ಕಷ್ಟಕಾಲದಲ್ಲಿ ಮಗನ ನೆರವಿಗೆ ಧಾವಿಸಿದ ದೇವೇಗೌಡ
Recommended Video

ಬೆಂಗಳೂರು, ನವೆಂಬರ್ 21: ರೈತರ ಪ್ರತಿಭಟನೆ, ವಿರೋಧ ಪಕ್ಷಗಳ ಪ್ರತಿಭಟನೆಯಿಂದ ಅಧೀರರಾಗಿದ್ದ ಕುಮಾರಸ್ವಾಮಿ ಅವರಿಗೆ ತಂದೆ ಹಾಗೂ ರಾಜಕೀಯ ನಿಷ್ಣಾತ ದೇವೇಗೌಡ ಅವರು ಉಪಯುಕ್ತ ಸಲಹೆಗಳನ್ನು ನೀಡಿ ಮಾರ್ಗದರ್ಶನ ಮಾಡಿದ್ದಾರೆ.
ದೂರವಾಣಿ ಮೂಲಕ ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿರುವ ದೇವೇಗೌಡ ಅವರು, ರೈತರ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಪ್ರಸ್ತುತ ಸನ್ನಿವೇಶವನ್ನು ನಿಭಾಯಿಸಲು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.
ಕಬ್ಬು ಬೆಳೆಗಾರರು ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ಮಾಡಿ, ಅದಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಕುಮಾರಸ್ವಾಮಿ ಆಡಿದ ಮಾತು ವಿವಾದ ಸೃಷ್ಠಿಸಿ ಅದನ್ನು ಬಿಜೆಪಿ ಅಸ್ತ್ರವಾಗಿ ಬಳಸಿ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ. ಇದು ಸಹಜವಾಗಿಯೇ ಕುಮಾರಸ್ವಾಮಿ ಅವರಿಗೆ ಹಿನ್ನಡೆ ಆಗಿದೆ.

ಕುಮಾರಸ್ವಾಮಿ ನೆರವಿಗೆ ದೇವೇಗೌಡ
ಆದರೆ ಈ ಸಮಯದಲ್ಲಿ ಕುಮಾರಸ್ವಾಮಿ ಅವರ ನೆರವಿಗೆ ಬಂದಿರುವ ದೇವೇಗೌಡ ಅವರು ರೈತರ ಸಮಸ್ಯೆ ಬಗೆಹರಿಸಲು ಸಲಹೆಗಳನ್ನು ನೀಡಿದ್ದಾರೆ. ಕುಮಾರಸ್ವಾಮಿ ಅವರು ರೈತರ ಸಭೆ ನಡೆಸುವ ಮುನ್ನಾ ದೇವೇಗೌಡರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದರು ಎನ್ನಲಾಗಿದೆ.

ಸಭೆಯ ನಂತರ ದೇವೇಗೌಡ-ಎಚ್ಡಿಕೆ ಭೇಟಿ
ಸಭೆಯ ನಂತರವೂ ನೇರವಾಗಿ ದೇವೇಗೌಡರು ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ಬೆಳಗಾವಿ ಅಧಿವೇಶನಕ್ಕೂ ಮುನ್ನವೇ ಕಬ್ಬು ಬೆಳೆಗಾರರ ಬಾಕಿ ತೀರಿಸುವಂತೆ ಕಾರ್ಖಾನೆ ಮಾಲೀಕರ ಮೇಲೆ ಒತ್ತಡ ಹೇರುವಂತೆ ಹೇಳಿದ್ದಾರೆ.

ಸಾರ್ವಜನಿಕ ಹೇಳಿಕೆಗಳು ಬೇಡ
ಸಾರ್ವಜನಿಕವಾಗಿ ರೈತರ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಹಾಗೂ ಬಿಜೆಪಿ ಈಗ ಮಾಡುತ್ತಿರುವ ಪ್ರತಿಭಟನೆ ಬಗ್ಗೆಯೂ ಪ್ರತಿಕ್ರಿಯಿಸದಂತೆ ದೇವೇಗೌಡ ಅವರು ಕುಮಾರಸ್ವಾಮಿಗೆ ಸಲಹೆ ನೀಡಿದ್ದಾರೆ.

ಹೇಳಿಕೆಗಳೇ ಹೆಚ್ಚು ಪ್ರಚಾರ ಪಡೆಯುತ್ತಿವೆ
ಸರ್ಕಾರದ ಕಾರ್ಯಕ್ರಮಗಳಿಗಿಂತಲೂ ಹೇಳಿಕೆಗಳು, ಪ್ರತಿಕ್ರಿಯೆಗಳೇ ಹೆಚ್ಚು ಪ್ರಚಾರ ಪಡೆಯುತ್ತಿರುವ ಕಾರಣ ಇನ್ನು ಮುಂದೆ ಜಾಗರೂಕತೆಯಿಂದ ಮಾತನಾಡುವಂತೆ ದೇವೇಗೌಡರು ಕುಮಾರಸ್ವಾಮಿಗೆ ಕಿವಿಮಾತು ಹೇಳಿದ್ದಾರೆ.

ವಿಪಕ್ಷವನ್ನು ಹಣಿಯುವ ಉಪಾಯ
ಕಬ್ಬು ಬೆಳೆಗಾರ ರೈತರಿಗೆ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆ ಪಟ್ಟಿಯಲ್ಲಿ ಬಿಜೆಪಿ, ಕಾಂಗ್ರೆಸ್ ಶಾಸಕರು ಅತಿ ಹೆಚ್ಚಾಗಿ ಇರುವ ಕಾರಣ ಅದನ್ನು ಎರಡೂ ಪಕ್ಷಗಳ ವಿರುದ್ಧ ಅಸ್ತ್ರವಾಗಿ ಬಳಸುವ ಆ ಮೂಲಕ ರೈತರಿಗೆ ನ್ಯಾಯ ಕೊಡಿಸುವ ಬಗ್ಗೆಯೂ ದೇವೇಗೌಡರು ಉಪಾಯಗಳನ್ನು ನೀಡಿದ್ದಾರೆ ಎನ್ನಲಾಗಿದೆ.












Click it and Unblock the Notifications