ರೈತನ ಬಾಕಿ ಮೊತ್ತಕ್ಕೆ ವಿಳಂಬ: ಉಪವಿಭಾಗಾಧಿಕಾರಿ ಕಚೇರಿ ಜಪ್ತಿ
ಧಾರವಾಡ, ಡಿಸೆಂಬರ್ 07 : ರೈತನ ಭೂಮಿ ಸ್ವಾದೀನ ಪಡಿಸಿಕೊಂಡು ಪರಿಹಾರ ನೀಡದ ಹಿನ್ನೆಲೆಯಲ್ಲಿ ಜಿಲ್ಲಾ ಸ್ಥಳೀಯ ನ್ಯಾಯಾಲಯವು ಉಪವಿಭಾಧಿಕಾರಿಗಳ ಕಚೇರಿ ಜಪ್ತಿ ಮಾಡುವಂತೆ ಮಹತ್ವದ ಆದೇಶ ನೀಡಿದೆ.
ಧಾರವಾಡದ ರೈತ ಗುರುಪಾದಯ್ಯ ಯಡಳ್ಳಿಗೆ ಅವರ ಧಾರವಾಡ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿನ ಜಮೀನನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಳಿಯು 1989-90ರಲ್ಲಿ ಸರ್ಕಾರಿ ನೌಕರರ ವಸತಿಗೃಹ ನಿರ್ಮಾಣಕ್ಕೆಂದು ವಶಪಡಿಸಿಕೊಂಡಿತ್ತು.

ವಶಪಡಿಸಿಕೊಳ್ಳುವ ಸಮಯದಲ್ಲಿ ಗುಂಟೆಗೆ 9450 ಬೆಲೆ ನಿಗದಿ ಮಾಡಲಾಗಿತ್ತು, ಈ ಮೊತ್ತದಲ್ಲಿ ಸ್ವಲ್ಪ ಹಣ ನೀಡಿದ್ದ ಇಲಾಖೆ ಉಳಿದ ಹಣವನ್ನು ಬಾಕಿ ಉಳಿಸಿಕೊಂಡಿತ್ತು. ಅದು ಬಡ್ಡಿ ಸಹಿತ 12 ಲಕ್ಷ ಮೊತ್ತವಾಗಿತ್ತು.
ಬಾಕಿ ಮೊತ್ತ ನೀಡುವಂತೆ ರೈತ ಗುರುಪಾದಯ್ಯ ಉಪವಿಭಾಗಾಧಿಕಾರಿ ಕಚೇರಿಗೆ ಅಲೆದು ಸುಸ್ತಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಕೂಡ ಗುರುಪಾದಯ್ಯ ಅವರ ಬಾಕಿ ಮೊತ್ತ ನೀಡುವಂತೆ ಆದೇಶ ನೀಡಿತ್ತು.
ಆದರೆ ಬಾಕಿ ನೀಡುವಿಕೆಯಲ್ಲಿ ತಡ ಮಾಡಿದ ಹಿನ್ನೆಲೆಯಲ್ಲಿ ಧಾರವಾಡದ ಎರಡನೇ ದಿವಾಣಿ ನ್ಯಾಯಾಲಯವು ಉಪವಿಭಾಗಾಧಿಕಾರಿ ಕಚೇರಿಯನ್ನು ಜಪ್ತಿ ಮಾಡುವಂತೆ ಆದೇಶ ಮಾಡಿದೆ.
ಈ ಹಿನ್ನೆಯಲ್ಲಿ ಉಪವಿಭಾಗಾಧಿಕಾರಿಗಳ ವಾಹನ, ಕಚೇರಿಯಲ್ಲಿನ ಕಂಪ್ಯೂಟರ್, ಪೀಠೋಪಕರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ನ್ಯಾಯಾಲಯದ ಆದೇಶದಿಂದಾದರೂ ಎಚ್ಚೆತ್ತುಕೊಂಡು ರೈತನಿಗೆ ಬಾಕಿ ಪರಿಹಾರ ಮೊತ್ತ ನೀಡುತ್ತಾರೆನೋ ಕಾದು ನೋಡಬೇಕು.












Click it and Unblock the Notifications