ಕೆ.ಆರ್.ಪೇಟೆಯಲ್ಲಿ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ
ಮಂಡ್ಯ, ಜುಲೈ 20 : ಮಂಡ್ಯ ಜಿಲ್ಲೆಯಲ್ಲಿ ರೈತರ ಸರಣಿ ಆತ್ಮಹತ್ಯೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಒಬ್ಬರ ಮೇಲೊಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಕಳೆದೆರಡು ವರ್ಷಗಳಿಂದ ಕೃಷಿ ಮಾಡಲು ಸಾಧ್ಯವಾಗದ ರೈತರು ತಾವು ಮಾಡಿದ ಸಾಲದ ಹೊರೆಯನ್ನು ತಾಳಲಾರದೆ ಸಾವಿಗೆ ಶರಣಾಗುತ್ತಿದ್ದಾರೆ.
ಇದೀಗ ಕೆ.ಆರ್.ಪೇಟೆ ಅಗ್ರಹಾರ ಬಡವಾಣೆಯ ನಿವಾಸಿ ರುದ್ರೇಗೌಡ ಅವರ ಮಗ ಶಂಕರ್ (35) ಎಂಬಾತ ಸಾಲಭಾದೆ ತಾಳಲಾರದೆ ಮಂಗಳವಾರ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ್ದು, ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈತನಿಗೆ ಎರಡು ಎಕರೆ ಜಮೀನಿದ್ದು, ಬೆಳೆ ಬೆಳೆಯಲು ಬ್ಯಾಂಕ್ ಹಾಗೂ ಕೈ ಸಾಲವಾಗಿ ಸುಮಾರು ಮೂರು ಲಕ್ಷ ರೂಪಾಯಿಯನ್ನು ಪಡೆದಿದ್ದನು ಎನ್ನಲಾಗಿದೆ.
ಪ್ರತಿವರ್ಷವೂ ನೀರಿನ ಸಮಸ್ಯೆಯಿಂದಾಗಿ ಬೆಳೆಬೆಳೆಯಲಾಗದೆ ಮಾಡಿದ ಸಾಲಕ್ಕೆ ಬಡ್ಡಿಯೂ ಕಟ್ಟಲಾಗದೆ ಪರದಾಡುವಂತಾಗಿತ್ತು.
ಸದಾ ಸಾಲದ ಬಗ್ಗೆಯೇ ಯೋಚಿಸುತ್ತಿದ್ದ ಈತ ಸಾಲಗಾರರ ಕಾಟ ತಾಳಲಾರದೆ ಮಂಗಳವಾರ ರಾತ್ರಿ ಮನೆಯಲ್ಲಿದ್ದ ಕ್ರಿಮಿನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು.
ಇದನ್ನು ಕಂಡ ಮನೆಯವರು ಕೂಡಲೇ ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ.
ಈತನಿಗೆ ಹೆಂಡತಿ, ಒಬ್ಬ ಪುತ್ರ, ಪುತ್ರಿಯಿದ್ದಾಳೆ. ಈ ಸಂಬಂಧ ಕೆ.ಆರ್.ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.