ಅ.1 ರಿಂದ ರೈತ ದಸರಾ - ಮತ್ಸ್ಯ ಮೇಳ ಸಂಭ್ರಮ
ಮೈಸೂರು, ಸೆಪ್ಟೆಂಬರ್ 26: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಈ ಬಾರಿಯೂ ರೈತ ದಸರಾ ಮತ್ತು ಮತ್ಸ್ಯ ಮೇಳವನ್ನು ನಡೆಸಲಾಗುತ್ತಿದೆ. ಅ.1 ರಿಂದ 3ರವರಗೆ ರೈತ ದಸರಾ ಹಾಗೂ ಮತ್ಸ್ಯ ಮೇಳವು ಅ.1 ರಿಂದ 7 ರವರೆಗೆ ನಗರದ ಜೆ.ಕೆ ಗ್ರೌಂಡ್ ನಲ್ಲಿ ನಡೆಯಲಿದೆ.
ರೈತ ದಸರಾ ಉಪಸಮಿತಿಯ ಉಪ ವಿಶೇಷಾಧಿಕಾರಿ ಡಾ. ಎಂ ಕೃಷ್ಣರಾಜು ಅವರು ಮಾತನಾಡಿ,"ರೈತರಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವರುಣಾ ಗ್ರಾಮದಲ್ಲಿ ಕೆಸರು ಗದ್ದೆ ಓಟ ಸ್ಪರ್ಧೆ, ಗೋಣಿ ಚೀಲದ ಒಳಗೆ ಕಾಲಿಟ್ಟು ಓಡುವುದು, ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ, ಮೂರು ಕಾಲಿನ ಓಟ, ಗುಂಡು ಎತ್ತು ಸ್ಪರ್ಧೆಗಳನ್ನು ಪುರುಷರಿಗೆ ಆಯೋಜಿಸಲಾಗಿದೆ. ಮಹಿಳಾ ರೈತರಿಗೆ ಚಮಚದ ಮೇಲೆ ನಿಂಬೆಹಣ್ಣು ಇಟ್ಟುಕೊಂಡು ಓಡುವ ಸ್ಪರ್ಧೆ, ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ಗೋಣಿ ಚೀಲದ ಒಳಗೆ ಕಾಲಿಟ್ಟು ಓಡುವುದು, ನೀರು ತುಂಬಿದ ಮೂರು ಮಡಿಕೆ ಹೊತ್ತು ನಡೆಯುವ ಸ್ಪರ್ಧೆ, ಒಂಟಿ ಕಾಲಿನ ಓಟ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ಅಕ್ಟೋಬರ್ 1ರಂದು ಮಧ್ಯಾಹ್ನ 1ಕ್ಕೆ ತಂಬಾಕು ಬೆಳೆಗೆ ಪರ್ಯಾಯ ಬೆಳೆ ಯೋಜನೆ ಹಾಗೂ ಸಮಗ್ರ ಕೃಷಿ ಪದ್ದತಿ-ಸುಸ್ಥಿರ ಕೃಷಿಗೆ ದಾರಿ ವಿಷಯಗಳ ಕುರಿತಂತೆ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರೊಂದಿಗೆ ವಿಚಾರ ವಿನಿಮಯ ಕಾರ್ಯಕ್ರಮ ಆಯೋಜಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿಯ ಕರ್ನಾಟಕ ನಾಟಕ ಜಾನಪದ ಕಲಾವಿದರ ಅಭಿವೃದ್ಧಿ ಸಂಘದ ಕಲಾವಿದರಿಂದ ರೈತನ ಮಕ್ಕಳು ಎಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಅ.3 ರಂದು ಬೆಳಿಗ್ಗೆ 6.30ಕ್ಕೆ ಹಾಗೂ ಸಂಜೆ 5.30ಕ್ಕೆ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ಜೆ.ಕೆ. ಮೈದಾನದಲ್ಲಿ ಆಯೋಜಿಸಿಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಂದು ಸಂಜೆ 6ಕ್ಕೆ ಜೆ.ಕೆ.ಮೈದಾನದಲ್ಲಿಯೇ ಪ್ರಥಮ ಬಹುಮಾನವಾಗಿ 50,000 ದ್ವಿತೀಯ ಬಹುಮಾನವಾಗಿ 40,000, ತೃತೀಯ ಬಹುಮಾನವಾಗಿ 30,000 ಸಾವಿರ ಹಾಗೂ 4ನೇ ಬಹುಮಾನವ ವಿಜೇತರಿಗೆ 10,000 ರೂ ನಗದು ಬಹುಮಾನವನ್ನು ಪಶುಸಂಗೋಪನಾ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ವಿತರಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಇದೇ ಮೈದಾನದಲ್ಲಿ ಮತ್ಸ್ಯ ಮೇಳವನ್ನೂ ಆಯೋಜಿಸಲಾಗಿದೆ.












Click it and Unblock the Notifications