'ಸಾಲ ಮನ್ನಾ' ಸಿದ್ದುಗೆ ಕುಮಾರಸ್ವಾಮಿ ತರಾಟೆ!

ಇದೇ ವೇಳೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ತೆಗೆದುಕೊಂಡಿರುವ ಕ್ರಮಗಳನ್ನು ಶ್ಲಾಘಿಸಿದ್ದಾರೆ. ಜತೆಗೆ, ಕಠಿಣವೆನಿಸಬಹುದಾದ ಇನ್ನೂ ಒಂದಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಲಿ ಎಂದು ಆಶಿಸಿದ್ದಾರೆ.
30 ರೂಪಾಯಿಗೆ 30 ಕೆಜಿ ಅಕ್ಕಿ ಕೊಡೋದು ಸರಿ. ಆದರೆ ಫಲಾನುಭವಿಗಳನ್ನು ಗುರುತಿಸುವ ಮಾನದಂಡವಾದ BPL ಕಾರ್ಡ್ ವಿತರಣೆಯನ್ನು ಮೊದಲು ಸಮರ್ಪಕವಾಗಿ ಮಾಡಲಿ. ಬಿಪಿಎಲ್ ಕಾರ್ಡ್ ವಿತರಣೆಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಯೋಜನೆ ಯಶಸ್ವಿಯಾಗಬೇಕಾದರೆ ಮೊದಲು ಅದನ್ನು ಸರಿಪಡಿಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯಪೂರ್ವಕ ಮನವಿ ಮಾಡಿದ್ದಾರೆ.
ಇನ್ನು, ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಸಮುದಾಯದವರು ಹಣಕಾಸು ನಿಗಮಗಳಲ್ಲಿ ಪಡೆದಿರುವ ಸಾಲಗಳನ್ನು ಮೊದಲ ಎಸೆತದಲ್ಲೇ ಸಿದ್ದರಾಮಯ್ಯ ಮನ್ನಾ ಮಾಡಿರುವುದು ಸ್ವಾಗತಾರ್ಹ. ಆದರೆ, ಅದೇ ರೀತಿ ರೈತರು ಪಡೆದಿರುವ ಎಲ್ಲ ರೀತಿಯ ಸಾಲ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಬ್ಸಿಡಿ ಹೆಚ್ಚಳ ದೊಡ್ಡ ಸಾಧನೆಯಲ್ಲ. ಪ್ರತಿ ವರ್ಷ ಯಾವುದೇ ಸರ್ಕಾರವಿದ್ದರೂ ಸಾಮಗ್ರಿಗಳ ಬೆಲೆ ಹೆಚ್ಚಳ ಆಧಾರದಲ್ಲಿ ಹೆಚ್ಚಳ ಮಾಡುತ್ತದೆ. ಇದಕ್ಕೆ ಬೆನ್ನು ತಟ್ಟಿಕೊಳ್ಳಬೇಕಿಲ್ಲ ಎಂದೂ ಕುಮಾರಸ್ವಾಮಿ ಕಟಕಿಯಾಡಿದರು.












Click it and Unblock the Notifications