರಾದ ದದ್ದಲ್ ಬಸವನಗೌಡ, ಬಸವನಗೌಡ ತುರ್ವಿಹಾಳ , ಡಿ.ಎಸ್.ಹೂಲಗೇರಿ ಹಾಗೂ ಬಯ್ಯಾಪೂರು ಅಮರೇಗೌಡ ಅವರ ಗಮನಕ್ಕೆ ತಂದು ಪ್ರಸಕ್ತ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು, ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಲು ಮನವಿ ಮಾಡಿದ್ದಾರೆ.












Click it and Unblock the Notifications