ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ: ಮಂಡ್ಯದಲ್ಲಿ ಮೆಣಸಿನಕಾಯಿ ತಿಂದು ಪ್ರತಿಭಟನೆ
ಮಂಡ್ಯ, ಸೆಪ್ಟೆಂಬರ್, 29: ಒಂದು ಕಡೆ ಕರ್ನಾಟಕ ಬಂದ್ ನಡೆಯುತ್ತಿರುವ ಹೊತ್ತಿನಲ್ಲಿಯೇ ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿ ಮತ್ತೆ ರೈತರು ಹಾಗೂ ಹೋರಾಟಗಾರರನ್ನು ಕೆರಳಿಸಿದೆ. ಇದನ್ನು ತೀವ್ರವಾಗಿ ಖಂಡಿಸಿದ ಜಿಲ್ಲಾ ರೈತಹಿತರಕ್ಷಣಾ ಸಮಿತಿಯವರು ದಿಢೀರ್ ರಸ್ತೆಗಿಳಿದು ಪ್ರತಿಭಟನೆ ನಡೆಸಿ ಹಸಿಮೆಣಸಿನಕಾಯಿ ತಿಂದು ಆಕ್ರೋಶ ಹೊರಹಾಕಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಸಮಿತಿ ಈ ಶಿಫಾರಸನ್ನು ಮಾಡಿದೆ. ಇದೇ 28ರಿಂದ ಅಕ್ಟೋಬರ್ 15 ರವರೆಗೆ ಕರ್ನಾಟಕ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಹರಿಸಬೇಕಿದೆ ಎಂಬ ಆದೇಶದ ವಿರುದ್ದ ದಿಕ್ಕಾರ ಕೂಗಿದರು.

ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ನಡೆಸುತ್ತಿರುವ ಸಮಿತಿಯ ಹೋರಾಟದ ಧರಣಿ ಸ್ಥಳಕ್ಕೆ ವಿವಿಧ ಕನ್ನಡಪರ ಸಂಘಟನೆಗಳು ಮತ್ತು ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಸೇರಿದಂತೆ ಸಿನಿಮಾ ರಂಗದವರು ಭೇಟಿ ನೀಡಿ ಬೆಂಬಲ ನೀಡಿ ರೈತರ ಪರವಾಗಿ ಮಾತನಾಡಿ ಜೊತೆ ಇರುವ ಭರವಸೆ ನೀಡಿದರು.
ಮಂಗಳಮುಖಿಯರು, ವರ್ತಕರು, ವಿವಿಧ ಸಮುದಾಯದ ಮುಖಂಡರು, ಪಣಕನಹಳ್ಳಿ, ಉಮ್ಮಡಹಳ್ಳಿ, ಮಂಗಲ, ಹನಿಯಂಬಾಡಿ, ಇಂಡುವಾಳು ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಸಮಿತಿಯ ಹೋರಾಟದಲ್ಲಿ ಭಾಗವಹಿಸಿ ಕಾವೇರಿ ಉಳಿಸಿಕೊಳ್ಳುವ ಮಾತು ಕೊಟ್ಟರು. ಜೊತೆಗೆ ನಗರದ ಮುಸ್ಲೀಂ ಸಮುದಾಯವರು ಸಹ ಬೈಕ್ ರ್ಯಾಲಿ ಮೂಲಕ ಆಗಮಿಸಿ ಬೆಂಬಲಿಸಿದರು.
ಸಮಿತಿಯ ಸುನಂದಾ ಜಯರಾಂ, ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಗೌಡಯ್ಯನದೊಡ್ಡಿ ತಿಮ್ಮೇಗೌಡ, ಚಲನಚಿತ್ರ ನಿರ್ದೇಶಕ ಪ್ರೇಮ್, ಮುಖಂಡರಾದ ಸಿ.ಟಿ.ಮಂಜುನಾಥ್, ಕನ್ನಡಸೇನೆ ಮಂಜುನಾಥ್, ಎಂ.ಜೆ.ಜೈನ್, ಪುಟರ್ಮಲ್ ಜೈನ್, ಭರತ್ ಕೊಠಾರಿ, ಉಗಮ್ ರಾಜ್ ಜೈನ್, ಚೆನ್ನಾರಾಮ್ ಜಿ, ಸಂದೀಪ್ ಆಚಾರ್, ಜಿತುಮೆಹತಾ, ರಾಹುಲ್ ಬಾಳ್ಳ, ವಿಕಾಸ್ ಸುರಾನಾ, ರಾಕೇಶ್ ಬನ್ಸಾಲಿ, ಮುಖೇಶ್ ಸುರಾನಾ, ಸುನಿಲ್ ಪಗಾರಿಯಾ, ಮೊಫತ್ ಬನ್ಸಾಲಿ, ಅರವಿಂದ್ ಗುಂದೇಚಾ, ಮಂಗಳಮುಖಿಯರಾದ ಮಂಜುಳಾ, ಚೈತ್ರಾ, ಕೀರ್ತಿ, ಪ್ರಿಯಾಮಣಿ, ರಾಶಿ, ನೇತ್ರಾ, ಅನ್ವಿತಾ, ಕುಪ್ಪಮ್ಮ ಭಾಗವಹಿಸಿದ್ದರು.
ಕೈ ಕೊಯ್ದುಕೊಂಡ ಕನ್ನಡಪರ ಹೋರಾಟಗಾರ
ಚಿಕ್ಕಮಗಳೂರು, ಸೆಪ್ಟೆಂಬರ್, 29: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿ ಇಂದು ಕರ್ನಾಟಕ ಬಂದ್ಗೆ ಕರೆ ಕೊಡಲಾಗಿದ್ದು, ಈಗಾಗಲೇ ಹಲವು ಜಿಲ್ಲೆಗಳಲ್ಲಿ ಆಕ್ರೋಶಗಳು ಭುಗಿಲೆದ್ದಿವೆ. ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಕನ್ನಡಪರ ಸಂಘಟನೆಯ ಹೋರಾಟಗಾರರೊಬ್ಬರು ರಕ್ತ ಕೊಡ್ತೀವಿ, ನೀರು ಕೊಡುವುದಿಲ್ಲ ಎಂದು ಕೈ ಕೊಯ್ದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳಸ ತಾಲೂಕಿನಲ್ಲಿ ಪ್ರತಿಭಟನೆ ವೇಳೆ ಕನ್ನಡ ಹೋರಾಟಗಾರ ರಾಜು ಎಂಬುವವರು ನಂತರ ರಕ್ತ ಕೊಡ್ತೀವಿ, ನೀರು ಕೊಡಲ್ಲ ಎನ್ನುವ ಮೂಲಕ ಕೈ ಕೊಯ್ದುಕೊಂಡು ರಕ್ತವನ್ನು ರಸ್ತೆಗೆ ಚೆಲ್ಲಿ ರಾಜ್ಯ, ಕೇಂದ್ರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಪ್ರತಿಭಟನೆಯನ್ನು ರೈತ ಸಂಘ, ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಮಾಡಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications