ಕೇಂದ್ರದ ಕಾಯ್ದೆ ತಿದ್ದುಪಡಿ ಪ್ರಸ್ತಾಪ ತಿರಸ್ಕರಿಸಿದ ರೈತರು
ನವದೆಹಲಿ, ಡಿಸೆಂಬರ್ 16: ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಕೇಂದ್ರ ಸರ್ಕಾರಕ್ಕೆ ಬುಧವಾರ ಲಿಖಿತ ಪ್ರತಿಕ್ರಿಯೆ ನೀಡಿದ್ದು, ಕೃಷಿ ಕಾಯ್ದೆಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ತರುವ ಸಂಬಂಧ ನೀಡಿದ್ದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರವಾಲ್ ಅವರಿಗೆ ಇ-ಮೇಲ್ ರವಾನಿಸಿರುವ ಸಂಯುಕ್ತ ಕಿಸಾನ್ ಮೋರ್ಚಾದ ಮುಖ್ಯಸ್ಥ ದರ್ಶನ್ ಪಾಲ್, 'ನಿಮ್ಮಿಂದ ಬಂದಿರುವ ಪ್ರಸ್ತಾಪ ಮತ್ತು ಪತ್ರಕ್ಕೆ ಪ್ರತಿಯಾಗಿ ನಮ್ಮ ರೈತ ಸಂಘಟನೆಗಳು ಅದೇ ದಿನ ಜಂಟಿ ಸಭೆ ನಡೆಸಿದ್ದು, ನಿಮ್ಮ ಪ್ರಸ್ತಾಪದ ಬಗ್ಗೆ ಚರ್ಚೆ ನಡೆಸಿದ್ದೇವೆ ಮತ್ತು ಅದನ್ನು ತಿರಸ್ಕರಿಸಿದ್ದೇವೆ. ಏಕೆಂದರೆ ಅದು 2020ರ ಡಿಸೆಂಬರ್ 5ರಂದು ಸರ್ಕಾರದ ಪ್ರತಿನಿಧಿಗಳು ನಮಗೆ ಮೌಖಿಕವಾಗಿ ನೀಡಿದ ಪ್ರಸ್ತಾಪಗಳ ಲಿಖಿತ ಸ್ವರೂಪವಷ್ಟೇ ಆಗಿದೆ' ಎಂದು ತಿಳಿಸಿದ್ದಾರೆ.
ಜತೆಗೆ ರೈತರ ಚಳವಳಿಗೆ ಕಳಂಕ ತರುವ ಕೆಲಸವನ್ನು ನಿಲ್ಲಿಸುವಂತೆಯೂ ಸರ್ಕಾರಕ್ಕೆ ಪಾಲ್ ಆಗ್ರಹಿಸಿದ್ದಾರೆ. 'ರೈತ ಚಳವಳಿಗೆ ಕೆಟ್ಟ ಹೆಸರು ತರುವುದನ್ನು ಸರ್ಕಾರ ನಿಲ್ಲಿಸಬೇಕೆಂದು ನಾವು ಬಯಸುತ್ತೇವೆ. ಜತೆಗೆ ಇತರೆ ರೈತ ಸಂಘಟನೆಗಳ ಜತೆಗೆ ಸಮಾನಾಂತರ ರಾಜಿ ಸಂಧಾನ ನಡೆಸುವುದನ್ನೂ ನಿಲ್ಲಿಸಿ' ಎಂದು ಅವರು ಹೇಳಿದ್ದಾರೆ.

ಇದುವರೆಗೆ ನಡೆದ ವಿವಿಧ ಸುತ್ತಿನ ಮಾತುಕತೆಗಳಲ್ಲಿ ಕೃಷಿ ಕಾಯ್ದೆಗಳ ಕುರಿತಾದ ನಮ್ಮ ಕಳವಳಗಳನ್ನು ಈಗಾಗಲೇ ಮನವರಿಕೆ ಮಾಡಿದ್ದೇವೆ. ಹೀಗಾಗಿ ನಿಮ್ಮ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ಬರೆಯುವ ಗೋಜಿಗೆ ಹೋಗಿರಲಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications