Krishi Mela 2022 : ಕೃಷಿ ಮೇಳಕ್ಕೆ ತೆರೆ: 17.35 ಲಕ್ಷ ಜನ ಭೇಟಿ, 9 ಕೋಟಿ ರೂ. ವಹಿವಾಟು
ಬೆಂಗಳೂರು, ನವೆಂಬರ್ 06: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಕಳೆದ ನಾಲ್ಕು ದಿನದಿಂದ ನಡೆದ ಕೃಷಿಮೇಳ ಭಾನುವಾರ ತೆರೆ ಕಂಡಿತು. ಈ ವೇಳೆ ಒಟ್ಟು 17.35 ಲಕ್ಷ ಜನ ಭೇಟಿ ನೀಡಿದ್ದು, 9 ಕೋಟಿ ರೂ. ವಹಿವಾಟು ನಡೆದಿದೆ.
ಕೃಷಿ ಮೇಳದ ಕೊನೆಯ ದಿನ ಭಾನುವಾರ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ವಿ.ಸುರೇಶ್ ಮಾತನಾಡಿ, ಕೃಷಿ ಮೇಳಕ್ಕೆ ನಾಲ್ಕು ದಿನಗಳಲ್ಲಿ ಸುಮಾರು 17 ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದ ಅಗತ್ಯ ಮಾಹಿತಿ ಪಡೆದಿದ್ದಾರೆ. ಮೇಳವನ್ನು ಕಣ್ತುಂಬಿಕೊಂಡಿದ್ದಲ್ಲದೇ ಸಲಕರಣೆ, ಯಂತ್ರೋಪಕರಣ ಖರೀದಿ ಹಾಗೂ ಇನ್ನಿತರ ವ್ಯವಹಾರ ಸೇರಿದಂತೆ ಒಟ್ಟು ಸುಮಾರು ರೂ.9 ಕೋಟಿ ವಹಿವಾಟು ನಡೆದಿದೆ ಎಂದರು.
Krishi Mela 2022: ನ.3 ರಿಂದ ನಾಲ್ಕು ದಿನಗಳ ಕಾಲ ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳ
ಆದಷ್ಟು ಶೀಘ್ರವೇ ರೈತಸ್ನೇಹಿ ಸಂಶೋಧನೆಗಳನ್ನು ಕೃಷಿ ಜಮೀನುಗಳಲ್ಲಿ ನಡೆಸುವ ಮೂಲಕ ಜಿಕೆವಿಕೆ ಆವರಣದ ಹೊರಗೂ ಕೃಷಿ ಕಾರ್ಯಗಳು ಜರುಗಿಸಲಾಗುವುದು. ಮೇಳೆ ವಿವಿಧ ಪ್ರಶಸ್ತಿ ಪಡೆದ ಪ್ರಗತಿಪರ ರೈತರೆಲ್ಲರು ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳನ್ನು ಬೇರೆಯ ರೈತರಿಗೂ ತಲುಪಿಸಬೇಕು. ಕೃಷಿ ವಿಶ್ವವಿದ್ಯಾಲಯದ ರಾಯಭಾರಿಗಳಂತೆ ಕೆಲಸ ಮಾಡಬೇಕು ಎಂದು ಅವರು ಕೋರಿದರು.
ಕೃಷಿ ಜತೆ ಕೃಷಿಕರು ಉದ್ಯಮಿಯು ಆಗಬೇಕು
ರೈತರು ಕೇವಲ ಕೃಷಿ ಜೊತೆಗೆ ಉತ್ತಮ ಉದ್ಯಮಿ ಆಗಬೇಕು ಎಂಬುದು ಕೃಷಿ ವಿಶ್ವವಿದ್ಯಾಲಯದ ಆಶಯವಾಗಿದೆ. ಉತ್ಪಾದನೆ ಮಾಡುವವರು ತಮ್ಮ ಬೆಳೆಗಳನ್ನು ಸಂಸ್ಕರಿಸಿ, ಅದರಿಂದ ಉತ್ತಮವಾದ ಪದಾರ್ಥಗಳನ್ನು ತಯಾರು ಮಾಡುವ ಮೂಲಕ ಮೌಲ್ಯವರ್ಧನೆ ವೃದ್ಧಿಸಿಕೊಳ್ಳಬೇಕು. ಇದರಿಂದ ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ ಎಂದು ಅವರು ರೈತರಿಗೆ ಸಲಹೆ ನೀಡಿದರು.
ಸಂಶೋಧನೆಗಳನ್ನು ಅವಿದ್ಯಾವಂತರಿಗೂ ತಲುಪಿಸಿ
ಸಂಸದ ಎಸ್. ಮುನಿಸ್ವಾಮಿ ಅವರು ಮಾತನಾಡಿ, ರಾಜ್ಯ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ಮತ್ತು ರೈತರು ಮಾಡಿರುವ ಹೊಸ ಸಂಶೋಧನೆ, ಆವಿಷ್ಕಾರಗಳನ್ನು ಕಷ್ಟಪಟ್ಟು ವ್ಯವಸಾಯ ಮಾಡುತ್ತಿರುವ ಅವಿದ್ಯಾವಂತ ರೈತರಿಗೂ ತಲುಪಿಸಬೇಕು. ಇದರಿಂದ ರೈತರ ಆದಾಯ ದ್ವಿಗುಣಗೊಳ್ಳುತ್ತದೆ. ಅವರ ಜೀವನ ಮಟ್ಟ ಸುಧಾರಣಯಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಕೆ.ನಾರಾಯಣಗೌಡ, ಸಂಶೋಧನಾ ನಿರ್ದೇಶಕ ಡಾ.ಕೆ.ಬಿ.ಉಮೇಶ್ ಮತ್ತಿತರರು ಪಾಲ್ಗೊಂಡಿದ್ದರು.
ವಿವಿಧ ಪ್ರಶಸ್ತಿ ಪ್ರದಾನ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿನ ರೈತರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ರೈತ ಮತ್ತು ರೈತ ಮಹಿಳಾ ಪ್ರಶಸ್ತಿ, ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳನ್ನು ಪುರಸ್ಕೃತರಿಗೆ ನೀಡಿ ಗೌರವಸಿಲಾಯಿತು. ಇದರೊಂದಿಗೆ ಮೇಳದಲ್ಲಿದ್ದ ವಸ್ತು ಪ್ರದರ್ಶನ ಮಳಿಗೆಗಳಿಗೆ ಹಾಗೂ ಕೃಷಿ ಮೇಳದ ವಿಶಿಷ್ಟ ಪ್ರಶಸ್ತಿಗಳನ್ನು ವಿವಿಧ ಸಂಸ್ಥೆಗಳಿಗೆ ವಿತರಿಸಲಾಯಿತು.
ಕೊನೆ ದಿನ 6.14 ಲಕ್ಷ ಮಂದಿ ಭೇಟಿ
ನಾಲ್ಕು ದಿನಗಳಲ್ಲಿ ಒಟ್ಟಾರೆ 9 ಕೋಟಿ ರೂ. ವಹಿವಾಟು ನಡೆದಿದ್ದು, 43 ಸಾವಿರಕ್ಕೂ ಹೆಚ್ಚು ಮಂದಿ ಭೋಜನಾಲಯದಲ್ಲಿ ರಿಯಾಯಿತಿ ದರದಲ್ಲಿ ಊಟ ಮಾಡಿದ್ದಾರೆ. ಭಾನುವಾರ ಕೊನೆ ದಿನವಾದ್ದರಿಂದ 6.14 ಲಕ್ಷ ಮಂದಿ ಭೇಟಿ ನೀಡಿದ್ದು, ಇದರಿಂದ 2.94 ಕೋಟಿ ರೂ. ವಹಿವಾಟು ನಡೆದಿದೆ ಎಂದು ಲೆಕ್ಕ ಹಾಕಲಾಗಿದೆ. ನ.3ರಂದು ಮೊದಲ ದಿನ ಮಳೆ ನಡುವೆಯೂ 1.60 ಲಕ್ಷ ಮಂದಿ ಆಗಮಿಸಿದ್ದರು. ಮೂರನೇ ದಿನವಾದ ಶನಿವಾರ 7.16 ಲಕ್ಷ ಜನರು ಭೇಟಿ ನೀಡಿದ್ದರು. ಇದಲ್ಲದೇ ಆನ್ಲೈನ್ನಲ್ಲೂ ಲಕ್ಷಾಂತರ ಮೇಳವನ್ನು ವೀಕ್ಷಿಸಿದ್ದಾರೆ ಎಂದು ಕುಲಪತಿ ಡಾ.ಎಸ್.ವಿ.ಸುರೇಶ್ ವಿವರಿಸಿದರು.