ಎಲೆ ಚುಕ್ಕೆ ರೋಗ, ಅಡಕೆ ಗರಿ ಹಿಡಿದು ತೀರ್ಥಹಳ್ಳಿಯಲ್ಲಿ ಪಾದಯಾತ್ರೆ, ಸರ್ಕಾರದ ವಿರುದ್ಧ ಆಕ್ರೋಶ
ಶಿವಮೊಗ್ಗ, ನವೆಂಬರ್ 20: ಎಲೆ ಚುಕ್ಕೆ ರೋಗ, ಹಳದಿ ರೋಗ ಸೇರಿದಂತೆ ಅಡಕೆಯನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಮೇಗರವಳ್ಳಿಯಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ನಡೆಸಲಾಯಿತು.
ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣ, ಕಾಡುಪ್ರಾಣಿ ಹಾವಳಿ ತಡೆಯಲು ಒತ್ತಾಯಿಸಿ ಎಲೆ ಚುಕ್ಕೆ ರೋಗಕ್ಕೆ ತುತ್ತಾಗಿರುವ ಅಡಕೆ ಮರಗಳ ಗರಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು 17 ಕಿ.ಮೀ ಪಾದಯಾತ್ರೆ ನಡೆಸಿದರು. ಈ ವೇಳೆ ರಾಜ್ಯ ಸರಕಾರ, ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು.
ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ; ಮುಂದಿನ ವಾರ ಕೇಂದ್ರ ತಂಡ ಆಗಮನ
ತೀರ್ಥಹಳ್ಳಿ ತಾಲೂಕಿನಲ್ಲಿ ಸುಮಾರು 75 ಸಾವಿರ ಎಕರೆಯಲ್ಲಿ ಅಡಕೆ ಬೆಳೆಯಲಾಗಿದೆ. ಎಲೆ ಚುಕ್ಕೆ ರೋಗದಿಂದ ಇಳುವರಿ ಕಡಿಮೆಯಾಗಿದೆ. ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಈತನಕ ಸರ್ಕಾರ ವೈಜ್ಞಾನಿಕ ಸಮೀಕ್ಷೆ ನಡೆಸಿಲ್ಲ ಎಂದು ಆರೋಪಿಸಿದರು.
50 ಕೋಟಿ ರೂ ನಷ್ಟ
ಎಲೆ ಚುಕ್ಕೆ ರೋಗದಿಂದ ಕನಿಷ್ಠ 50 ಕೋಟಿ ರೂ. ನಷ್ಟವಾಗಿದೆ. ಆದರೆ ಸರ್ಕಾರ ಈಗ 10 ಕೋಟಿ ರೂ. ಪರಿಹಾರ ಘೋಷಿಸಿದೆ ಎಂದು ಹೇಳಲಾಗುತ್ತಿದೆ. ಈ ತನಕ ತೀರ್ಥಹಳ್ಳಿಗೆ ಕ್ಷೇತ್ರಕ್ಕೆ ಬಂದಿರುವುದು ಕೇವಲ 38 ಲಕ್ಷ ರೂ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನವೆಂಬರ್ 27ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀರ್ಥಹಳ್ಳಿಗೆ ಆಗಮಿಸುತ್ತಿದ್ದಾರೆ. ಎಲೆಚುಕ್ಕೆ ರೋಗದ ಕುರಿತು ಮುಖ್ಯಮಂತ್ರಿ ಅವರ ಗಮನ ಸೆಳೆಯಲು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಒಂದು ದಿನ ಉಪವಾಸ ಕೈಗೊಳ್ಳಲು ನಿರ್ಧರಿಸಲಾಗಿದೆ.
ಕಾಂಗ್ರೆಸ್ ಅವಧಿಯಲ್ಲಿ 86 ಕೋಟಿ ರೂ. ಪರಿಹಾರ
ಎಲೆ ಚುಕ್ಕೆ ರೋಗದಿಂದ ಬೆಳೆಗಾರರ ಆತಂಕ ನಿವಾರಿಸಬೇಕಿದ್ದ ಸರ್ಕಾರ ಘೋಷಣೆಗಳಿಂದ ಮರಳು ಮಾಡುತ್ತಿದೆ. ಇದನ್ನು ಬಿಟ್ಟು ಸಂಕಷ್ಟಕ್ಕೀಡಾಗಿರುವವರ ನೆರವಿಗೆ ಧಾವಿಸಬೇಕು. ಕೊಳೆರೋಗ ಬಂದ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಲ್ಲಿಗೆ ಕೆರೆಯಿಸಿ 86 ಕೋಟಿ ರೂ. ಪರಿಹಾರ ಕೊಡಿಸಿದ್ದೆ. ಈಗ ಸಂಕಷ್ಟ ಸಂದರ್ಭ ಮುಖ್ಯಮಂತ್ರಿಯವರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಯಾವ ನಿರ್ಧಾರ ಕೈಗೊಳ್ಳುತ್ತಾರೆ ನೋಡೋಣ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಕಾಡು ಪ್ರಾಣಿಗಳಿಂದ ರೈತರಿಗೆ ಸಂಕಷ್ಟ
ಅಡಕೆಗೆ ಬಾಧಿಸುತ್ತಿರುವ ರೋಗಗಳು ಮಾತ್ರವಲ್ಲದೆ ಆಗುಂಬೆ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಅರಣ್ಯ ಇಲಾಖೆಯವರು ಬೆಳೆ ಹಾನಿ ಪರಿಹಾರ ನೀಡುವ ವಿಚಾರದಲ್ಲಿ ಅಸಡ್ಡೆ ತೋರಿಸುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿದ್ದರು ಈತನಕ ತನಗೇ ಪರಿಹಾರ ಸಿಕ್ಕಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ಇಳುವರಿಯಲ್ಲಿ ಭಾರಿ ಕುಸಿತ
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಾಫಿ, ಟೊಮ್ಯಾಟೊಗೆ ಹೊಡೆಯುವ ಔಷಧವನ್ನು ಶಿಫಾರಸು ಮಾಡಿದ್ದಾರೆ. ಎಕರೆಗೆ 500 ರೂ. ಔಷಧಿ ಕೊಟ್ಟಿದ್ದಾರೆ. ನಾನು 9 ಬಾರಿ ಸ್ಪ್ರೇ ಮಾಡಿದ್ದೇನೆ. 40 ಕ್ವಿಂಟಾಲ್ ಆಗುತ್ತಿದ್ದ ಇಳುವರಿ ಈ ಬಾರಿ 10 ಕ್ವಿಂಟಾಲ್ಗೆ ಇಳಿದಿದೆ ಎಂದು ಅಡಕೆ ಬೆಳೆಗಾರ ಇಳಿಮನೆ ಚಂದ್ರಶೇಖರ್ ತಿಳಿಸಿದರು.
ಮಾಜಿ ಶಾಸಕ ಕಡಿದಾಳ್ ದಿವಾಕರ್, ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಮುಡುಬ ರಾಘವೇಂದ್ರ, ಕೆಪಿಸಿಸಿ ಸದಸ್ಯ ಜಿ.ಎಸ್.ನಾರಾಯಣ ರಾವ್, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕಲಗೋಡು ರತ್ನಾಕರ್, ಬಿ.ಪಿ.ರಾಮಚಂದ್ರ, ಭಾರತಿ ಪ್ರಭಾಕರ್, ಬಿ.ಎಸ್.ಯಲ್ಲಪ್ಪ ಸೇರಿದಂತೆ ಹಲವರು ಪಾದಯಾತ್ರೆಯಲ್ಲಿದ್ದರು.