ರಾಜ್ಯದಲ್ಲಿ ರೈತ ಆತ್ಮಹತ್ಯೆ ಪ್ರಮಾಣ ಕಡಿಮೆ: ಕೃಷಿ ಇಲಾಖೆ ವರದಿ
ಬೆಂಗಳೂರು, ಮೇ 11: ಹಲವು ಗೊಂದಲಗಳಲ್ಲಿ ಸಿಲುಕಿ ನಲುಗುತ್ತಿರುವ ಮೈತ್ರಿ ಸರ್ಕಾರಕ್ಕೆ ಸಂತಸದ ಸುದ್ದಿಯೊಂದು ದೊರೆತಿದ್ದು, ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ರೈತ ಆತ್ಮಹತ್ಯೆ ಕಡಿಮೆ ಆಗಿದೆ ಎಂಬ ವರದಿ ಬಂದಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ರಾಜ್ಯ ಕೃಷಿ ಇಲಾಖೆ ನೀಡಿರುವ ವರದಿ ಪ್ರಕಾರ ಕಳೆದ ವಾರ್ಷಿಕ ಸಾಲಿನಲ್ಲಿ 1058 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು, ಆದರೆ ಈ ವರ್ಷದಲ್ಲಿ 551 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈತ್ರಿ ಸರ್ಕಾರದ ಸಾಲ ಮನ್ನಾ ಘೋಷಣೆಯಿಂದಲೇ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆ ಆಗಿದೆ ಎಂದು ಹೇಳಲಾಗುತ್ತಿದೆ. 2018-19 ಸಾಲಿನಲ್ಲಿ ಒಟ್ಟು 840 ರೈತ ಆತ್ಮಹತ್ಯೆ ವರದಿ ಆಗಿದ್ದವು, ಆದರೆ ತನಿಖೆ ಬಳಿಕ 551 ಆತ್ಮಹತ್ಯೆಗಳು ಮಾತ್ರ ರೈತ ಆತ್ಮಹತ್ಯೆಗಳು ಉಳಿದವು ಖಾಸಗಿ ಕಾರಣದಿಂದ ಆದವೆಂದು ವರದಿ ನೀಡಲಾಗಿತ್ತು.

ರೈತ ಸಾಲಮನ್ನಾ ಮತ್ತು ಇನ್ನಿತರೆ ಯೋಜನೆಗಳ ಮೂಲಕ ರೈತರಲ್ಲಿ ಆತ್ಮವಿಶ್ವಾಸ ತುಂಬಿಸುವ ಯತ್ನ ಮಾಡಿರುವ ಕಾರಣದಿಂದಾಗಿ ರೈತ ಆತ್ಮಹತ್ಯೆ ಕಡಿಮೆ ಆಗಿದೆ ಎಂದು ಕೃಷಿ ಇಲಾಖೆ ನಿರ್ದೇಶಕರು ಹೇಳಿದ್ದಾರೆ.
ರೈತರ ಸಾಲ ಸೂಕ್ತ ರೀತಿಯಲ್ಲಿ ಆಗಿಲ್ಲವೆಂದು ಯಡಿಯೂರಪ್ಪ, ನರೇಂದ್ರ ಮೋದಿ ಸಹ ಮೈತ್ರಿ ಸರ್ಕಾರವನ್ನು ಲೋಕಸಭಾ ಚುನಾವಣೆ ಪ್ರಚಾರ ಸಮಯದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು, ಆದರೆ ಈಗ ಕೃಷಿ ಇಲಾಖೆಯ ವರದಿಯು ಬಿಜೆಪಿಯ ಆರೋಪಗಳನ್ನು ಎದುರಿಸಲು ಮೈತ್ರಿ ಸರ್ಕಾರಕ್ಕೆ ಶಕ್ತಿ ತುಂಬಿದೆ.
ಮಂಡ್ಯ ಚುನಾವಣೆ, ಫಲಿತಾಂಶದ ಅನಿಶ್ಚಿತತೆ, ಕಾಂಗ್ರೆಸ್-ಜೆಡಿಎಸ್ ಮುಸುಕಿನ ಗುದ್ದಾಟ, ಭಿನ್ನಮತೀಯ ಶಾಸಕರ ರಂಪಾಟ ಇವುಗಳಿಂದ ತೀವ್ರ ಹಿನ್ನಡೆ ಅನುಭವಿಸಿದ್ದ ಮೈತ್ರಿ ಸರ್ಕಾರ ಮತ್ತು ಸ್ವತಃ ಕುಮಾರಸ್ವಾಮಿ ಅವರಿಗೆ ಕೃಷಿ ಇಲಾಖೆಯ ಈ ವರದಿ ಸ್ಥೈರ್ಯ ತುಂಬುವುದರಲ್ಲಿ ಅನುಮಾನವಿಲ್ಲ.
ಆದರೆ ಕೃಷಿ ಇಲಾಖೆಯ ಈ ವರದಿ ಬಗ್ಗೆ ಕೆಲವರು ವಿರೋಧವನ್ನೂ ಈಗಾಗಲೇ ಕೆಲವರು ವ್ಯಕ್ತಪಡಿಸಿದ್ದಾರೆ, ಸರ್ಕಾರವು ಪ್ರಭಾವ ಬೀರಿ ತಿರುಚಿದ ವರದಿ ಪ್ರಕಟಿಸಿದೆ ಎಂದು ಕೆಲವರು ಆರೋಪಿಸಿದ್ದಾರೆ.












Click it and Unblock the Notifications