ಧಾರವಾಡ ಜಿಲ್ಲೆಯ ಅನ್ನದಾತರ ಮುಖದಲ್ಲಿ ಹರ್ಷ ತರಿಸಿದ ವರುಣದೇವ, ಬಿತ್ತನೆ ಕಾರ್ಯಕ್ಕೆ ಈಗಿನಿಂದಲೇ ಸಿದ್ಧತೆ
ಹುಬ್ಬಳ್ಳಿ, ಮೇ, 23: ಈಗಾಗಲೇ ರಾಜ್ಯಾದ್ಯಂತ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದು, ಇದರಿಂದ ಕೆಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಮತ್ತೆ ಹಲವೆಡೆ ಬಿಸಿಲಿನಿಂದ ಕಾದ ಭೂಮಿ ತಂಪಾಗುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದಂತಾಗಿದೆ. ಅದೇ ರೀತಿ ಹುಬ್ಬಳ್ಳಿಯಲ್ಲಿನ ರೈತರು ಬಿತ್ತನೆ ಕಾರ್ಯಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಂಡಿದ್ದಾರೆ.
ಮುಂಗಾರು ಆರಂಭವಾಗುತ್ತದೆ ಅನ್ನುವಷ್ಟರಲ್ಲಿ ರೈತ ಸಮುದಾಯ ಸಂತೋಷದಿಂದ ಕೃಷಿ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಪ್ರಸಕ್ತ ಮುಂಗಾರು ಜೂನ್ನಲ್ಲಿ ರಾಜ್ಯ ಪ್ರವೇಶಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೇ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಜಿಲ್ಲೆಯ ಅಲ್ಲಲ್ಲಿ ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ. ರೈತರಿಗೆ ಮುಂಗಾರು ಬಿತ್ತನೆಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಕೃಷಿ ಇಲಾಖೆಯೂ ಸಿದ್ಧತೆ ಮಾಡಿಕೊಂಡಿದೆ.

ಧಾರವಾಡ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯಕ್ಕೆ ಈಗಾಗಲೇ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿರುವ ರೈತರು, ಶೇಂಗಾ, ಸೋಯಾಬಿನ್, ಹೆಸರು, ಉದ್ದು, ಗೋವಿನಜೋಳ, ಭತ್ತ, ಆಲೂಗಡ್ಡೆ ಬೆಳೆಗೆ ಭೂಮಿಯನ್ನು ಸಿದ್ಧ ಮಾಡುತ್ತಿದ್ದಾರೆ.
ಕೃಷಿ ಇಲಾಖೆಯಿಂದ ಅಂದಾಜು 20,000 ಕ್ವಿಂಟಾಲ್ ವಿವಿಧ ಬೆಳೆಗಳ ಬಿತ್ತನೆ ಬೀಜ ಹಾಗೂ 35,696 ಟನ್ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಬಿತ್ತನೆ ಆರಂಭಗೊಂಡ ನಂತರ ರೈತರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಬೀಜ, ರಸಗೊಬ್ಬರ ಪೂರೈಸಲು ಕೃಷಿ ಇಲಾಖೆ ಮುಂದಾಗಿದೆ.
ಇನ್ನು ಜಿಲ್ಲೆಯಲ್ಲಿ ಈ ಬಾರಿ 2.73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿಗೆ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಆಯಾ ತಾಲೂಕು ಕೇಂದ್ರಗಳಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೆ ಗೊಬ್ಬರ ಕಳುಹಿಸಲಾಗಿದೆ.
ರೈತರ ಬೇಡಿಕೆಗೆ ಅನುಗುಣವಾಗಿ ಕೊರತೆ ಆಗದಂತ ರಸಗೊಬ್ಬರವನ್ನು ವಿವಿಧೆಡೆ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಮುಂಗಾರು ಮಳೆ ಮೊದಲ ವಾರದಲ್ಲಿ ಪ್ರವೇಶಿಸುವ ನಿರೀಕ್ಷೆ ಇದೆ ಎನ್ನುವಂತಹ ಮಾಹಿತಿಯನ್ನು ಕೃಷಿ ಇಲಾಖೆ ನೀಡಿದೆ.
ದಾವಣಗೆರೆ ಜಿಲ್ಲೆಯಲ್ಲಿನ ಮಳೆಹಾನಿ ವಿವರ
ಜಿಲ್ಲೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಒಂದೆಡೆ ಬಿಸಿಲಿನ ಬೇಗೆಗೆ ತತ್ತರಸಿದ್ದ ಜನರಿಗೆ ವರುಣ ತಂಪೆರೆದರೆ, ಮತ್ತೊಂದೆಡೆ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು, ರೈತರು ಬೆಳೆದಿದ್ದ ಬೆಳೆಗಳು ಜಲಾವೃತವಾಗಿವೆ. ಅದರಲ್ಲಿಯೂ ಭತ್ತ, ಬಾಳೆ, ಪಪ್ಪಾಯಿ ಸೇರಿದಂತೆ ಇತರೆ ಬೆಳೆಗಳು ನೀರುಪಾಲಾಗಿದ್ದು, ರೈತರಿಗೆ ಮತ್ತೊಂದು ಬರೆ ಬಿದ್ದಂತಾಗಿದೆ. ಸುಮಾರು 1 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.
ಮೊನ್ನೆ ಭಾರೀ ಗಾಳಿ, ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲದೆ, ತರಕಾರಿ ಬೆಳೆಗಳು ಸಹ ನೀರುಪಾಲಾಗಿದೆ. ಹೀಗೆ ಕೈಗೆ ಬಂದಿದ್ದ ಫಸಲು ಬಾರದೇ ರೈತರು ಕಣ್ಣೀರು ಸುರಿಸುವಂತಾಗಿದೆ. ಜಿಲ್ಲೆಯಲ್ಲಿ 13.6 ಮಿ.ಮೀ. ಸರಾಸರಿ ಮಳೆ ಸುರಿದಿದ್ದು, ಜಿಲ್ಲಾಡಳಿತ ಅಂದಾಜಿಸಿರುವ ಪ್ರಕಾರ 79.40 ಲಕ್ಷ ರೂ.ನಷ್ಟ ಸಂಭವಿಸಿದೆ. ಕೆಲವೆಡೆ ಮನೆಗಳು ಧರೆಗುರುಳಿದರೆ, ಮತ್ತೆ ಕೆಲವೆಡೆ ಜಮೀನುಗಳು ಜಲಾವೃತವಾಗಿವೆ.
ಚನ್ನಗಿರಿಯಲ್ಲಿನ ಮಳೆ ವಿವರ ಚನ್ನಗಿರಿಯಲ್ಲಿ ವಾಡಿಕೆ ಮಳೆ 2.5 ಮಿ.ಮೀ ಹಾಗೂ ವಾಸ್ತವ ಮಳೆ 9.5 ಮಿ.ಮೀ. ಆಗಿದ್ದರೆ, ದಾವಣಗೆರೆ ತಾಲೂಕಿನಲ್ಲಿ ವಾಡಿಕೆ ಮಳೆ 1.0 ಮಿ.ಮೀ.ನಷ್ಟು ಆಗಿದೆ. ವಾಸ್ತವ ಮಳೆ 19.5 ಮಿ.ಮೀ ಸುರಿದಿದೆ. ಹರಿಹರದಲ್ಲಿ ವಾಡಿಕೆ ಮಳೆ 1.1 ಮಿ.ಮೀ ಹಾಗೂ ವಾಸ್ತವ ಮಳೆ 17.2 ಮಿ.ಮೀ. ಆಗಿದೆ.
ಇನ್ನು ಹೊನ್ನಾಳಿ ವಾಡಿಕೆ ಮಳೆ 2.4 ಮಿ.ಮೀ ಹಾಗೂ ವಾಸ್ತವ ಮಳೆ 9.0 ಮಿ.ಮೀ, ಜಗಳೂರು ವಾಡಿಕೆ ಮಳೆ 1.9 ಮಿ.ಮೀ ಹಾಗೂ ವಾಸ್ತವ ಮಳೆ 13.7 ಮಿ.ಮೀ, ನ್ಯಾಮತಿಯಲ್ಲಿ ವಾಡಿಕೆ ಮಳೆ 2.5 ಮಿ.ಮೀ ಹಾಗೂ ವಾಸ್ತವ ಮಳೆ 14.1 ಮಿ.ಮೀ ಮಳೆಯಾಗಿದೆ.
ದಾವಣಗೆರೆ ತಾಲೂಕು ವ್ಯಾಪ್ತಿಯ ಹಾನಿ ವಿವರ ದಾವಣಗೆರೆ ತಾಲೂಕು ವ್ಯಾಪ್ತಿಯಲ್ಲಿ 1 ಮನೆ ಭಾಗಶಃ ಹಾನಿಯಾಗಿದ್ದು, 150 ಹೆಕ್ಟೇರ್ ಭತ್ತದ ಬೆಳೆ ನಾಶವಾಗಿದೆ. ಇದರಿಂದ ಒಟ್ಟು ಅಂದಾಜು 30.60 ಲಕ್ಷ ರೂಪಾಯಿ ನಷ್ಟ, ಹರಿಹರ ತಾಲೂಕು ವ್ಯಾಪ್ತಿಯಲ್ಲಿ 2 ಮನೆ ಭಾಗಶಃ ಹಾನಿಯಾಗಿದ್ದು, 295 ಹೆಕ್ಟೇರ್ ಭತ್ತ ನೀರುಪಾಲಾಗಿದೆ. ಒಟ್ಟು ಅಂದಾಜು 18.93 ಲಕ್ಷ ರೂಪಾಯಿ ನಷ್ಟವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜಗಳೂರು ತಾಲೂಕು ವ್ಯಾಪ್ತಿಯ ಹಾನಿ ವಿವರ ಜಗಳೂರು ತಾಲೂಕು ವ್ಯಾಪ್ತಿಯಲ್ಲಿ 1 ಮನೆ ತೀವ್ರ ಹಾನಿಯಾಗದ್ದು, 10 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 30 ಹೆಕ್ಟೇರ್ ಅಡಿಕೆ, 38 ಹೆಕ್ಟೇರ್ ಬಾಳೆ, 20 ಹೆಕ್ಟೇರ್ ಪಪ್ಪಾಯಿ ಬೆಳೆ ಹಾನಿಯಾಗಿದೆ. 1 ಎತ್ತು ಮೃತಪಟ್ಟಿದ್ದು ಒಟ್ಟು ಅಂದಾಜು 29.87 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಜಿಲ್ಲೆಯಲ್ಲಿ ಒಟ್ಟಾರೆ ಅಂದಾಜು 79.40 ಲಕ್ಷ ರೂಪಾಯಿನಷ್ಟು ನಷ್ಟ ಸಂಭವಿಸಿದ್ದು, ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.












Click it and Unblock the Notifications