ಬೆಳಗಾವಿ: ರಾಜನಾಥ್ ಸಿಂಗ್ ಗೆ ತಟ್ಟಿದ ಸಾಲ ಮನ್ನಾ, ಮಹಾದಾಯಿ ಬಿಸಿ
ಬೆಳಗಾವಿ, ಜನವರಿ 13: ಇಂದು ಬೆಳಗಾವಿ ಆಗಮಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮುಂದೆ ಸಾಲ ಮನ್ನಾ ಮಾಡುವಂತೆ, ಮಹಾದಾಯಿ ವಿಚಾರದ ಬಗ್ಗೆ ಮಾತನಾಡುವಂತೆ ರೈತರು ಘೋಷಣೆ ಕೂಗಿದ ಘಟನೆ ನಡೆದಿದೆ.
ಕೆಎಲ್ಇ ಆಸ್ಪತ್ರೆಯ ನ್ಯೂಕ್ಲಿಯರ್ ಥೆರಫಿ ಯುನಿಟ್ ಉದ್ಘಾಟನೆ ಮತ್ತು ಜಿರಗಿ ಸಭಾಭವನದಲ್ಲಿ ಭಾರತೀಯ ಕೃಷಿಕ ಸಮಾಜದ ರಾಷ್ಟ್ರೀಯ ಪರಿಷತ್ ಉದ್ಘಾಟನೆಗಾಗಿ ರಾಜನಾಥ್ ಸಿಂಗ್ ಇಂದು ಬೆಳಗಾವಿಗೆ ಆಗಮಿಸಿದ್ದರು.
ಬೆಳಗಾವಿಯ ಕೆ.ಎಸ್.ಆರ್.ಪಿ ಮೈದಾನದಲ್ಲಿನ ಹೆಲಿಪ್ಯಾಡ್ ಗೆ ಆಗಮಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕೆಎಲ್ಇ ಆಸ್ಪತ್ರೆಗೆ ಆಗಮಿಸಿದರು. ನಂತರ ಕೆಎಲ್ಇ ಸಂಸ್ಥೆಯ ಜಿರಗಿ ಸಭಾಂಗಣದಲ್ಲಿ ಭಾರತೀಯ ಕೃಷಿಕ ಸಮಾಜದ ರಾಷ್ಟ್ರೀಯ ಪರಿಷತ್ ನ ಕಾರ್ಯಕ್ರಮದಲ್ಲಿ ಭಾಗಿಯಾದರು.

ರಾಷ್ಟ್ರೀಯ ಪರಿಷತ್ ಉದ್ಘಾಟನೆಗೆ ರಾಜನಾಥ ಸಿಂಗ್ ಆಗಮಿಸುತ್ತಿದ್ದಂತೆ ರೈತರು ಸಾಲ ಮನ್ನಾ ಮಾಡುವಂತೆ ಘೋಷಣೆ ಕೂಗಿದರು. ಇದರಿಂದ ರಾಜನಾಥ್ ಸಿಂಗ್ ಮುಜುಗರ ಅನುಭವಿಸಿದರು.
ನಂತರ ರಾಜನಾಥ ಸಿಂಗ್ ಭಾಷಣ ಆರಂಭಿಸುತ್ತಿದ್ದಂತೆ ಮತ್ತೆ ಎದ್ದು ನಿಂತ ರೈತರು, ಮಹದಾಯಿ ವಿವಾದದ ಬಗ್ಗೆ ಮಾತಾಡುವಂತೆ ಮತ್ತು ಭಾಷಣವನ್ನ ಕನ್ನಡಕ್ಕೆ ಅನುವಾದ ಮಾಡುವಂತೆ ಆಗ್ರಹಿಸಿದರು.
ಇದರಿಂದ ಮತ್ತೊಮ್ಮೆ ಮುಜುಗರಕ್ಕೊಳಗಾದ ಸಿಂಗ್, "ನಾನು ಕೃಷಿಕ, ನನ್ನ ತಂದೆಯೂ ಕೃಷಿಕರೇ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗರೈತರ ಸಾಲದ ಬಡ್ಡಿ ಕಡಿಮೆ ಮಾಡಿಸಿದ್ದೆ," ಎಂದು ತೇಪೆ ಹಚ್ಚಿದರು.
"ನಮ್ಮ ದೇಶದ ರೈತರ ಧೈರ್ಯ ಶಾಲಿಗಳು. ಲಾಭವಿಲ್ಲದೇ ಯಾರೂ ಏನು ಮಾಡುವುದಿಲ್ಲ. ಆದರೆ ನಮ್ಮ ರೈತರು ಲಾಭವಿಲ್ಲದಿದ್ದರು ಶ್ರಮವಹಿಸಿ ಕೃಷಿ ಚಟುವಟಿಕೆ ನಡೆಸುತ್ತಾರೆ. ಈಗ ಮತ್ತೆ ಹಸಿರು ಕ್ರಾಂತಿ ಆಗದೆ ರೈತರ ಸಮಸ್ಯೆ ಪರಿಹಾರ ಆಗುವುದಿಲ್ಲ. ಶಾಶ್ವತವಾಗಿ ಹಸಿರು ಕ್ರಾಂತಿ ಆಗಬೇಕಿದೆ. ಕೃಷಿ ಉತ್ಪಾದನೆ ಹೆಚ್ಚಾಗಬೇಕಿದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗಬೇಕು," ಎಂದು ಸಿಂಗ್ ಹೇಳಿದರು.

ಕರ್ನಾಟಕ ಸರಕಾರ ಈಗಾಗಲೇ ಸಹಕಾರಿ ಬ್ಯಾಂಕ್ ಗಳಲ್ಲಿದ್ದ ರೈತರ ಸಾಲ ಮನ್ನಾ ಮಾಡಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ರೈತರ ಸಾಲವನ್ನೂ ಮನ್ನಾ ಮಾಡುವಂತೆ ಅನ್ನದಾತರ ಸಮುದಾಯ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದೆ. ಇದು ಇಂದಿನ ಕಾರ್ಯಕ್ರಮದಲ್ಲೂ ಅಭಿವ್ಯಕ್ತಿಗೊಂಡಿದೆ.
ಕಾರ್ಯಕ್ರಮದಲ್ಲಿ ಸಂಸದರಾದ ಸುರೇಶ ಅಂಗಡಿ, ಪ್ರಹ್ಲಾದ ಜೋಷಿ, ಡಾ. ಪ್ರಭಾಕರ ಕೋರೆ ಭಾಗಿಯಾಗಿದ್ದಾರೆ. ಮೂವರೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷಕ್ಕೆ ಸೇರಿದವರಾಗಿದ್ದಾರೆ.












Click it and Unblock the Notifications