ಕಳಪೆ ಗುಣಮಟ್ಟದ ಬಿತ್ತನೆ ಬೀಜದಿಂದ ಬೆಳೆನಷ್ಟವಾದಲ್ಲಿ ಪರಿಹಾರ: ಬಿ.ಸಿ.ಪಾಟೀಲ
ಬೆಳಗಾವಿ, ಡಿಸೆಂಬರ್ 24: ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳ ಪೂರೈಕೆಯಿಂದ ರೈತರಿಗೆ ಬೆಳೆ ನಷ್ಟವಾದಲ್ಲಿ ರೈತರು ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿ, ಬೀಜಗಳ ಗುಣಮಟ್ಟದಿಂದ ಬೆಳೆ - ನಷ್ಟವಾಗಿರುವುದು ದೃಢಪಟ್ಟಲ್ಲಿ ನಿಯಮಾನುಸಾರ ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ ಹೇಳಿದರು.
ಶುಕ್ರವಾರ ನಡೆದ ವಿಧಾನ ಪರಿಷತ್ತಿನ ಕಲಾಪದಲ್ಲಿ ಸದಸ್ಯ ಎಸ್.ಎಲ್.ಬೋಜೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಪುಸಕ್ತ ಸಾಲಿನಲ್ಲಿ ರೈತರಿಗೆ ನೀಡುವ ಬಿತ್ತನೆ ಬೀಜಗಳ ಗುಣಮಟ್ಟ, ಕಡಿಮೆ ಮತ್ತು ಬೆಳೆ ನಷ್ಟವಾದ ಪ್ರಕರಣಗಳ ಬಗ್ಗೆ ಸರ್ಕಾರಕ್ಕೆ ವರದಿಯಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ಕೃಷಿ ಇಲಾಖೆಯಿಂದ ನೀಡುತ್ತಿರುವ ವಿವಿಧ ಬಗೆಯ ಬಿತ್ತನೆ ಬೀಜಗಳನ್ನು ಇಲಾಖಾ ರೈತ ಸಂಪರ್ಕ ಕೇಂದ್ರಗಳು ದಾಸ್ತಾನೀಕರಿಸುವ ಮುನ್ನ ಸಂಬಂಧಪಟ್ಟ ಸಂಸ್ಥೆಗಳು ಬೀಜಗಳ ಗುಣಮಟ್ಟದ ಬಗ್ಗೆ ಖಾತರಿಪಡಿಸಿಕೊಂಡು, ದೃಢೀಕೃತ ಬೀಜಗಳನ್ನು ಮಾತ್ರ ದಾಸ್ತಾನೀಕರಿಸಲಾಗುತ್ತದೆ. ಅಲ್ಲದೆ, ಹಂಗಾಮು ಪೂರ್ವದಲ್ಲಿ ಬೀಜ ವಿತರಣೆಗೂ ಮುನ್ನ ಇಲಾಖೆಯಲ್ಲಿ ದಾಸ್ತಾನೀಕರಿಸಿದ ಬಿತ್ತನೆ ಬೀಜಗಳಲ್ಲಿ ಬೀಜ ಪರಿವೀಕ್ಷಕರು ಬೀಜ ಮಾದರಿಗಳನ್ನು ತೆಗೆದು ವಿಶ್ಲೇಷಣೆಗೊಳಪಡಿಸಿ, ಬೀಜಗಳ ಗುಣಮಟ್ಟವನ್ನು ಖಾತರಿಪಡಿಸಿಕೊಂಡ ನಂತರ, ರೈತರಿಗೆ ವಿತರಿಸಲಾಗುತ್ತಿದೆ. ಒಂದು ವೇಳೆ, ಬೀಜಗಳು ಕಡಿಮೆ ಗುಣಮಟ್ಟದೆಂದು ಕಂಡುಬಂದಲ್ಲಿ ಅಂತಹ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗುವುದಿಲ್ಲ ಹಾಗೂ ಅಂತಹ ಸಂಸ್ಥೆಗಳ ವಿರುದ್ಧ ಬೀಜ ಕಾಯ್ದೆಗಳನ್ವಯ ಕ್ರಮ ಕೈಗೊಳ್ಳಲಾಗುತ್ತದೆ.

ಪುಸಕ್ತ ಸಾಲಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಜಿಲೆನ್ಸ್ ತಂಡಗಳು ಮಾರಾಟ ಮಳಿಗೆಗಳ ತಪಾಸಣೆ ಕೈಗೊಂಡು ಅನಧಿಕೃತವಾಗಿ ದಾಸ್ತಾನು ಮಾಡಿದ 19 ಪುಕರಣಗಳನ್ನು ಪತ್ತೆಹಚ್ಚಿ ಜಪ್ತಿ ಮಾಡಲಾಗಿದೆ. 13 ಪ್ರಕರಣಗಳಲ್ಲಿ ಪರವಾನಗಿಗಳನ್ನು ಅಮಾನತು ಮಾಡಲಾಗಿದೆ. 2 ಪಕರಣಗಳಲ್ಲಿ ಪರವಾನಗಿಗಳನ್ನು ರದ್ದು ಮಾಡಲಾಗಿದೆ. ಬಾಕಿ ಉಳಿದ 4 ಪುಕರಣಗಳಿಗೆ ನ್ಯಾಯಲಾಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಈ ಪ್ರಕರಣಗಳಲ್ಲಿ ಒಟ್ಟಾರ 434 ಕ್ವಿಂಟಾಲ್ 62.67 ಲಕ್ಷ ಮೌಲ್ಯದ ಬಿತ್ತನೆ ಬೀಜಗಳನ್ನು ಜಪ್ತಿಮಾಡಲಾಗಿದೆ ಎಂದು ಸದಸ್ಯರ ಪ್ರಶ್ನೆಗೆ ನೀಡಿರ ಲಿಖಿತ ಉತ್ತರದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ.
ಕೃಷಿ ಯಂತ್ರಧಾರೆ ನಿರ್ವಹಣೆ
ಹಲವೆಡೆ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. 2015-16ನೇ ಸಾಲಿನಲ್ಲಿ ಸ್ಥಾಪಿಸಿರುವ ಕೆಲವು ಕೃಷಿ ಯಂತ್ರಧಾರೆ ಕೇಂದ್ರಗಳ ಆರು ವರ್ಷಗಳ ಒಡಂಬಡಿಕೆ ಅವಧಿಯು ಮುಕ್ತಾಯವಾಗಿದ್ದು, ಸಂಬಂಧಪಟ್ಟ, ಸೇವಾ ದರ ಸಂಸ್ಥೆಗಳು ಸದರಿ ಕೇಂದ್ರಗಳನ್ನು ಮುಂದುವರೆಸಲು ಇಚ್ಚೆಪಡದ ಹಿನ್ನಲೆಯಲ್ಲಿ ಅಂತಹ ಕೇಂದ್ರಗಳನ್ನು ಇತರೆ ಆಸಕ್ತಿಯುಳ್ಳ ಸೇವಾ ದರ ಸಂಸ್ಥೆಗಳಿಗೆ ಅಥವಾ ಆದ್ಯತೆ ಮೇರೆಗೆ ರೈತ ಉತ್ಪಾದಕ ಸಂಸ್ಥೆಗಳಿಗೆ ಹಸ್ತಾಂತರಿಸಲು ಸರ್ಕಾರಿ ಆದೇಶವನ್ನು ನೀಡಲಾಗಿದ್ದು, ಅದರನ್ವಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಉತ್ತರಿಸಿದರು.

ಕೀಟ ರೋಗ, ಕಳೆ ನಿರ್ವಹಣೆಗೆ ಅನುದಾನ
ಬೆಳೆಗಳಿಗೆ ಬಾಧಿಸುವ ಕೀಟ ರೋಗ, ಕಳೆ ನಿರ್ವಹಣೆಗೆ ಅನುದಾನದ ಲಭ್ಯತೆಗೆ ಅನುಗುಣವಾಗಿ ಪೀಡೆನಾಶಕ ಮತ್ತು ಪೀಡೆನಾಶಕಗಳನ್ನು ಶೇ.50ರ ಸಹಾಯಧನದಡಿ ಪ್ರತಿ ಹೆಕ್ಟೇರಿಗೆ ರೂ. 500 ಮೀರದಂತೆ ಪ್ರತಿ ರೈತರಿಗೆ ಪ್ರತಿ ಹಂಗಾಮಿಗೆ ಗರಿಷ್ಟ 2 ಹೆಕ್ಟೇರಿಗೆ ಸೀಮಿತಗೊಳಿಸಿ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನೀಕರಿಸಿ ವಿತರಿಸಲಾಗುತ್ತಿದೆ. 2022-23ನೇ ಸಾಲಿನಲ್ಲಿ ಸಸ್ಯ ಸಂರಕ್ಷಣೆ ಯೋಜನೆಯಡಿ ಜೈವಿಕ ಪೀಡೆನಾಶಕ ಮತ್ತು ಜೈವಿಕ ನಿಯಂತ್ರಣಕಾರಕಗಳ ಘಟಕದಡಿ ರೂ 150 ಲಕ್ಷ ಮತ್ತು ಅವಶ್ಯಕತೆಗೆ ಅನುಗುಣವಾಗಿ ಕೀಟ/ರೋಗ ನಿರ್ವಹಣೆಗೆ ಸಹಾಯದನದಡಿ, ಪೀಡೆನಾಶಕಗಳ ವಿತರಣೆ ಘಟಕದಡಿ ರೂ. 200.00 ಲಕ್ಷಗಳ ವಾರ್ಷಿಕ ಕಾರ್ಯಕ್ರಮವನ್ನು ಜಿಲ್ಲೆಗಳಿಗೆ ನೀಡಿ ಕಾರ್ಯಕ್ರಮದನ್ವಯ ಈಗಾಗಲೇ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ.
2022-23ನೇ ಸಾಲಿನಲ್ಲಿ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ ರೂ.4008.23 ಲಕ್ಷ ಹಾಗೂ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆಯಡಿ ಸಮಗ್ರ ಕೀಟ ನಿರ್ವಹಣೆಗಾಗಿ ರೂ.95.683 ಲಕ್ಷಗಳನ್ನು ಒದಗಿಸಿದ್ದು, ಈ ಅನುದಾನವನ್ನು ಜಿಲ್ಲೆಗಳಿಗೆ ಬಿಡುಗಡೆಗೊಳಿಸಲಾಗಿದೆ ಎಂದು ಕೃಷಿ ಸಚಿವರು, ಸದಸ್ಯರಾದ ಅ.ದೇವೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.












Click it and Unblock the Notifications