ಸಹಕಾರಿ ಬ್ಯಾಂಕ್ ಸಾಲ ಮನ್ನಾ: ಷರತ್ತುಗಳು ಅಷ್ಟು ಸಲೀಸಲ್ಲ!
ಬೆಂಗಳೂರು, ಆಗಸ್ಟ್ 10: ರಾಜ್ಯದ ಲಕ್ಷಾಂತರ ರೈತರು ಕುತೂಹಲದಿಂದ ಕಾಯುತ್ತಿದ್ದ ಬೆಳೆಸಾಲ ಮನ್ನಾ ಯೋಜನೆಗೆ ಕೊನೆಗೂ ಮೂರ್ತಸ್ವರೂಪ ಕೊಟ್ಟಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೊದಲ ಹಂತವಾಗಿ ಸಹಕಾರ ಕ್ಷೇತ್ರದ ಬೆಳೆಸಾಲಗಳಿಗೆ ಮುಕ್ತಿ ಕೊಟ್ಟಿದ್ದಾರೆ.
ಕಳೆದ ವರ್ಷ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 50 ಸಾವಿರ ರೂ.ಗಳವರೆಗಿನ ಸಹಕಾರ ವಲಯದ ಬೆಳೆ ಸಾಲ ಮನ್ನಾ ಮಾಡಿದ್ದರು. ಆದರೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸಾಲ ಮನ್ನಾದ ಮಿತಿಯನ್ನು 1 ಲಕ್ಷ ರೂ.ಗಳಿಗೆ ಹೆಚ್ಚಿಸಿದ್ದು, ರೈತರು ನಿಟ್ಟುಸಿರು ಬಿಡುವಂತಾಗಿದೆ.
ಸಾಲ ಮನ್ನಾದ ವೇಳೆ ಯಾವ ಬಗೆಯ ರೈತರಿಗೆ ಸಾಲ ಮನ್ನಾ ಆಗುತ್ತದೆ ಹಾಗೂ ಯಾವ ಬಗೆಯ ಸಾಲದ ಮನ್ನಾ ಆಗುತ್ತದೆ ಎಂಬುದಕ್ಕೆ ಕೆಲವು ಕಠಿಣ ನಿಯಮಾವಳಿ ರೂಪಿಸಿದೆ. ಹಾಗಾದರೆ ಆ ನಿಯಮಾವಳಿ ಯಾವವು ಇಲ್ಲಿದೆ ನೋಡಿ ವಿವರ.

ಎಷ್ಟು ಲಕ್ಷ ರೈತರಿಗೆ ಲಾಭ ಆಗಲಿದೆ? ಎಷ್ಟು ಕೋಟಿ ರೂಪಾಯಿ ವೆಚ್ಚ ಆಗಲಿದೆ?
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆಗೂ ಮೊದಲು ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಮನ್ನಾ ಗೊಷಿಸಿದ್ದರು. ಆದರೆ ಸದ್ಯಕ್ಕೆ ಸಹಕಾರ ಬ್ಯಾಂಕ್ಗಳ ಸಾಲದ ಮನ್ನಾಕ್ಕೆ ಆದೇಶ ಹೊರಬಿದ್ದಿದೆ. ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲದ ಮನ್ನಾದ ಆದೇಶ ಇನ್ನೊಂದು ವಾರ ಅಥವಾ 15 ದಿನಗಳಲ್ಲಿ ಹೊರಬೀಳುವ ನಿರೀಕ್ಷೆ ಇದೆ. ಸದ್ಯ ಸಹಕಾರ ಬ್ಯಾಂಕ್ಗಳಿಗೆ ಘೋಷಿಸಿದ ಆದೇಶದಡಿ 20.38 ಲಕ್ಷ ರೈತರಿಗೆ 9,448.61 ಕೋಟಿ ರೂ.ಗಳ ಸೌಲಭ್ಯ ದೊರೆಯಲಿದೆ

ಯಾವ ರೈತರಿಗೆ ಸಾಲ ಮನ್ನಾ ಸೌಲಭ್ಯ ದೊರೆಯುವುದಿಲ್ಲ?
1)ಬೆಳೆಸಾಲ ಪಡೆದ ರೈತರು ಸರ್ಕಾರಿ, ಸಹಕಾರಿ ಮತ್ತು ಇತರೆ ಕ್ಷೇತ್ರದ ನೌಕರರಾಗಿದ್ದು, ಪ್ರತಿ ತಿಂಗಳು ಒಟ್ಟಾರೆ 20 ಸಾವಿರ ರೂ.ಗಳಿಗಿಂತ ಹೆಚ್ಚಿನ ವೇತನ ಅಥವಾ ಪಿಂಚಣಿ ಪಡೆಯುತ್ತಿದ್ದಲ್ಲಿ ಅಂತಹ ರೈತರಿಗೆ ಯೋಜನೆ ಅನ್ವಯಿಸುವುದಿಲ್ಲ.
2) ಕಳೆದ ಮೂರು ವರ್ಷಗಳಲ್ಲಿ ಯಾವುದಾದರೂ ಒಂದು ವರ್ಷ ಆದಾಯ ತೆರಿಗೆ ಪಾವತಿಸಿದ್ದರೆ ಅಂತಹ ರೈತರಿಗೆ ಅನ್ವಯ ಆಗುವುದಿಲ್ಲ.
3)ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಒತ್ತಿ ಇಟ್ಟುಕೊಂಡು ನೀಡುವ ಅಡುವು ಸಾಲಗಳಿಗೆ, ಚಿನ್ನಾಭರಣಗಳನ್ನು ಅಡವಿಟ್ಟುಕೊಂಡು ನೀಡುವ ಚಿನ್ನಾಭರಣ ಸಾಲಗಳಿಗೆ, ವಾಹನಗಳನ್ನು ಖರೀದಿಸಲು ನೀಡುವ ಸಾಲಗಳಿಗೆ, ಪಶುಭಾಗ್ಯ ಯೋಜನೆಯಲ್ಲಿ ಪಶು ಆಹಾರ.
4)ಕೊಳ್ಳಲು ನೀಡುವ ಸಾಲಗಳಿಗೆ, ಮೀನುಗಾರಿಕೆ ಉದ್ದೇಶಗಳಿಗೆ ನೀಡುವ ಸಾಲಗಳಿಗೆ, ಸ್ವಸಹಾಯ ಗುಂಪುಗಳಿಗೆ ಮತ್ತು ಜಂಟಿ ಬಾದ್ಯತಾ ಗುಂಪುಗಳಿಗೆ ನೀಡುವ ಸಾಲಗಳಿಗೆ ಈ ಯೋಜನೆ ಅನ್ವಯ ಆಗುವುದಿಲ್ಲ.
5) ರೈತರ ಹೆಸರಿನಲ್ಲಿ ಜುಲೈ 10ಕ್ಕೆ ಡಿಸಿಸಿ ಬ್ಯಾಂಕ್ ಅಥವಾ ಪ್ಯಾಕ್ಸ್ನಲ್ಲಿ ಮುದ್ದತ್ತು ಠೇವಣಿ ಇದ್ದಲ್ಲಿ ಅಂತಹ ಮೊತ್ತವನ್ನು ಹೊರಬಾಕಿಯಲ್ಲಿ ಕಳೆಯತಕ್ಕದ್ದು.

ಸಾಲ ಮನ್ನಾ ಯೋಜನೆಯ ಲಾಭ ಪಡೆಯಲು ಮಾನದಂಡಗಳೇನು?
1)ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್, ಡಿಸಿಸಿ ಬ್ಯಾಂಕ್ಗಳು ಹಾಗೂ ಪಿಕಾರ್ಡ್ ಬ್ಯಾಂಕ್ಗಳು ವಿತರಿಸಿದ ಅಲ್ಪಾವಧಿ ಬೆಳೆಸಾಲದ ಪೈಕಿ ಜುಲೈ 10ಕ್ಕೆ ಹೊಂದಿರುವ ಹೊರಬಾಕಿ ಸಾಲಕ್ಕೆ ಮಾತ್ರ ಅನ್ವಯ
2) ಜುಲೈ 10ಕ್ಕೆ ಇರುವ ಸಾಲದ ಹೊರಬಾಕಿಯಲ್ಲಿ ಒಂದು ರೈತ ಕುಟುಂಬಕ್ಕೆ ಗರಿಷ್ಠ 1 ಲಕ್ಷ ರೂ.ಗಳವರೆಗಿನ ಸಾಲವನ್ನು ಮಾತ್ರ ಮನ್ನಾ ಮಾಡಲಾಗುವುದು.
3) ಈ ಅವಧಿಯಲ್ಲಿ ಸಾಲ ಪಡೆದು ರೈತರು ಮೃತಪಟ್ಟಿದ್ದಲ್ಲಿ, ಅಂತಹ ವಾರಸುದಾರರಿಗೂ ಸಹ ಈ ಸೌಲಭ್ಯ ದೊರೆಯುತ್ತದೆ.
4) ಯೋಜನೆಯಡಿ ಮನ್ನಾ ಮಾಡುವ ಸಾಲವು, ರೈತರು ಸಾಲ ಮರುಪಾವತಿ ಮಾಡುವ ಗಡುವು ದಿನಾಂಕಕ್ಕೆ ಜಾರಿಗೆ ಬರುತ್ತದೆ.
5)ಜುಲೈ 10ಕ್ಕೆ ಹೊರಬಾಕಿ ಇರುವ ಮೊತ್ತವನ್ನು ಸರ್ಕಾರದ ಆದೇಶ ಜಾರಿಯಾಗುವ ದಿನಾಂಕಕ್ಕೆ ಪೂರ್ಣವಾಗಿ ಮರು ಪಾವತಿಸಿದ್ದಲ್ಲಿ ಮನ್ನಾ ಆಗಬೇಕಾದ ಮೊತ್ತವನ್ನು ರೈತರ ಉಳಿತಾಯ ಖಾತೆಗೆ ಜಮಾ ನೀಡಲಾಗುವುದು.
6)ಯೋಜನೆಯಲ್ಲಿ ಸಾಲ ಮನ್ನಾ ಆಗುವ ಅನುದಾನವನ್ನು ಡಿಬಿಟಿ ಮೂಲಕ ರೈತರ ಉಳಿತಾಯ ಖಾತೆಯ ಬಿಡುಗಡೆ ಮಾಡಲಾಗುವುದು.
7) ಈ ಯೋಜನೆಯಡಿ ಅರ್ಹವಿರುವ 1 ಲಕ್ಷ ರೂ.ಗಳ ಅಸಲು ಮತ್ತು ಸಂಪೂರ್ಣ ಚಾಲ್ತಿ ಸಾಲಕ್ಕೆ ಸಂಬಂಧಿಸಿದ ಬಡ್ಡಿಯನ್ನು ಜಾರಿಯಲ್ಲಿರುವ ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ ಭರಿಸಲಾಗುವುದು. ಸುಸ್ತಿಯಾದ ಪ್ರಕರಣಗಳಲ್ಲಿ ಬಡ್ಡಿಯನ್ನು ರೈತರು ಭರಿಸತಕ್ಕದ್ದು.
8) ಯಾವುದೇ ರೈತರು ಒಂದಕ್ಕಿಂತಹ ಹೆಚ್ಚಿನ ಸಹಕಾರ ಸಂಘ, ಸಹಕಾರ ಬ್ಯಾಂಕ್ಗಳಲ್ಲಿ ಸಾಲ ಪಡೆದಿದ್ದಲ್ಲಿ ಒಂದು ಸಂಸ್ಥೆಯಿಂದ ಮಾತ್ರ ಸಾಲ ಮನ್ನಾ ಸೌಲಭ್ಯ ಪಡೆಯತಕ್ಕದ್ದು.

ಗಣೇಶನ ಹಬ್ಬಕ್ಕೆ ಸಿಹಿಸುದ್ದಿ
ಸ್ವಾತಂತ್ರ್ಯೋತ್ಸವಕ್ಕೂ ಮುನ್ನ ರಾಜ್ಯದ 20 ಲಕ್ಷಕ್ಕೂ ಹೆಚ್ಚು ರೈತರಿಗೆ ಸಹಕಾರಿ ಬ್ಯಾಂಕ್ಗಳಲ್ಲಿನ ಸಾಲವನ್ನು ಮನ್ನಾ ಮಾಡಿರುವ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಗಣೇಶನ ಹಬ್ಬದ ವೇಳೆಗೆ ಮತ್ತೊಂದು ಸಿಹಿಸುದ್ದಿ ಕೊಡುತ್ತೇನೆ ಎಂದಿದ್ದಾರೆ. ಇದರರ್ಥ ಇನ್ನುಳಿದ ಸರಿಸುಮಾರು 8 ಲಕ್ಷ ರೈತರ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿರುವ 40 ಸಾವಿರ ಕೋಟಿ ರೂ. ಮೊತ್ತದ ಬೆಳೆ ಸಾಲ ಮನ್ನಾ ಕುರಿತಂತೆ ಆದೇಶ ಹೊರಬೀಳುವ ನಿರೀಕ್ಷೆ ಇದೆ.












Click it and Unblock the Notifications