ಪಂಪ್ಸೆಟ್ಗಳಿಗೆ 3 ತಾಸು ವಿದ್ಯುತ್ ಸಾಕಾಗುತ್ತಿಲ್ಲ, ಧಾರವಾಡದ ಕೆಇಬಿ ಎದುರು ರೈತರ ಆಕ್ರೋಶ
ಧಾರವಾಡ, ಅಕ್ಟೋಬರ್, 11: ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ರೈತರು ಬೆಳಗ್ಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಳಿ ಇರುವ ವಿದ್ಯುತ್ ವಿತರಣಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.
ನಂತರ ಮುಂದುವರಿದು ಅಯೋರಾತ್ರಿ ಸಹ ಧರಣಿ ನಡೆಸಿ ಸರ್ಕಾರ ಹಾಗೂ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಧರಣಿ ಕೈಬಿಡದ ರೈತರು ಅಹೋರಾತ್ರಿ ಧರಣಿಗೆ ಮುಂದಾಗಿದ್ದು, ಕೆಇಬಿ ಎದುರೇ ಅಡುಗೆ ಮಾಡಿ ಅಲ್ಲೇ ವಸತಿ ಮಾಡುವ ಮೂಲಕ ತಮ್ಮ ಬೇಡಿಕೆ ಈಡೇರಿಸಲು ಒತ್ತಾಯ ಮಾಡಿದರು.

ಮಳೆ ಇಲ್ಲದ ಸಂದರ್ಭದಲ್ಲಿ ಎಲ್ಲ ರೈತರು ಪಂಪ್ಸೆಟ್ ಮೂಲಕವೇ ನೀರು ಹಾಯಿಸುವ ಮೂಲಕ ಕೃಷಿ ಮಾಡುತ್ತಿದ್ದಾರೆ. ಆದರೆ, ಪಂಪ್ಸೆಟ್ಗಳಿಗೆ ಸಮರ್ಪಕವಾಗಿ ತ್ರಿಫೇಸ್ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಈ ಹಿಂದೆ 7 ತಾಸು ವಿದ್ಯುತ್ ವಿತರಣೆಯಾಗುತ್ತಿತ್ತು. ಈಗ ಕೇವಲ 3 ತಾಸು ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇಷ್ಟು ಅವಧಿಯ ವಿದ್ಯುತ್ ಸಾಕಾಗುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡೊಸಿದ್ದಾರೆ.
ರೈತರು ಬೆಳಗ್ಗೆಯಿಂದಲೇ ಕೆಇಬಿ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ. ಹೆಸ್ಕಾ ಅಧಿಕಾರಿಗಳ ಮನವೊಲಿಕೆಗೂ ಬಗ್ಗದ ರೈತರು ಇದೀಗ ಸ್ಥಳದಲ್ಲೇ ಮೊಕ್ಕಾಂ ಹೂಡಿ ಅಡುಗೆ ಮಾಡುವ ಮೂಲಕ ಅಹೋರಾತ್ರಿ ಧರಣಿ ನಡೆಸಿದರು.
ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ
ಮತ್ತೊಂದೆಡೆ ಮಂಡ್ಯ ತಾಲ್ಲೂಕಿನ ಸಾತನೂರು ಗ್ರಾಮದ ಕಾಡಾ ಫಾರಂ ವ್ಯಾಪ್ತಿಯ ಪಂಪ್ಸೆಟ್ಗಳಿಗೆ ಹಾಗೂ ಫೌಲ್ಟ್ರಿ ಫಾರಂಗಳಗೆ ನಿರಂತರ ವಿದ್ಯುತ್ ಸರಬರಾಜು ನಿಲ್ಲಿಸಿರುವುದನ್ನು ಖಂಡಿಸಿ ಗ್ರಾಮಸ್ಥರು ಮತ್ತು ಮುಖಂಡರು ನಗರದ ಚೆಸ್ಕಾಂ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಚೆಸ್ಕಾಂ ಅಧೀಕ್ಷಕ ಎಂಜಿನಿಯರ್ ಅವರ ಕಚೇರಿ ಎದುರು ಜಮಾಯಿಸಿದ ಸಾತನೂರು, ಚಿಕ್ಕಮಂಡ್ಯ, ದೇವೇಗೌಡನದೊಡ್ಡಿ ಹಾಗೂ ಕಾಡಾ ಫಾರಂ ವ್ಯಾಪ್ತಿಯ ಗ್ರಾಮಸ್ಥರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಸಾತನೂರು ಗ್ರಾಮ ವ್ಯಾಪ್ತಿಯಲ್ಲಿ ಬರುವ (ಕಾಡಾ ಫಾರಂ ಅಸಿಟೇಟ್ ಟೌನ್) ಐ.ಸಿ.ಸೇಟುಗಳು ಮತ್ತು ಫೌಲ್ಟ್ರಿ ಫಾರಂ ಹಾಗೂ ರೇಷ್ಮೆ ಸಾಕಾಣಿಕೆ ಮನೆಗಳಿಗೆ ಸುಮಾರು 40 ವರ್ಷಗಳಿಂದಲೂ ಮಂಡ್ಯ ಸಿಟಿ ವ್ಯಾಪ್ತಿಯ ಫೀಡರ್ನಿಂದ ವಿದ್ಯುತ್ ಸರಬರಾಜು ಆಗುತ್ತಿದೆ. ಆದರೆ ಈಗ ನಿರಂತರ ವಿದ್ಯುತ್ ಅನ್ನು ಸ್ಥಗಿತಗೊಳಿಸಿ ಗ್ರಾಮಾಂತರ ವ್ಯಾಪ್ತಿಯ ಬಸವನಪುರ ಫೀಡರ್ನಿಂದ ವಿದ್ಯುತ್ ಸರಬರಾಜು ಮಾಡಲಾಗಿದೆ. ಇದನ್ನು ನಿಲ್ಲಿಸಿ ಮೊದಲಿನಂತೆಯೇ ಮಂಡ್ಯ ಸಿಟಿ ಪೀಡರ್ನಿಂದ ನೀಡಬೇಕು ಎಂದು ಆಗ್ರಹಿಸಿದರು.
ಬಸವನಪುರ ಫೀಡರ್ನಿಂದ ವಿದ್ಯುತ್ ಸರಬರಾಜಿಗೆ ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಕೆ.ಆರ್.ಎಸ್. ಅಣೆಕಟ್ಟೆಯಲ್ಲಿ ನೀರಿನ ಅಭಾವ ಇರುವುದರಿಂದ ಹಾಗೂ ಮಳೆ ಇಲ್ಲದೇ ಬರಗಾಲ ಇರುವುದರಿಂದ ಹೀಗಿರುವ ಬೆಳೆಗಳಿಗೆ ನೀರಿನ ತೀವ್ರ ಕೊರತೆ ಇದೆ. ಈ ಸಂದರ್ಭದಲ್ಲಿ ಮೂಡ ವ್ಯಾಪ್ತಿಗೆ ಬರುವ ಸಾತನೂರು ಕಾಡಾ ವ್ಯಾಪ್ತಿಯ (ಫಾರಂ ಅಸಿಟೇಟ್ ಟೌನ್) ಪಂಪ್ಸೆಟ್(ಐಪಿ ಸೆಟ್)ಗಳಿಗೆ ಮತ್ತು ಫೌಲ್ಟ್ರಿ ಫಾರಂ ಹಾಗೂ ರೇಷ್ಮೆ ಸಾಕಾಣಿಕೆ ಮನೆಗಳಿಗೆ ಮೊದಲಿನಂತೆ ನಗರದ ಪೀಢರ್ನಿಂದಲೇ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಗ್ರಾಮದ ಮುಖಂಡರಾದ ದೇವರಾಜು, ಮಹೇಶ್, ಅಶೋಕ್, ಉಮೇಶ್, ರವಿ, ಕೃಷ್ಣೇಗೌಡ, ನಾಗರಾಜು, ಕರಿಯಪ್ಪ, ಶಂಕರೇಗೌಡ, ಬೋರೇಗೌಡ, ಶಶಿಕುಮಾರ್, ನಸರಯ್ಯ, ಸುರೇಶ್, ಮಂಜುನಾಥ್, ಶ್ರೀನಿವಾಸ್, ಅಶೋಕ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.












Click it and Unblock the Notifications