ಜಯಕಾರ ಧಿಕ್ಕಾರದ ನಡುವೆ ಸಕ್ಕರೆದಾತನ ಅಂತ್ಯಕ್ರಿಯೆ
ಬೆಳಗಾವಿ, ನ. 28 : ವಿಠ್ಠಲನಿಗೆ ಜಯವಾಗಲಿ, ರೈತನನ್ನು ಕೊಂದ ಸರ್ಕಾರಕ್ಕೆ ಧಿಕ್ಕಾರ, ಮುಖ್ಯಮಂತ್ರಿಗಳಿಗೆ ಹಿಡಿಶಾಪ, ಕುಟುಂಬ ವರ್ಗದ ಆಕ್ರಂದನ, ಆಕ್ರೋಶಗಳ ನಡುವೆ ಬುಧವಾರ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರಾಯಭಾಗದ ವಿಠಲ ಅರಭಾವಿ ರೈತನ ಅಂತ್ಯಸಂಸ್ಕಾರ ಗುರುವಾರ ನೆರವೇರಿತು. ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಸಾವಿರಾರು ರೈತರು ಈ ದಾರುಣ ಅಂತ್ಯಕ್ಕೆ ಸಾಕ್ಷಿಯಾದರು.
ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡ ರೈತ ವಿಠಲ ಅರಭಾವಿ ಅವರ ಅಂತ್ಯಕ್ರಿಯೆಯನ್ನು ಗುರುವಾರ ಸ್ವ ಗ್ರಾಮವಾದ ರಾಯಭಾಗ ತಾಲೂಕಿನ ಕಂಕನವಾಡಿಯಲ್ಲಿ ನಡೆಸಲಾಯಿತು. ವಿಠಲ ಅವರ ಹಿರಿಯ ಪುತ್ರ ಭೀಮಪ್ಪ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ಗುರುವಾರ ಬೆಳಗ್ಗೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಸಚಿವ ಸತೀಶ್ ಜಾರಕಿಹೊಳಿ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ವಿಠಲ ಅರಭಾವಿ ಅವರ ನಿವಾಸಕ್ಕೆ ಭೇಟಿ ನೀಡಿ, ಮೃತ ರೈತನಿಗೆ ಅಂತಿಮ ನಮನ ಸಲ್ಲಿಸಿದರು. [ರೈತನ ಆತ್ಮಹತ್ಯೆಯ ಸುತ್ತಮುತ್ತ]

ನೂರಾರು ರೈತರು ವಿಠಲ ಅರಬಾವಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ವಿಠಲ ಅವರ ಸಾವಿಗೆ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರಣ ಎಂದು ಆರೋಪಿಸಿದ ರೈತರು ಧಿಕ್ಕಾರ ಕೂಗಿದರು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಸ್ತ್ ಏರ್ಪಡಿಸಲಾಗಿತ್ತು. ಎಸ್ಪಿ ಡಾ.ಚಂದ್ರಗುಪ್ತ ಸೇರಿದಂತೆ ಹಿರಿಯ ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. (ರೈತ ಆತ್ಮಹತ್ಯೆ : ಸರ್ಕಾರಕ್ಕೆ ಪ್ರತಿಪಕ್ಷಗಳ ಗುದ್ದು)
ಸ್ವಯಂಘೋಷಿತ ಬಂದ್ : ಬುಧವಾರ ರಾತ್ರಿ ವಿಠಲ ಅರಭಾವಿ ಶವ ಗ್ರಾಮಕ್ಕೆ ಆಗಮಿಸಿದ ಬಳಿಕ ಗ್ರಾಮದಲ್ಲಿ ಸ್ವಯಂ ಘೋಷಿತ ಬಂದ್ ಜಾರಿಮಾಡಲಾಗಿದೆ. ಗುರುವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಗ್ರಾಮಕ್ಕೆ ಆಗಮಿಸುವ ರಸ್ತೆಗಳನ್ನು ಬಂದ್ ಮಾಡಿದ್ದ ರೈತ ಸಂಘದ ಕಾರ್ಯಕರ್ತರು ಟೈರ್ ಗಳಿವೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪರಿಹಾರ ವಿತರಣೆ : ಮೃತ ರೈತನ ಕುಟುಂಬಕ್ಕೆ ಸರ್ಕಾರ 10 ಲಕ್ಷ ರೂ.ಗಳ ಪರಿಹಾರ ಘೋಷಣೆ ಮಾಡಿದೆ. ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೃತ ರೈತನ ಇಬ್ಬರು ಪತ್ನಿಯರಿಗೆ ಪಕ್ಷದ ವತಿಯಿಂದ ಎರಡೂವರೆ ಲಕ್ಷ ಪರಿಹಾರ ವಿತರಣೆ ಮಾಡಿದರು.












Click it and Unblock the Notifications