ಸರ್ಕಾರದೊಂದಿಗೆ ಮಾತುಕತೆ; ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದ ರೈತ ಸಂಘಗಳು
ನವದೆಹಲಿ, ಡಿಸೆಂಬರ್ 30: ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ಕೇಂದ್ರ ಸಚಿವರು ಹಾಗೂ ರೈತ ಮುಖಂಡರ ನಡುವೆ ಆರನೇ ಸುತ್ತಿನ ಸಭೆ ನಡೆದಿದೆ. ಈ ಸಭೆಯಲ್ಲೂ ಕಾಯ್ದೆಗಳನ್ನು ರದ್ದುಗೊಳಿಸುವ ಬೇಡಿಕೆಯನ್ನು ರೈತರು ಸರ್ಕಾರದ ಮುಂದಿಟ್ಟಿದ್ದಾರೆ. ಆದರೆ ಈ ಬೇಡಿಕೆಯನ್ನು ತಿರಸ್ಕರಿಸಿರುವ ಸರ್ಕಾರ, ಮತ್ತೊಂದು ಆಯ್ಕೆ ನೀಡಿದೆ.
ಈ ಕುರಿತ ಮುಂದಿನ ಚರ್ಚೆಯನ್ನು ಜನವರಿ 4ರಂದು ನಿಗದಿಗೊಳಿಸಿದೆ. ಸಭೆ ನಂತರ ಮಾತನಾಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈತರೊಂದಿಗೆ ಮುಕ್ತವಾಗಿ ಮಾತುಕತೆ ನಡೆದಿದ್ದು, ಎರಡು ವಿಷಯಗಳಲ್ಲಿ ಒಮ್ಮತಕ್ಕೆ ಬರಲಾಗಿದೆ, ಸಕಾರಾತ್ಮಕವಾಗಿ ಸಭೆ ನಡೆದಿದೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಕಾಯ್ದೆ ರದ್ದತಿ ಬದಲು ಕಾಯ್ದೆಗಳ ಪರಿಶೀಲನೆಗೆ ಸಮಿತಿ ರಚಿಸುವ ಪ್ರಸ್ತಾವವನ್ನು ರೈತರ ಮುಂದಿಟ್ಟಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತ ಸಂಘಗಳು, "ಸರ್ಕಾರದೊಂದಿಗಿನ ಮಾತುಕತೆ ಸಕಾರಾತ್ಮಕವಾಗಿಯೇ ಇತ್ತು. ಆದರೆ ಸರ್ಕಾರ ನಮ್ಮ ಹೋರಾಟವನ್ನು ಕೊನೆಗೊಳಿಸಲು ತಿಳಿಸಿದೆ. ಇದರ ಬದಲು ಸಮಿತಿ ರಚನೆ ಪ್ರಸ್ತಾವವನ್ನು ಇಟ್ಟಿದೆ. ಆದರೆ ನಾವು ಸರ್ಕಾರದ ಮಾತನ್ನು ಕೇಳುವುದಿಲ್ಲ" ಎಂದು ತಮ್ಮ ಸ್ಪಷ್ಟ ನಿಲುವನ್ನು ಪ್ರಕಟಿಸಿವೆ.

"ನಮ್ಮ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ. ನಾವು ಯಾವುದೇ ಸಮಿತಿ ರಚನೆಗೂ ಒಪ್ಪುವುದಿಲ್ಲ. ಮುಂದಿನ ಸಭೆಯಲ್ಲಿ ಕನಿಷ್ಠ ಬೆಂಬಲ ಬೆಲೆಯ ಕುರಿತು ಚರ್ಚೆ ನಡೆಸಲಿದ್ದೇವೆ" ಎಂದು ಅಖಿಲ ಭಾರತ ಕಿಸಾನ್ ಸಭಾ ಪಂಜಾಬ್ ಅಧ್ಯಕ್ಷ ಬಾಲಕರಣ್ ಸಿಂಗ್ ಬ್ರಾರ್ ತಿಳಿಸಿದ್ದಾರೆ.
"ಇಂದಿನ ಸಭೆಯಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ ಹಾಗೂ ವಿದ್ಯುತ್ ಗೆ ಸಂಬಂಧಿಸಿದಂತೆ ಸಮಸ್ಯೆ ಇತ್ಯರ್ಥವಾಗಿದೆ. ಆದರೆ ನಮ್ಮ ಇನ್ನೂ ಎರಡು ಪ್ರಮುಖ ಬೇಡಿಕೆಗಳು ಇತ್ಯರ್ಥಗೊಳ್ಳುವುದು ಬಾಕಿಯಿದೆ. ಕನಿಷ್ಠ ಬೆಂಬಲ ಬೆಲೆ ಹಾಗೂ ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳ ಹಿಂಪಡೆಯುವಿಕೆ ಕುರಿತು ಜನವರಿ 4ರಂದು ನಡೆಯುವ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಭಾರತ್ ಕಿಸಾನ್ ಸಂಘದ ವಕ್ತಾರ ರಾಕೇಶ್ ತಿಕೈಟ್ ತಿಳಿಸಿದ್ದಾರೆ.












Click it and Unblock the Notifications