ಭಾರಿ ಮಳೆಯಿಂದಾಗಿ ಬೆಳೆ ಹಾನಿ; ಈರುಳ್ಳಿ ಬೆಲೆ ಗಗನಕ್ಕೆ
ದಾವಣಗೆರೆ, ಅಕ್ಟೋಬರ್ 21: ಪ್ರಪಂಚದ ಬಹುತೇಕ ಎಲ್ಲರ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಈರುಳ್ಳಿ ಬೆಳೆ ಬಹು ಪ್ರಮುಖವಾಗಿದೆ. ಆದರೆ ದಿನ ಕಳೆದಂತೆ ಈರುಳ್ಳಿ ಬೆಲೆ ಜನಸಾಮಾನ್ಯರ ಕೈಗೆಟುಕದೆ ಏರುತ್ತಿದೆ. ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ಜಾಸ್ತಿಯಾಗಿದೆ.
ಅಕ್ಟೋಬರ್ 20ರ ಮಂಗಳವಾರ, ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಸಗಟು ದರಕ್ಕೆ ಕೆ.ಜಿ ಗೆ 81 ರೂ. ಇದ್ದರೆ, ಚಿಲ್ಲರೆ ವ್ಯಾಪಾರಿಗಳು ಇದನ್ನು ಕೆ.ಜಿಗೆ 90 ರೂ. ಗೆ ಮಾರಾಟ ಮಾಡಿದ್ದಾರೆ. ಈ ಬೆಲೆಯನ್ನು ಭಾನುವಾರದ ಈರುಳ್ಳಿಯ ಬೆಲೆಗೆ ಹೋಲಿಸಿದರೆ ಏಕಾಏಕಿ 20 ರುಪಾಯಿ ಏರಿಕೆ ಕಂಡಿದೆ.
ಕರ್ನಾಟಕದ ಬಹುತೇಕ ನಗರಗಳಿಗೆ ದಾವಣಗೆರೆ, ರಾಣೇಬೆನ್ನೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಕೆಲವು ಮಹಾರಾಷ್ಟ್ರ ನಗರಗಳಿಂದ ಈರುಳ್ಳಿ ಸರಬರಾಜು ಮಾಡಲಾಗುತ್ತದೆ. ಆದರೆ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ಈರುಳ್ಳಿ ಬೆಳೆಗಳು ಸಾಕಷ್ಟು ಹಾನಿಗೀಡಾಗಿವೆ. ಕೆಲವೆಡೆ ಸಂಪೂರ್ಣವಾಗಿ ನಾಶವಾಗಿದೆ. ಪ್ರಸ್ತುತ ಮಾರುಕಟ್ಟೆಗೆ ಈರುಳ್ಳಿಯು ಕಡಿಮೆ ಪೂರೈಕೆಯಾಗುತ್ತಿದ್ದು, ಈರುಳ್ಳಿ ಬೆಲೆ ದಾಖಲೆಯ ಹೆಚ್ಚಳವನ್ನು ಕಂಡಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಪ್ರಸ್ತುತ, ಹಳೆಯ ಈರುಳ್ಳಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾಗುತ್ತಿದ್ದು, ಪ್ರಸ್ತುತ ಬೆಳೆಯು ನಾಶವಾಗಿದೆ. ಡಿಸೆಂಬರ್ ವೇಳೆಗೆ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ತಾಜಾ ಈರುಳ್ಳಿ ದೊರೆಯಲಿದೆ. ಅಲ್ಲಿಯವರೆಗೂ ಈರುಳ್ಳಿ ಬೆಲೆಯು ಏರುಗತಿಯಲ್ಲಿ ಸಾಗಲಿದೆ ಎಂದು ಹೇಳಲಾಗಿದೆ.
ಈರುಳ್ಳಿ ದಾಸ್ತಾನು ಕಡಿಮೆ ಇರುವ ಈ ಸಂದರ್ಭದಲ್ಲಿ ಬೇರೆಡೆಯಿಂದ ಈರುಳ್ಳಿ ಸರಬರಾಜು ಮಾಡಿದರೆ ಬೆಲೆ ಇಳಿಯುವ ಭರವಸೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಕಳೆದ ಬಾರಿ ಈರುಳ್ಳಿಯ ಬೆಲೆ ಏರಿದಾಗ, ಕೆಲವು ಹೋಟೆಲ್ಗಳು ಈರುಳ್ಳಿಯ ಬದಲಾಗಿ ಎಲೆಕೋಸನ್ನು ಹೇರಳವಾಗಿ ಬಳಕೆ ಮಾಡಿದ್ದರು.
ಏತನ್ಮಧ್ಯೆ, ಆಲೂಗೆಡ್ಡೆ ಬೆಲೆಗಳು ಕೂಡಾ ಏರಿಕೆಯಾಗಿದೆ. ಮಂಗಳವಾರ ಆಲೂಗಡ್ಡೆಗೆ ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ 40 ರೂ. ಮತ್ತು ಚಿಲ್ಲರೆ ವ್ಯಾಪಾರದಲ್ಲಿ 50 ರೂ. ಬೆಲೆಯಿದೆ. ಆಲೂಗಡ್ಡೆ ಪೂರೈಸುವ ಬೆಳಗಾವಿ, ಚಿಕ್ಕಮಗಳೂರು ಮತ್ತು ಮಹಾರಾಷ್ಟ್ರಗಳಲ್ಲಿ ಭಾರಿ ಮಳೆಯಿಂದಾಗಿ ಪೂರೈಕೆಯ ಕೊರತೆ ಉಂಟಾಗಿದ್ದು, ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗಿದೆ.












Click it and Unblock the Notifications