ರೈತರೇ.. ಕಳೆನಾಶಕಕ್ಕೆ ಯೂರಿಯಾ ಮಿಶ್ರಣ ಬೇಡ: ಕೃಷಿ ತಜ್ಞರ ಅಭಿಪ್ರಾಯ
ತೋಟ, ಹೊಲ, ಗದ್ದೆಗಳು ಮತ್ತು ಬದುಗಳಲ್ಲಿ ಕಳೆಗಿಡಗಳು ಬೆಳೆಯುತ್ತಲೇ ಇರುತ್ತವೆ. ಇವುಗಳನ್ನು ನಿಯಂತ್ರಣ ಮಾಡುವುದೇ ರೈತರಿಗೆ ದೊಡ್ಡದೊಂದು ಸಮಸ್ಯೆಯಾಗಿದೆ. ಇವುಗಳನ್ನು ಆಗಾಗ್ಗೆ ಕಡಿಯುವುದರಿಂದ ಒಂದಷ್ಟು ಗೊಬ್ಬರವಾಗುತ್ತದೆ. ಆದರೆ ಈ ಕಳೆಗಿಡಗಳನ್ನು ತೆರವುಗೊಳಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಹೆಚ್ಚಿನವರು ಕಳೆ ಸಸ್ಯಗಳನ್ನು ನಾಶ ಮಾಡಲು ಕಳೆನಾಶಕವನ್ನು ಬಳಸುತ್ತಾರೆ. ಇನ್ನು ಕೆಲವರು ಕಳೆನಾಶಕದೊಂದಿಗೆ ಯೂರಿಯಾ ಗೊಬ್ಬರವನ್ನು ಸೇರಿಸಿ ಎರಚುತ್ತಾರೆ. ಆದರೆ ಇದು ಅಷ್ಟೊಂದು ಒಳ್ಳೆಯದಲ್ಲ ಎನ್ನುವುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.
Recommended Video
ಕೃಷಿ ತಜ್ಞರ ಪ್ರಕಾರ, ಕಳೆಗಿಡಗಳು ಅನಗತ್ಯ ಮತ್ತು ಅನಪೇಕ್ಷಿತ ಸಸ್ಯಗಳಾಗಿದ್ದು, ಅದು ಪ್ರಯೋಜನಕಾರಿ ಬೆಳೆಗಳೊಂದಿಗೆ ಸ್ಪರ್ಧಿಸುತ್ತವೆ. ಬೆಳೆ ಉತ್ಪಾದನಾ ಚಟುವಟಿಕೆಯಲ್ಲಿ ಕಳೆ ನಿಯಂತ್ರಣಾ ಮಾಡುವುದು ರೈತರಿಗೆ ಕಷ್ಟಕರವಾಗುವುದು ಸಹಜ. ಬೆಳೆಗಳ ಸುಧಾರಿತ ಬೇಸಾಯ ಪದ್ಧತಿಗಳ ಪ್ರಕಾರ ಕಳೆನಾಶಕ ಬಳಕೆ ಮಾಡುವುದು ಸಾಮಾನ್ಯ.
ನೀರಿಲ್ಲದ ನೆಲದಲ್ಲಿ ಸಹಜ ಕೃಷಿಯಿಂದ ಗೆದ್ದ ಕೋಲಾರದ ರೈತ
ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಗೊಬ್ಬರ ಮಣ್ಣಿಗೆ ಸೇರುತ್ತಿದೆ
ಇತ್ತೀಚಿನ ದಿನಗಳಲ್ಲಿ ರೈತರು ಕಳೆನಾಶಕವನ್ನು ಯೂರಿಯಾ ಜೊತೆ ಮಿಶ್ರಣ ಮಾಡಿ ಎರಚುವುದು ಕಂಡುಬರುತ್ತದೆ. ಇದರಿಂದ ಯೂರಿಯಾ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿಗೆ ಸೇರಿಸಿದಂತಾಗುವುದು. ಈಗಿನ ಪರಿಸ್ಥಿತಿಯಲ್ಲಿ ರಸಗೊಬ್ಬರ ಬೆಲೆ ಹೆಚ್ಚಳವಾಗುತ್ತಿರುವುದರಿಂದ ಯೂರಿಯಾ ಬಳಕೆಯಿಂದ ಬೆಳೆ ಉತ್ಪಾದನಾ ವೆಚ್ಚ ಹೆಚ್ಚಾಗುವುದರ ಜೊತೆಗೆ ಯೂರಿಯಾ ಬಳಕೆ ವ್ಯರ್ಥವಾಗುತ್ತದೆ.
ಮಣ್ಣು ಹುಳಿಯಾಗಿ ಪರಿವರ್ತಿತಗೊಳ್ಳುತ್ತದೆ
ಇನ್ನು ಅಧಿಕ ಪ್ರಮಾಣದ ಯೂರಿಯಾ ಗೊಬ್ಬರ ಬಳಕೆಯಿಂದ ಮಣ್ಣಿನಲ್ಲಿ ರಾಸಾಯನಿಕ ಗುಣಧರ್ಮಗಳು ವ್ಯತ್ಯಾಸವಾಗಿ ಮಣ್ಣು ಹುಳಿಯಾಗಿ ಪರಿವರ್ತಿತಗೊಳ್ಳುತ್ತದೆ. ಮಣ್ಣಿನಲ್ಲಿರುವ ಫಲವತ್ತತೆ ಹೆಚ್ಚಿಸುವ ಸೂಕ್ಷ್ಮಾಣು ಜೀವಿ ನಾಶವಾಗುತ್ತದೆ. ಇದಲ್ಲದೆ ಸಸ್ಯಗಳು ಬೆಳೆವಣಿಗೆ ಮಾತ್ರ ಹೆಚ್ಚಾಗಿ ಹೂವು, ಕಾಯಿ ಕಟ್ಟುವ ಪ್ರಮಾಣ ಕಡಿಮೆಯಾಗಿ ಇಳುವರಿಯಲ್ಲಿ ನಷ್ಟವಾಗುತ್ತದೆ.
ಕಲ್ಲು ಭೂಮಿಯಲ್ಲಿ ಅಂಜದೆ ಅಂಜೂರ ಬೆಳೆದ ಕೊಪ್ಪಳ ರೈತ!
ಕೀಟ ಮತ್ತು ರೋಗಗಳ ಬಾಧೆ ಹೆಚ್ಚಾಗುವುದು
ಸಸ್ಯಗಳು ಸಮೃದ್ಧಿಯಾಗಿ ಬೆಳೆದು ಮೃದುತ್ವ ಹೆಚ್ಚಾಗಿ, ಕೀಟ ಮತ್ತು ರೋಗಗಳ ಬಾಧೆ ಹೆಚ್ಚಾಗುವುದು. ಯೂರಿಯಾ ಗೊಬ್ಬರವು ಇತರೆ ರಾಸಾಯನಿಕ ಗೊಬ್ಬರಗಳಿಗಿಂತ ವೇಗವಾಗಿ ಕರಗುವುದರಿಂದ, ಬೆಳೆಗಳ ಶಿಫಾರಸ್ಸಿನ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಒದಗಿಸಿದ್ದಲ್ಲಿ ಬೆಳೆಗಳಿಗೆ ಉಪಯೋಗವಾಗದೆ ಆವಿಯಾಗುವುದು ಹಾಗೂ ನೀರಿನಲ್ಲಿ ಹರಿದು ಪೋಲಾಗುತ್ತದೆ.
ಮರಳು ಜೊತೆ ಮಿಶ್ರಣ ಮಾಡುವುದು ಒಳ್ಳೆಯದು
ಇದೆಲ್ಲ ಸಮಸ್ಯೆಗಳು ಎದುರಾಗುವುದರಿಂದಾಗಿ ರೈತರು ಕಳೆನಾಶಕವನ್ನು ಯೂರಿಯಾ ಗೊಬ್ಬರದೊಂದಿಗೆ ಮಿಶ್ರಣ ಮಾಡದೆ, ಮರಳು ಜೊತೆ ಮಿಶ್ರಣ ಮಾಡಿ ಎರಚುವುದು ಒಳ್ಳೆಯದು. ಇದರಿಂದ ಉತ್ಪಾದನೆ ಖರ್ಚು ಕಡಿಮೆಗೊಳಿಸಿ ಪರಿಣಾಮಕಾರಿಯಾಗಿ ಕಳೆನಾಶಕಗಳಿಂದ ಕಳೆ ನಿಯಂತ್ರಣ ಮಾಡಬಹುದಾಗಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.