ಉಡುಪಿ: ಬ್ರಹ್ಮಾವರದಲ್ಲಿ 2 ವರ್ಷದ ಕೃಷಿ ಡಿಪ್ಲೋಮಾ ಕೋರ್ಸ್ ಮತ್ತೆ ಆರಂಭ
ಉಡುಪಿ, ಜುಲೈ 15: ಕರಾವಳಿ ಭಾಗದ ಕೃಷಿ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿ ನೀಡಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಎರಡು ವರ್ಷ ಕೃಷಿ ಡಿಪ್ಲೋಮಾ ಕೋರ್ಸ್ ಅನ್ನು 2024-25ನೇ ಸಾಲಿನಿಂದ ಮತ್ತೆ ಆರಂಭಿಸಲು ಸರ್ಕಾರ ಒಪ್ಪಿಗೆ ನೀಡಿದೆ.
ಈ ಕುರಿತು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಂದ ಅನುಮೋದನೆಗೊಂಡ ಆದೇಶವನ್ನು ಹೊರಡಿಸಲಾಗಿದೆ. ಈ ಕುರಿತು ಇಂದ್ರ. ಎಂ ಸರ್ಕಾರದ ಅಧೀನ ಕಾರ್ಯದರ್ಶಿ, ಕೃಷಿ ಇಲಾಖೆ (ಸೇವೆಗಳು) ಆದೇಶ ಹೊರಡಿಸಿದ್ದಾರೆ.

ಆದೇಶದ ವಿವರಗಳು: ಸರ್ಕಾರದ ಕಾರ್ಯದರ್ಶಿ, ಕೃಷಿ ಇಲಾಖೆ ಇವರು ಕುಲಸಚಿವರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ-577 204 ಇವರಿಗೆ ಈ ಕುರಿತು ಪತ್ರವನ್ನು ಬರೆದಿದ್ದಾರೆ. ಈ ಆದೇಶ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದಡಿ ಎರಡು ವರ್ಷಗಳ ಡಿಪ್ಲೋಮಾ (ಕೃಷಿ) ಕೋರ್ಸ್ನ 1 ಡಿಪ್ಲೋಮಾ ಕಾಲೇಜನ್ನು 2024-25ನೇ ಸಾಲಿನಿಂದ ಪುನ: ಪ್ರಾರಂಭಿಸಲು ಅನುಮೋದನೆಯನ್ನು ನೀಡುವ ಕುರಿತು ಎಂಬ ವಿಷಯ ಒಳಗೊಂಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ 33ನೇ ಸಮನ್ವಯ ಸಮಿತಿಯ ಹಾಗೂ 7ನೇ ಪರಿಣಿತ ಸಮಿತಿ ಸಭೆಯ ತೀರ್ಮಾನದಂತೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದಡಿಯ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ 2 ವರ್ಷಗಳ ಡಿಪ್ಲೋಮಾ (ಕೃಷಿ) ಕೋರ್ಸ್ ಅನ್ನು ಪ್ರಸ್ತುತ ಲಭ್ಯವಿರುವ ಕಟ್ಟಡ, ಮೂಲ ಸೌಕರ್ಯ ಮತ್ತು ಬೋಧನಾ ಸಿಬ್ಬಂದಿಯನ್ನು ಬಳಸಿಕೊಂಡು ಕೃಷಿ ಡಿಪ್ಲೋಮಾ ಕಾಲೇಜನ್ನು 2024-25ನೇ ಸಾಲಿನಿಂದ ಪುನ: ಪ್ರಾರಂಭಿಸುವಂತೆ ಹಾಗೂ ಈ ಕುರಿತು ಹೆಚ್ಚುವರಿ ಅನುದಾನದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸದೆ ಇರುವ ಷರತ್ತಿಗೊಳಪಟ್ಟು ಸರ್ಕಾರದ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ. ಈ ಷರತ್ತಿನನ್ವಯ ನಿಯಮಾನುಸಾರ ಸೂಕ್ತ ಕ್ರಮವಹಿಸುವಂತೆ ತಮ್ಮನ್ನು ಕೋರಲು ನಾನು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಹೇಳಿದೆ.
ಜಯಪ್ರಕಾಶ ಹೆಗ್ಡೆ ಕೃತಜ್ಞತೆ: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಎರಡು ವರ್ಷ ಕೃಷಿ ಡಿಪ್ಲೋಮಾ ಕೋರ್ಸ್ ಅನ್ನು ಆರಂಭಿಸಲು ಸರ್ಕಾರ ಒಪ್ಪಿಗೆ ನೀಡಿರುವುದಕ್ಕೆ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಫೇಸ್ಬುಕ್ ಪೋಸ್ಟ್ ಹಾಕಿರುವ ಅವರು, 'ಬ್ರಹ್ಮಾವರದ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಸ್ಥಗಿತಗೊಂಡಿದ್ದ ಕೃಷಿ ಡಿಪ್ಲೋಮಾ ಕಾಲೇಜು ಪುನರ್ ಆರಂಭಿಸುವಂತೆ ಮಾನ್ಯ ಕೃಷಿ ಸಚಿವರಾದ ಚಲುವರಾಯಸ್ವಾಮಿಯವರನ್ನು ಭೇಟಿಯಾಗಿ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ ಇದೀಗ ಕೃಷಿ ಕಾಲೇಜನ್ನು ಪುನರ್ ಆರಂಭಿಸುವಂತೆ ಮಂಜೂರುಗೊಳಿಸಿದ ಕೃಷಿ ಸಚಿವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.
ಈ ವರ್ಷದ ಜೂನ್ ತಿಂಗಳಿನಲ್ಲಿ ಬ್ರಹ್ಮಾವರ ಕೃಷಿ ಕಾಲೇಜು ಉಳಿಸಿ ಹೋರಾಟ ಸಮಿತಿ ಕರ್ನಾಟಕ ಸರ್ಕಾರ ಎರಡು ವರ್ಷದ ಡಿಪ್ಲೋಮಾ ಕೃಷಿ ಕೋರ್ಸ್ ಮುಂದುವರೆಸಲು ಅನುಮತಿ ನೀಡಲಿದೆ ಎಂದು ಹೇಳಿದ್ದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ಮಾಡಿ ಡಿಪ್ಲೋಮಾ ಕೋರ್ಸ್ ಮುಂದುವರೆಸಬೇಕು ಎಂದು ಸಮಿತಿ ಮನವಿ ಸಲ್ಲಿಕೆ ಮಾಡಿತ್ತು.












Click it and Unblock the Notifications