'ಬಿಜೆಪಿಯ ರೈತ ಚೈತನ್ಯ ಯಾತ್ರೆ ಎನ್ನುವ ಬೂಟಾಟಿಕೆ'
ಬೆಂಗಳೂರು, ಅಕ್ಟೋಬರ್ 10 : 'ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಬಿಜೆಪಿ ನಾಯಕರು ರೈತ ಚೈತನ್ಯ ಎನ್ನುವ ಬೂಟಾಟಿಕೆ ಯಾತ್ರೆ ಹಮ್ಮಿಕೊಂಡಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಬಿಜೆಪಿಯ ಎರಡನೇ ಹಂತದ ರೈತ ಚೈತನ್ಯ ಯಾತ್ರೆ ಭಾನುವಾರ ನರಗುಂದದಲ್ಲಿ ಅಂತ್ಯಗೊಳ್ಳಲಿದೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಆಗಮನದ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಗ್ರಾಮಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರು 'ಬಿಜೆಪಿಯ ರೈತ ಚೈತನ್ಯ ಯಾತ್ರೆ ಅವರ ಪಕ್ಷವನ್ನು ಉಳಿಸಿಕೊಳ್ಳಲು ಮಾಡುತ್ತಿದ್ದಾರೆ' ಎಂದು ಆರೋಪಿಸಿದರು. [ಬಳ್ಳಾರಿಯಲ್ಲಿ ರೈತ ಚೈತನ್ಯ ಯಾತ್ರೆ ಆರಂಭಿಸಿದ ಬಿಜೆಪಿ]
ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ರೈತರಿಗೆ ಸಾಲ ಕಟ್ಟಬೇಡಿ, ನಾವು ಮುಂದೆ ಅಧಿಕಾರಕ್ಕೆ ಬಂದಾಗ ಸಾಲ ಮನ್ನಾ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ತಾವು ಅಧಿಕಾರ ನಡೆಸಿದಾಗ ಸಾಲ ಮನ್ನಾ ಮಾಡದ ಬಿಜೆಪಿಯವರು ಪುನಃ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದ್ದಾರೆ' ಎಂದು ಲೇವಡಿ ಮಾಡಿದರು. [ರೈತರ ಬಗ್ಗೆ ಚರ್ಚೆಗೆ ಅಧಿವೇಶನ ಕರೆಯಿರಿ: ಬಿಎಸ್ ವೈ]
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಈಗ ರೈತರಿಗೆ ಸಾಂತ್ವನ ಹೇಳಲು ಆಗಮಿಸುವ ಅವಶ್ಯಕತೆ ಏನಿತ್ತು?. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ರೈತರ ಆತ್ಮಹತ್ಯೆ ತಡೆಯಲು ಏನು ಕ್ರಮ ಕೈಗೊಂಡಿದೆ? ಎಂದು ಅವರು ಪ್ರಶ್ನಿಸಿದರು'. ರೈತ ಚೈತನ್ಯ ಯಾತ್ರೆ ಬಗ್ಗೆ ಯಾರು ಏನು ಹೇಳಿದರೂ ಚಿತ್ರಗಳಲ್ಲಿ ನೋಡಿ......

'ಬಿಜೆಪಿಯವರದ್ದು ಬೂಟಾಟಿಕೆ ಯಾತ್ರೆ'
'ಬಿಜೆಪಿ ನಡೆಸುತ್ತಿರುವ ರೈತ ಚೈತನ್ಯ ಯಾತ್ರೆ ಕೇವಲ ಬೂಟಾಟಿಕೆಗಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ರಾಜ್ಯ ಸರ್ಕಾರ ರೈತರಿಗೆ ಪರಿಹಾರ ಕೋರಿ ದೆಹಲಿಗೆ ಸರ್ವ ಪಕ್ಷದ ನಿಯೋಗ ಕರೆದುಕೊಂಡು ಹೋದಾಗ ಅದರಲ್ಲಿದ್ದ ಬಿಜೆಪಿ ನಾಯಕರು ತಮ್ಮ ಬಾಯಿ ತೆರೆದಿರಲಿಲ್ಲ. ಅವರು ಈಗ ರಾಜ್ಯಕ್ಕೆ ಬಂದು ರೈತ ಚೈತನ್ಯ ಯಾತ್ರೆ ನಡೆಸುತ್ತಿದ್ದಾರೆ. ಇದೊಂದು ಬೂಟಾಟಿಕೆ ಯಾತ್ರೆಯೇ ಹೊರತು ಜನ ಹಿತ ಹೊಂದಿರುವ ಯಾತ್ರೆಯಲ್ಲ' ಎಂದು ಸಿದ್ದರಾಮಯ್ಯ ಹೇಳಿದರು.

'ಬಿಜೆಪಿಯವರು ಟೀಕಾಚಾರಿಗಳು'
'ರಾಹುಲ್ ಗಾಂಧಿ ಕುಳಿತರೂ ಎದ್ದರೂ ಬಿಜೆಪಿಯವರು ಟೀಕೆ ಮಾಡುತ್ತಾರೆ. ಅವರು ಟೀಕಾಚಾರಿಗಳು' ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. 'ಹಿಂದೆ ಅಧಿಕಾರ ನಡೆಸಿದಾಗ ರೈತರ ಪರವಾಗಿ ಕೆಲಸ ಮಾಡದ ಅವರು ಇಂದು ರೈತ ಚೈತನ್ಯ ಯಾತ್ರೆ ನಡೆಸುತ್ತಿದ್ದಾರೆ' ಎಂದು ಖರ್ಗೆ ಆರೋಪಿಸಿದ್ದಾರೆ.

'ಈಗೇಕೆ ರಾಹುಲ್ ಗಾಂಧಿ ಬರುತ್ತಿದ್ದಾರೆ?'
'ರಾಹುಲ್ ಗಾಂಧಿ ಕರ್ನಾಟಕ ಭೇಟಿ ಈಗ ಸಮಂಜಸವೇ? ಎಂದು ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದ್ದಾರೆ. 'ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಸಾಂತ್ವನ ಹೇಳಲು ಆಗಮಿಸಿರುವ ರಾಹುಲ್ ಗಾಂಧಿ ಭೇಟಿ ನಿರಾಶಾದಾಯಕವಾಗಿದೆ. ರೈತರು ಸರಣಿ ಆತ್ಮಹತ್ಯೆ ಆರಂಭವಾಗಿದ್ದು 3 ತಿಂಗಳ ಹಿಂದೆಯೇ. ಈಗ ಸಾಂತ್ವನ ಹೇಳಲು ಬರುತ್ತಿರುವುದು ಸಮಂಜಸವೇ? ಎಂದು ಪ್ರಶ್ನಿಸಿದರು.'

2ನೇ ಹಂತದ ರೈತ ಚೈತನ್ಯ ಯಾತ್ರೆ
ಬಿಜೆಪಿ ಬಳ್ಳಾರಿಯಿಂದ-ನರಗುಂದದವರೆಗಿನ 2ನೇ ಹಂತದ ರೈತ ಚೈತನ್ಯ ಯಾತ್ರೆಗೆ ಅಕ್ಟೋಬರ್ 1ರಂದು ಬಳ್ಳಾರಿಯಲ್ಲಿ ಚಾಲನೆ ನೀಡಿದೆ. ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ನಾಯಕರ ಮೂರು ತಂಡ ಬಳ್ಳಾರಿಯಿಂದ-ನರಗುಂದದ ತನಕ ಯಾತ್ರೆ ನಡೆಸುತ್ತಿದೆ.

ಭಾನುವಾರ ಸಮಾರೋಪ ಸಮಾರಂಭ
ಕರ್ನಾಟಕ ಬಿಜೆಪಿಯ 2ನೇ ಹಂತದ ರೈತ ಚೈತನ್ಯ ಯಾತ್ರೆ ಅಕ್ಟೋಬರ್ 11ರ ಭಾನುವಾರ ನರಗುಂದದಲ್ಲಿ ಮುಕ್ತಾಯವಾಗಲಿದೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ ಆತ್ಮಸ್ಥೈರ್ಯ ತುಂಬಲು ಈ ಯಾತ್ರೆಯನ್ನು ಬಿಜೆಪಿ ಹಮ್ಮಿಕೊಂಡಿತ್ತು.












Click it and Unblock the Notifications