ಕೊಡಗು; ಕಾಳುಮೆಣಸು ಬೆಳೆಗೆ ರೋಗ, ಹತೋಟಿಗೆ ಸಲಹೆಗಳು
ಕೊಡಗು, ಜುಲೈ 05; ಕಾಳುಮೆಣಸು ಕೊಡಗು ಜಿಲ್ಲೆಯ ಬಹು ವಾರ್ಷಿಕ ಸಾಂಬಾರು ಬೆಳೆಯಾಗಿದೆ. ಆದರೆ ಈಗ ಜಿಲ್ಲೆಯ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿನ ಬೆಳೆಗಳು ಸೊರಗಿ, ನಷ್ಟ ಉಂಟಾಗುತ್ತಿದೆ. ಇದಕ್ಕೆ ಮೂಲ ಕಾರಣ ನಂಜಾಣುವಿನ ಭಾದೆಗೆ ಬಳ್ಳಿಗಳು ತುತ್ತಾಗುತ್ತಿರುವುದು.
ಕೊಡಗು ಜಿಲ್ಲೆಯಲ್ಲಿ ಕಾಳುಮೆಣಸು ಬೆಳೆಯನ್ನು ಕಾಫಿ, ಅಡಿಕೆ, ಏಲಕ್ಕಿ ತೋಟದಲ್ಲಿ ಅಂತರ ಬೆಳೆಯಾಗಿ ಬೆಳೆಯಲಾಗುತ್ತಿದೆ. ಇತ್ತೀಚೆಗೆ ಕಾಳು ಮೆಣಸು ಬೆಳೆಗೆ ಅನೇಕ ರೋಗಗಳು ತೀವ್ರಗತಿಯಲ್ಲಿ ಕಂಡು ಬರುತ್ತಿದ್ದು, ಕೃಷಿಕನಿಗೆ ಹೆಚ್ಚು ಆರ್ಥಿಕ ಹಾನಿ ಉಂಟು ಮಾಡುತ್ತಿವೆ.

ಅದರಲ್ಲಿಯೂ ಮುಖ್ಯವಾಗಿ ಕೊಡಗು ಜಿಲ್ಲೆಯಾದ್ಯಂತಹ ಕಾಫಿ ತೋಟದಲ್ಲಿ ಬೆಳೆಸಲಾಗುತ್ತಿರುವ ಕಾಳುಮೆಣಸಿನ ಬಳ್ಳಿಗಳಲ್ಲಿ ಎಲೆಗಳು ಚಿಕ್ಕದಾಗಿ, ಬಳ್ಳಿಗಳು ಸಾಯುವುದು ಅಥವಾ ಬೆಳವಣಿಗೆಯೂ ಇಲ್ಲದೆ, ಕಾಳುಮೆಣಸು ಬಿಡದೆ ಇರುವ ಬಳ್ಳಿಗಳು ದಿನೇ ದಿನೇ ಹೆಚ್ಚಾಗುತ್ತಿವೆ.
10 ತೋಟಗಳಲ್ಲಿ ಪ್ರಾತ್ಯಕ್ಷಿಕೆ; ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಂಜಾಣುವಿನ ಭಾದೆಗೆ ತುತ್ತಾಗಿರುವ ಬಳ್ಳಿಗಳನ್ನು ಪುನಶ್ಚೇತನಗೂಳಿಸಲು ಕೇರಳ ರಾಜ್ಯದ ಕ್ಯಾಲಿಕಟ್ ಭಾರತೀಯ ಸಾಂಬಾರು ಬೆಳೆಗಳ ಸಂಶೋಧನ ಸಂಸ್ಥೆ ಶಿಫಾರಸ್ಸು ಮಾಡಿರುವ ಸಮಗ್ರ ತಂತ್ರಜ್ಞಾನಗಳ ಪರಿಚಯವನ್ನು ರೈತರಿಗೆ ತಿಳಿಸಲು ಜಿಲ್ಲೆಯ 10 ತೋಟಗಳಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ.
ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಇದರ ಸಸ್ಯ ಸಂರಕ್ಷಣಾ ತಜ್ಞರಾದ ಡಾ. ಕೆ. ವಿ. ವೀರೇಂದ್ರ ಕುಮಾರ್ ವಿವಿಧ ಸಮಗ್ರ ರೋಗ ನಿರ್ವಹಣಾ ತಂತ್ರಜ್ಞಾನಗಳಾದ ವರ್ಷದಲ್ಲಿ ಜೂನ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಪೆಪ್ಪೆರ್ ಸ್ಪೆಷಲ್ ಮತ್ತು ಸಮುದ್ರ ಕಳೆಯ ಸಿಂಪರಣೆ, ಕಹಿ ಬೇವಿನ ಹಿಂಡಿಯ ಪುಡಿಯನ್ನು ಬುಡಕ್ಕೆ ಹಾಕುವ ಮತ್ತು ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಬುಡಕ್ಕೆ ಸುರಿಯುವ, ಡಿಸೆಂಬರ್ ತಿಂಗಳಿನಲ್ಲಿ ಪೋಟ್ಯಾಷಿಯಂ ನೈಟ್ರೇಟ್ನ ಸಿಂಪರಣೆ ಮಾಡುವ ಪ್ರಾತ್ಯಕ್ಷಿಕೆಯನ್ನು ಕೊಣನಕಟ್ಟೆಯ ಕುಶಾಲಪ್ಪನವರ ತೋಟದಲ್ಲಿ ತೋರಿಸಿಕೊಟ್ಟರು.
ಈ ಸಮಗ್ರ ತಂತ್ರಜ್ಞಾನಗಳನ್ನು ಕಾಳುಮೆಣಸಿನ ತೋಟಗಳಲ್ಲಿ ಅಳವಡಿಸಿಕೊಂಡರೆ ನಂಜಾಣುವಿನ ಭಾದೆಗೆ ತುತ್ತಾಗಿರುವ ಬಳ್ಳಿಗಳನ್ನು ಪುನಶ್ಚೇತನಗೊಳಿಸಬಹುದು ಎಂದು ರೈತರಿಗೆ ಸಲಹೆ ನೀಡಲಾಗಿದೆ.
ಹೆಚ್ಚಿನ ಆದಾಯ; ಕಾಫಿ ಬೆಳೆಯ ಬೆಲೆ ಏರಿಳಿತದ ಕಾರಣ ಕೊಡಗು ಜಿಲ್ಲೆಯಲ್ಲಿ ರೈತರಿಗೆ ನಿರೀಕ್ಷಿತ ಆದಾಯ ತಂದುಕೊಡುತ್ತಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಆದಾಯ ಪಡೆಯುವ ಬೆಳೆಯಾಗಿರುವ ಕರಿಮೆಣಸು (ಕಾಳುಮೆಣಸು) ಉತ್ತಮ ದರವೂ ದೊರೆಯುತ್ತಿದೆ. ಉತ್ತಮವಾಗಿ ನಿರ್ವಹಣೆ ಮಾಡಿ ಬೆಳೆಸಿದರೂ ಫಸಲು ನೀಡುವ ಸಮಯಕ್ಕೆ ಯಾವುದಾದರೂ ಒಂದು ರೋಗ ತಗುಲಿ ಬಳ್ಳಿಗಳೇ ನಾಶವಾಗುತ್ತಿದೆ. ಇದರಿಂದಾಗಿ ರೈತರು ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬ ಸ್ಥಿತಿ ಉಂಟಾಗಿದೆ.
ಜಿಲ್ಲೆಯಲ್ಲಿ ಕಾಳುಮೆಣಸನ್ನು ಪ್ರತ್ಯೇಕವಾಗಿ ಬೆಳೆಯುತ್ತಿಲ್ಲ. ಕಾಫಿ ತೋಟದ ನಡುವೆ ಇರುವ ಮರಗಳಿಗೆ ಬಳ್ಳಿಯನ್ನು ನೆಟ್ಟು ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಹೆಚ್ಚಿನ ರೋಗಗಳು ತಗುಲದೆ ಇದ್ದಾಗ ಇದು ಬೆಳೆಗಾರರ ಪಾಲಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ತರುವ ಬೆಳೆಯಾಗಿತ್ತು. ಆದರೆ ಈಗ ಕಾಳುಮೆಣಸಿನ ಬೆಳೆ ಬೆಳೆಯುವುದು ಸವಾಲಿನ ಕೆಲಸವಾಗಿದೆ.












Click it and Unblock the Notifications