ಬೆಳೆ ನಷ್ಟ ಪರಿಹಾರ:ಕಾನೂನು ಹೋರಾಟ ಮಾಡಿ ಗೆದ್ದ ರೈತ
ಧಾರವಾಡ, ಮಾರ್ಚ್ 07: ಬೆಳೆ ನಷ್ಟದ ಪರಿಹಾರದ ವಿಚಾರದಲ್ಲಿ ರೈತರೊಬ್ಬರು ಕಾನೂನು ಹೋರಾಟ ಮಾಡಿ ಗೆಲುವು ಸಾಧಿಸಿದ್ದಾರೆ. ರೈತನಿಗೆ ಪರಿಹಾರ ನೀಡಲು ಆದೇಶಿಸಲಾಗಿದೆ.
ಹುಬ್ಬಳ್ಳಿ ನವನಗರದ ಬಸವಣ್ಣೆಪ್ಪ ಗುಮಗೋಳ ಎನ್ನುವವರು 2021-2022ನೇ ಹಿಂಗಾರು ಸಾಲಿನಲ್ಲಿ ತಮ್ಮ ಜಮೀನಿನಲ್ಲಿನ ಮಾವಿನ ಬೆಳೆಗೆ ಎಸ್ಬಿಐ ಜನರಲ್ ಇನ್ಸುರೆನ್ಸ್ ಕಂಪನಿಯಿಂದ ವಿಮೆ ಮಾಡಿಸಿದ್ದರು.

ವಿಮೆಗೆ ತಗಲುವ ವಿಮಾ ಕಂತಿನ ಹಣ ರೂ.10,116 ಅನ್ನು ವಿಮಾ ಕಂಪನಿಯ ಅಧಿಕೃತ ಏಜೆಂಟ್ ನವನಗರದ ಹುಬ್ಬಳ್ಳಿಯ ಜೀವನ ಆಧಾರ ಸಹಾಯವಾಣಿ ಕೇಂದ್ರದ ಮೂಲಕ ತುಂಬಿದ್ದರು. ಮಾವಿನ ಬೆಳೆ 2021-22ನೇ ಸಾಲಿನಲ್ಲಿ ಸಂಪೂರ್ಣವಾಗಿ ವಿಫಲಗೊಂಡಿತು. ರೈತ ತನಗೆ ವಿಮಾ ಹಣವನ್ನು ಕೊಡುವಂತೆ ಎನ್ಬಿಐ ಜನರಲ್ ಇನ್ಸೂರೆನ್ಸ್ ಕಂಪನಿಯವರನ್ನು ಕೇಳಿಕೊಂಡಿದ್ದರು.
ಪ್ರೀಮಿಯಂ ಕಟ್ಟಿಲ್ಲ ಎಂದ ಕಂಪನಿ: ಆದರೆ ವಿಮಾನ ಕಂಪನಿ ರೈತ ತಮಗೆ ಪ್ರೀಮಿಯಂ ಹಣ ಕಟ್ಟಿಲ್ಲ ಎಂದು ಅವರ ಕ್ಲೇಮ್ ತಿರಸ್ಕರಿಸಿದ್ದರು. ವಿಮಾ ಕಂಪನಿಯ ಅಧಿಕೃತ ಏಜಂಟ್ ಮೂಲಕ 2021-22ನೇ ಸಾಲಿನ ಮಾವಿನ ಬೆಳೆಯ ವಿಮಾ ಕಂತಿನ ಹಣ ಭರಿಸಿದ್ದರೂ ಸಹ ಕ್ಲೇಮ್ ತಿರಸ್ಕರಿಸಿರುವುದು ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ.
ಈ ಕುರಿತು ರೈತ ವಿಮಾ ಕಂಪನಿ ಮತ್ತು ಅವರ ಅಧಿಕೃತ ಏಜೆಂಟ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ 21/04/2023ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಆದರೆ ಕಂಪನಿ ದೂರುದಾರ ರೈತ ಬೆಳೆ ವಿಮಾಕಂತಿನ ಹಣವನ್ನು ತುಂಬಿಲ್ಲ. ದೂರುದಾರ ಕ್ಲೇಮ್ ಪಡೆಯಲು ಅರ್ಹರಲ್ಲ ಎಂದು ಹೇಳಿ ತಮ್ಮ ವಿರುದ್ಧದ ದೂರನ್ನು ವಜಾ ಮಾಡುವಂತೆ ಆಕ್ಷೇಪಣೆ ಎತ್ತಿದ್ದರು. ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ತೀರ್ಪು ನೀಡಿದೆ.
ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಮತ್ತು ಸದಸ್ಯರಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಹಾಗೂ ಪ್ರಭು. ಸಿ ಹಿರೇಮಠ ದೂರುದಾರ ತನ್ನ ಮಾವಿನ ಬೆಳೆಗೆ ವಿಮೆ ಮಾಡಿಸಲು ಕಟ್ಟಿದ ಪ್ರೀಮಿಯಂ ಹಣವನ್ನು ವಿಮಾ ಕಂಪನಿಗೆ ಕಳುಹಿಸದೇ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ದೂರುದಾರನಿಗೆ ಆದ ಮಾವಿನ ಬೆಳೆಯ ನಷ್ಟವನ್ನು ನವನಗರ ಹುಬ್ಬಳ್ಳಿಯ ಜೀವನ ಆಧಾರ ಸಹಾಯವಾಣಿ ಕೇಂದ್ರದವರೇ ತುಂಬಿಕೊಡಬೇಕು ಎಂದು ತೀರ್ಪಿನಲ್ಲಿ ಹೇಳಿದೆ. ದೂರುದಾರನಿಗೆ ಆಗಿರುವ ಬೆಳೆ ಹಾನಿಗೆ ರೂ.2,02,336 ಹಾಗೂ ಅದರ ಮೇಲೆ ಈ ದೂರು ದಾಖಲಿಸಿದ ದಿನಾಂಕ ದಿಂದ ಶೇ8 ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರನಿಗೆ ಹಣ ಸಂದಾಯ ಮಾಡುವಂತೆ ಆದೇಶಿಸಿದೆ.












Click it and Unblock the Notifications