ಮಂಡ್ಯ ರೈತರಿಂದಲೂ ತರಕಾರಿ ಖರೀದಿಸಿದ ಸಂಸದ ಡಿ.ಕೆ.ಸುರೇಶ್
ಮಂಡ್ಯ, ಏಪ್ರಿಲ್ 15: ರೈತರಿಂದ ತರಕಾರಿಯನ್ನು ಖರೀದಿಸಿ ಜನರಿಗೆ ವಿತರಣೆ ಮಾಡುವ ಕಾರ್ಯಕ್ಕೆ ಸಂಸದ ಡಿ.ಕೆ.ಸುರೇಶ್ ಮುಂದಾಗಿದ್ದಾರೆ. ಈಗಾಗಲೇ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಟಿ.ಎಸ್.ಛತ್ರ, ಅತ್ತಿಗನಹಳ್ಳಿ, ಹಳೇಬೀಡು, ಬೋಳೇನಹಳ್ಳಿ ಗ್ರಾಮಗಳ ರೈತರ ತೋಟಗಳಿಗೆ ತೆರಳಿ ರೈತರಿಂದ ಸುಮಾರು 150 ಟನ್ಗೂ ಹೆಚ್ಚು ಎಲೆಕೋಸು, ಟೊಮೆಟೊ, ಕಲ್ಲಂಗಡಿ ಹಾಗೂ ಕುಂಬಳ ಕಾಯಿಯನ್ನು ಖರೀದಿಸಿದ್ದಾರೆ.
ಕೊರೊನಾ ಲಾಕ್ಡೌನ್ ಆಗಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ತರಕಾರಿಗಳನ್ನು ವಿತರಣೆ ಮಾಡುವುದಕ್ಕಾಗಿ ಸಂಸದ ಡಿ.ಕೆ.ಸುರೇಶ್ ಅವರು ರೈತರಿಂದ ತರಕಾರಿ ಖರೀದಿಸುವ ಕಾರ್ಯಕ್ಕೆ ಮುಂದಾಗಿದ್ದು, ಈ ಕಾರ್ಯದಿಂದ ಬಹುತೇಕ ರೈತರು ಸಮಾಧಾನಗೊಂಡಿದ್ದಾರೆ.
ತರಕಾರಿ ಖರೀದಿಸುವ ಸಲುವಾಗಿ ಪಾಂಡಪುರ ತಾಲೂಕಿಗೆ ಭೇಟಿ ನೀಡಿರುವ ಅವರು, ವಿವಿಧ ಗ್ರಾಮಗಳ ರೈತರ ಜಮೀನಿಗೆ ತೆರಳಿ ತರಕಾರಿ ಖರೀದಿಸಿದ್ದಾರೆ. ಕೊರೊನಾದಿಂದಾಗಿ ಬಹುತೇಕ ಎಪಿಎಂಸಿಗಳು, ಮಾರುಕಟ್ಟೆಗಳು ಬಂದ್ ಆಗಿದ್ದು, ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಾಣಿಕೆ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ನೇರವಾಗಿಯೇ ರೈತರಿಂದ ತರಕಾರಿಗಳನ್ನು ಖರೀದಿಸಿ ತಮ್ಮ ಡಿ.ಕೆ.ಚಾರಿಟಬಲ್ ಟ್ರಸ್ಟ್ ಮೂಲಕ ರಾಮನಗರ ಲೋಕಸಭಾ ಕ್ಷೇತ್ರದ ಜನರಿಗೆ ಉಚಿತವಾಗಿ ತರಕಾರಿಗಳನ್ನು ವಿತರಣೆ ಮಾಡುವುದು ಸಂಸದ ಡಿ.ಕೆ.ಸುರೇಶ್ ಅವರ ಉದ್ದೇಶವಾಗಿದೆ.

ಇಂದು ತಾವೇ ಟಿ.ಎಸ್.ಛತ್ರ ಗ್ರಾಮದ ರೈತರ ಜಮೀನಿಗೆ ತೆರಳಿ ತರಕಾರಿ ಗುಣಮಟ್ಟವನ್ನು ಪರಿಶೀಲಿಸಿ ಖರೀದಿಸಿದ್ದಾರೆ. ಈ ಕುರಿತಂತೆ ಮಾತನಾಡಿದ ಡಿ.ಕೆ.ಸುರೇಶ್, "ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೂ ತಂದಿದ್ದೇವೆ. ಅಲ್ಲದೆ ನಮ್ಮ ಶಾಸಕರೇ ಖುದ್ದು ರೈತರಿಂದ ತರಕಾರಿಗಳನ್ನು ಖರೀದಿಸಲು ಮುಂದಾಗಿದ್ದಾರೆ" ಎಂದು ತಿಳಿಸಿದ್ದಾರೆ.












Click it and Unblock the Notifications