ಮೈಚಾಂಗ್ ಚಂಡಮಾರುತ ಹಿನ್ನೆಲೆ ತುಂತುರು ಮಳೆ, ಚಿಕ್ಕಬಳ್ಳಾಪುರ ಜಿಲ್ಲೆ ಕೃಷಿಕರಿಗೆ ತಜ್ಞರಿಂದ ಸೂಕ್ತ ಸಲಹೆಗಳು
ಚಿಕ್ಕಬಳ್ಳಾಪುರ, ಡಿಸೆಂಬರ್, 06: ಬಂಗಾಳ ಕೊಲ್ಲಿಯಲ್ಲಿ ಉದ್ಭವಗೊಂಡಿರುವ ಮೈಚಾಂಗ್ ಚಂಡಮಾರುತದ ಪ್ರಭಾವದಿಂದ ರಾಜ್ಯದ ದಕ್ಷಿಣ ಭಾಗದ ಹಲವೆಡೆ ಅಬ್ಬರದ ಮಳೆಯಾಗುತ್ತಿದೆ. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಸಹ ಇನ್ನು ಕೆಲವು ದಿನಗಳ ಕಾಲ ತುಂತುರು ಮಳೆ, ಮೋಡ ಕವಿದ ವಾತಾವರಣ ಇರುವುದರಿಂದ ಈಗಿನಿಂದಲೇ ಕೃಷಿ ಬೆಳೆಗಳಿಗೆ ರೋಗ ತಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಕೃಷಿ ತಜ್ಞರು ಮಾಹಿತಿ ನೀಡಿದ್ದಾರೆ. ಹಾಗಾದರೆ ಏನೆಲ್ಲ ಮಾಹಿತಿ ನೀಡಿದ್ದಾರೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಬಂಗಾಳ ಕೊಲ್ಲಿಯಲ್ಲಿ ಉದ್ಭವಗೊಂಡಿರುವ "ಮೈಚಾಂಗ್" ಚಂಡಮಾರುತವು ಇನ್ನೂ ಕೆಲವು ದಿನಗಳವರೆಗೆ ಮುಂದುವರೆಯುವ ಸಾತೆಯಿದ್ದು, ಜಿಲ್ಲಾದ್ಯಾಂತ ಸತತ ತುಂತುರು ಮಳೆಯಾಗುವುದು, ಮೋಡಕವಿದ ವಾತಾವರಣ ಮತ್ತು ಹೆಚ್ಚು ಆರ್ದತೆಯುಳ್ಳ ಹವಾಗುಣ ಇರುವುದರಿಂದ ರೈತರು ತೋಟಗಾರಿಕೆ ಬೆಳೆಗಳಲ್ಲಿ ಈ ಕೆಳಕಂಡ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ತಜ್ಞರು ತಿಳಿಸಿದ್ದಾರೆ.

ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆಗೆ ಮತ್ತು ಟೊಮ್ಯಾಟೊ ಬೆಳೆಗೆ ಶೀಲೀಂದ್ರದಿಂದ ಬರುವ ಅಂಗಮಾರಿ ರೋಗ ಉಲ್ಬಣವಾಗುವ ಸಾಧ್ಯತೆಯಿದ್ದು, ಕೊನೆಯ ಅಂಗಮಾರಿ ರೋಗದ ಲಕ್ಷಣಗಳಾದ, ಕಂದು ಮಿಶ್ರಿತ ಕಪ್ಪು ಬಣ್ಣದ ಚುಕ್ಕೆಗಳು ಎಲೆ, ಕಾಂಡ ಮತ್ತು ಹಣ್ಣಿನ ತೊಟ್ಟುಗಳಲ್ಲಿ ಕಂಡು ಬರುತ್ತದೆ. ಎಲೆಯ ಮೇಲೆ ಚುಕ್ಕೆಗಳು ಕಂದು ಬಣ್ಣದಿಂದ ಕೂಡಿರುತ್ತದೆ, ನಂತರ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಎಲೆಯ ಕೆಳಗಡೆ ಬಿಳಿ ಬಣ್ಣದ ಶಿಲೀಂಧ್ರದ ಬೆಳವಣಿಗೆಯನ್ನು ಗಮನಿಸಬಹುದು.
ಆದ್ದರಿಂದ ರೈತರು ಮಳೆಯಿಂದ ಬಿಡುವು ಸಿಕ್ಕಾಗ ವ್ಯಾಪಕ ಶಿಲೀಂಧ್ರ ನಾಶಕಗಳಾದ 2 ಗ್ರಾಂ ಸೈಮಾಕ್ಸಾನಿಲ್ (8% ಡಬ್ಲ್ಯೂಪಿ)+ಮ್ಯಾಂಕೋಜೆಬ್ (64% ಡಬ್ಲ್ಯೂಪಿ) ಅಥವಾ ಮೆಟಿರಾಮ್ 55+ ಪೈರಾಕ್ಲೋಸ್ಟ್ರಾಬಿನ್ 5% ಡಬ್ಲ್ಯೂಜಿ 2ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಲು ತಿಳಿಸಲಾಗಿದೆ. ಸಿಂಪಡಣೆಯ ನಂತರ ಕನಿಷ್ಠ 4 ಗಂಟೆಯಾದರೂ ಮಳೆಯಿಂದ ಬಿಡುವು ಇರಬೇಕು. ಇಲ್ಲದೇ ಹೋದರೆ ಸಿಂಪಡಣೆಯನ್ನು ಪುನಾರವರ್ತಿಸಬೇಕು.
ಡೊಣ್ಣೆಮೆಣಸಿನಕಾಯಿ ಬೆಳೆಯಲ್ಲಿ ಚಿಬ್ಬುರೋಗ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಹೂ ಬಿಡುವ ಹಂತದಲ್ಲಿ ಪ್ರಥಮ ಸಿಂಪರಣೆ ಮತ್ತು ಕಾಯಿ ಕಟ್ಟುವ ಹಂತದಲ್ಲಿ ಎರಡನೇ ಸಿಂಪರಣೆ, ನಂತರದ 15 ದಿನಗಳಲ್ಲಿ ಮೂರನೇ ಸಿಂಪರಣೆಗಾಗಿ ತಾಮ್ರದ ಆಕ್ಸಿಕ್ಲೋರೈಡ್ 3 ಗ್ರಾಂ ಅಥವಾ ಕಾರ್ಬೆಂಡೈಜಿಮ್ 1 ಗ್ರಾಂ ಅಥವಾ ಕ್ಲೋರೋಥಲೊನಿಲ್ 75 ಡಬ್ಲ್ಯೂ. ಪಿ 2 ಗ್ರಾಂ ಶಿಲೀಂದ್ರನಾಶಕಗಳನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು.
ಈಗಾಗಲೇ ಕಾಯಿಗಳು ಚಿಬ್ಬುರೋಗದಿಂದ ಬಾಧಿತವಾಗಿದ್ದರೆ, ಸಂಯುಕ್ತ ಶಿಲೀಂದ್ರ ನಾಶಕಗಳಾದ ಟೆಬುಕೊನಾಜೋಲ್+ಟ್ರೈಫ್ಲೋಕ್ಸಟ್ರೋಬಿನ್ 75 ಡಬ್ಲ್ಯೂ.ಜಿ ಅನ್ನು 0.75 ಗ್ರಾಂ/ಲೀ ನೀರಿಗೆ ಬೆರೆಸಿ ಸಿಂಪಡಿಸುವುದು. ಕೋಸು ಜಾತಿಯ ತರಕಾರಿಗಳಲ್ಲಿ ದುಂಡಾಣುವಿನಿಂದ ಬರುವ ಕಪ್ಪುಕೊಳೆ ರೋಗದ ನಿಯಂತ್ರಣಕ್ಕಾಗಿ ತಾಮ್ರದ ಆಕ್ಸಿಕ್ಲೋರೈಡ್ 3 ಗ್ರಾಂ ಜೊತೆಗೆ ಸ್ಟ್ರೆಪ್ಟೋಮೈಸಿನ್ ಸಲ್ಪೇಟ್ 0.5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಂಪಟಣೆ ಮಾಡಬೇಕು.
ಮಾವಿನಲ್ಲಿ ಎಲೆ ಮತ್ತು ಕಾಂಡದ ಮೇಲೆ ಬರುವ ಚಿಬ್ಬುರೋಗದ ನಿಯಂತ್ರಣಕ್ಕಾಗಿ ಬೋರ್ಡೋ ದ್ರಾವಣ 1% ಅಥವಾ ಕಾರ್ಬೆಂಡೈಜಿಮ್ 1 ಗ್ರಾಂ ಅಥವಾ ಥಯೋಫೆನೇಟ್ ಮಿಥೈಲ್ 1 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡುವುದು.
ಕುಂಬಳಜಾತಿ ತರಕಾರಿಗಳಲ್ಲಿ ಹಣ್ಣಿನ ನೊಣಗಳಿಂದ ಬಾಧಿತ ಕಾಯಿಗಳಲ್ಲಿ ಮರಿಹುಳುಗಳು ಹಣ್ಣಿನ ಒಳಭಾಗವನ್ನು ತಿನ್ನುವುದರಿಂದ ಅಂತಹ ಕಾಯಿಗಳು ಕೊಳೆಯುತ್ತವೆ. ಇದರ ನಿಯಂತ್ರಣಕ್ಕಾಗಿ 2 ಮಿ.ಲೀ ಮೆಲಾಥಿಯನ್ 50 ಇ.ಸಿ+ 10 ಗ್ರಾಂ ಸಕ್ಕರೆ ಅಥವಾ ಬೆಲ್ಲದೊಂದಿಗೆ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಅಲ್ಲದೆ ಕ್ಯೂಲ್ಯೂರ್ ಮೋಹಕ ಬಲೆಗಳನ್ನು ಎಕರೆಗೆ 4-6ರಂತೆ ಕಟ್ಟುವುದು.
ಚೆಂಡುಹೂವಿನಲ್ಲಿ ಮಳೆ ಹೆಚ್ಚಾದಾಗ ಶಿಲೀಂದ್ರದಿಂದ ಬರುವ ಎಲೆ ಚುಕ್ಕೆರೋಗ ಮತ್ತು ಹೂ ಅಂಗಮಾರಿ ರೋಗವು ಹೆಚ್ಚಾಗುವ ಸಾಧ್ಯತೆಯಿದ್ದು, ಹತೋಟಿಗೆ ಕ್ಲೋರೊಥ್ಯೋಲಿನಿಲ್ 2ಗ್ರಾಂ ಅಥವಾ ಮ್ಯಾಂಕೋಜೇಬ್ 3 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಣೆ ಮಾಡುವುದು.
ಪ್ರತಿ ಸಿಂಪಡಣೆ ಕೈಗೊಳ್ಳಬೇಕಾದಲ್ಲಿ ಪ್ರತಿ ಲೀಟರ್ ನೀರಿಗೆ 0.5 ಮಿ.ಲೀ ಅಂಟನ್ನು ಮಿಶ್ರಣ ಮಾಡುವುದನ್ನು ಮರೆಯಬಾರದು. ಟೊಮ್ಯಾಟೊ ಮತ್ತು ಬಳ್ಳಿ ತರಕಾರಿಗಳನ್ನು ಎತ್ತಿ ಕಟ್ಟುವಾಗ ಗಿಡಗಳ ಮಧ್ಯ ಸಾಕಷ್ಟು ಗಾಳಿ ಮತ್ತು ಬೆಳಕು ಆಡುವಂತೆ ಇದ್ದರೆ ಹಾಗೂ ವಿವಿಧ ತರಕಾರಿ ಬೆಳೆಗಳಲ್ಲಿ ನೆಲಕ್ಕೆ ಅಥವಾ ಪ್ಲಾಸ್ಟಿಕ್ ಹೊದಿಕೆಗೆ ತಾಕುವ ಹಳೆಯ ಎಲೆಗಳನ್ನು ಗಿಡಕ್ಕೆ ಹಾನಿಯಾಗದಂತೆ ತೆಗೆಯುವುದರಿಂದ ರೋಗಗಳ ಹಾವಳಿಯನ್ನು ಅಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.
ಬೆಳೆಗಳು ಬೆಳವಣಿಗೆ ಹಂತದಲ್ಲಿರುವಾಗ 19:19:19 ರಸಗೊಬ್ಬರವನ್ನು ಪ್ರತಿ ಲಿಟರ್ ನೀರಿಗೆ 2-5 ಗ್ರಾಂ.ನಂತೆ ಅಥವಾ ನ್ಯಾನೋ ಯೂರಿಯಾವನ್ನು 4 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಗಿಡದ ಮೇಲೆ ಸಿಂಪಡಣೆ ಮಾಡಬೇಕು. ತರಕಾರಿ ಬೆಳೆಗಳು ಹೂ ಬಿಡುವ ಹಂತದಲ್ಲಿರುವಾಗ ಲಘು ಪೋಷಕಾಂಶಗಳ ಮಿಶ್ರಣವಾದ ತರಕಾರಿ ಸ್ಪೆಷಲ್ 5ಗ್ರಾಂ ಪ್ರತಿ ಲೀಟರ್ ನೀರಿಗೆ ಮತ್ತು ಪ್ರತಿ 15 ಲೀಟರ್ಗೆ ಒಂದು ನಿಂಬೆ ಹಣ್ಣು ಮತ್ತು ಒಂದು ಶಾಂಪು ಬೆರೆಸಿ ಸಿಂಪರಣೆ ಮಾಡುವುದರಿಂದ ಕಾಯಿ ಕಚ್ಚುವ ಪ್ರಮಾಣ ಮತ್ತು ಹಣ್ಣಿನ ಗುಣಮಟ್ಟ ಅಭಿವೃದ್ಧಿಗೊಳ್ಳುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ ಕೋಲಾರ ಮತ್ತು ಕೃಷಿ ವಿಜ್ಞಾನ ಕೇಂದ್ರ ಕುರುಬೂರು, ಚಿಂತಾಮಣಿ ಅವರನ್ನು ಹಾಗೂ ಆಯಾ ತಾಲ್ಲೂಕು/ ಹೋಬಳಿ ಮಟ್ಟದ ತೋಟಗಾರಿಕೆ ಇಲಾಖಾ ಅಧಿಕಾರಿಗನ್ನು ಸಂಪರ್ಕಿಸಬಹುದಾಗಿದೆ.












Click it and Unblock the Notifications