ಬೆಂಗಳೂರು ಹೋಟೆಲ್ ತಿಂಡಿ ಆಗಲಿದೆ ದುಬಾರಿ

5 ರು ಡೀಸೆಲ್ ದರ ಏರಿಕೆಯಾಗುತ್ತಿದ್ದಂತೆ ಸರಕು ಸಾಮಾಗ್ರಿ ದರಗಳು ಶೇ 5 ರಿಂದ 10 ರಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ. ಇದರಿಂದಾಗಿ ಬೆಂಗಳೂರಿನ ಹೋಟೆಲ್ ಗಳಲ್ಲಿ ರುಚಿರುಚಿ ತಿಂಡಿ ತಿನ್ನುವವರ ಜೇಬಿಗೆ ಕತ್ತರಿ ಬೀಳಲಿದೆ.
ಡೀಸೆಲ್ ದರ ಏರಿಕೆಯಿಂದ ಹೋಟೆಲ್ ಉದ್ಯಮದ ಮೇಲೆ ಭಾರಿ ಪರಿಣಾಮವಾಗಿದೆ. ಹೋಟೆಲ್ ಉದ್ಯಮ ಈಗಾಗಲೇ ನೌಕರರ ಸಮಸ್ಯೆ ಹಾಗೂ ಅಡುಗೆ ಅನಿಲ ದರ ಏರಿಕೆ ಎದುರಿಸುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಹೋಟೆಲ್ ತಿಂಡಿ ತಿನಿಸುಗಳ ದರ ಏರಿಕೆ ಮಾಡಬೇಕಾಗಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ವಾಸುದೇವ ಅಡಿಗ ಹೇಳಿದ್ದಾರೆ.
ಜಯನಗರದ ಗಣೇಶ್ ದರ್ಶಿನಿ, ಉಪಾಹರ ದರ್ಶಿನಿ, ಅಡಿಗಾಸ್, ಮಯ್ಯಸ್ ಹೋಟೆಲ್ ಗಳು 2-3 ರು ಏರಿಕೆ ಮಾಡಿದೆ. ಉಳಿದೆಡೆಗಳಲ್ಲೂ ದರ ಏರಿಕೆ ಬಗ್ಗೆ ಚಿಂತನೆ ನಡೆದಿದೆ. ಹೋಟೆಲ್ ಮಾಲೀಕರ ಸಂಘ ಕೂಡಾ ಬೆಲೆ ಏರಿಕೆಗೆ ಸಮ್ಮತಿ ಸೂಚಿಸುವ ಲಕ್ಷಣಗಳಿದೆ.
ಕರ್ನಾಟಕದಲ್ಲಿ ಈಗಾಗಲೆ ಬರ ಪರಿಸ್ಥಿತಿ ಇದೆ. ಈ ನಡುವೆ ಡೀಸೆಲ್ ದರ ಏರಿಕೆ ಮಾಡಿದರೆ, ಧಾನ್ಯ, ತರಕಾರಿ, ಅಗತ್ಯ ಆಹಾರ ಸರಕುಗಳ ಪೂರೈಕೆ ಹಾಗೂ ದರ ಏರಿಕೆ ಹೊರೆ ಜನ ಸಾಮಾನ್ಯರ ಮೇಲೆ ಬೀಳಲಿದೆ. ಕೃಷಿ ಉತ್ಪನ್ನ ಇಳಿಮುಖವಾಗಿರುವ ಸಂದರ್ಭದಲ್ಲಿ ಬೆಲೆ ಏರಿಕೆ ಅಗತ್ಯವೇ ಎಂದು ಬೆಂಗಳೂರು ರೀಟೈಲ್ ಆಹಾರ ಸಾಮಾಗ್ರಿ ಹಾಗೂ ಧಾನ್ಯ ಉದ್ಯಮಿಗಳ ಸಂಘದ ಅಧ್ಯಕ್ಷ ರಮೇಶ್ ಚಂದ್ರ ಹೇಳಿದ್ದಾರೆ.
ಅಕ್ಕಿ ದರ ರು 3 ನಿಂದ ರು 5 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಧಾನ್ಯಗಳ ಬೆಲೆ ಏರಿಕೆ ತಳ್ಳಿಹಾಕುವಂತಿಲ್ಲ. ಸಾರಿಗೆ ಸಂಸ್ಥೆಗಳ ಆದಾಯಕ್ಕೆ ಖೋತಾ ಉಂಟಾದರೆ ಬೆಲೆ ಏರಿಕೆ ಮಾಡಲೇಬೇಕಾಗುತ್ತದೆ ಎಂದು ರಮೇಶ್ ಚಂದ್ರ ಹೇಳಿದ್ದಾರೆ.
ಬೆಂಗಳೂರಿನಿಂದ ಚೆನ್ನೈಗೆ ಸರಕು ಸಾಗಿಸಲು ಟೋಲ್ ದರ 2,500 ರು ನೀಡುವುದರ ಜೊತೆಗೆ 500 ರು ಹೆಚ್ಚುವರಿ ನೀಡಬೇಕಾಗುತ್ತದೆ. ಸೆ.20 ರ ಭಾರತ್ ಬಂದ್ ಗೆ ನಮ್ಮ ಬೆಂಬಲವಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆ ಶಿವ ಷಣ್ಮುಗಂ ಹೇಳಿದ್ದಾರೆ.












Click it and Unblock the Notifications