ಕೃಷಿಯಲ್ಲಿನ ಹೂಡಿಕೆ ಹೆಚ್ಚಳಕ್ಕಾಗಿ ಬ್ಯಾಂಕರ್ಗಳ ಜೊತೆ ಮಾತುಕತೆ, 3600 ಕೋಟಿ ಆವರ್ತ ನಿಧಿ ಮೀಸಲು:CM
ರೈತರ ಬದುಕು ಉತ್ತಮವಾಗಲು ಕೃಷಿಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಬ್ಯಾಂಕರ್ಸ್ಗಳ ಜೊತೆಗೆ ಮಾತುಕತೆ ನಡೆಸಿದ್ದೇವೆ ಎಂದು ಸರ್ಕಾರ ಕೈಗೊಂಡ ಕ್ರಮ, ಯೋಜನೆ ಬಗ್ಗೆ ಸಿಎಂ ಬೊಮ್ಮಾಯಿ ವಿವರಿಸಿದರು.
ಬೆಂಗಳೂರು, ಮಾರ್ಚ್ 20; ರೈತರ ಬದುಕು ಉತ್ತಮವಾಗಲು ಕೃಷಿಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಬ್ಯಾಂಕರ್ಸ್ಗಳ ಜೊತೆಗೆ ಮಾತುಕತೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಬಂಡಾವಾಳ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ರೈತರು ಉಳಿದರೆ ಮಾತ್ರವೇ ಕೃಷಿ ಉಳಿಯುತ್ತದೆ. ರೈತ ಕೇಂದ್ರಿತ ಕಾರ್ಯಕ್ರಮಗಳನ್ನು ರೂಪಿಸಿ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಕಿಸಾನ್ ಸಮ್ಮಾನ್ , ರೈತ ವಿದ್ಯಾ ನಿಧಿ ಕಾರ್ಯಕ್ರಮಗಳು ರೈತನನ್ನು ಶಕ್ತಿಶಾಲಿಯಾಗಿ ಮಾಡುವ ಕಾರ್ಯಕ್ರಮಗಳಾಗಿವೆ. ಅವು ಬದಲಾವಣೆ ತರುತ್ತಿವೆ ಎಂದರು.

ರೈತರ ಆದಾಯ ಹೆಚ್ಚಳ ಮಾಡಲು 300 ಕೋಟಿ ರೂಪಾಯಿ ಗಳ ವಿಶೇಷ ಆವರ್ತ ನಿಧಿ ಮೀಸಲಿಡಲಾಗಿದೆ. ಯಾವುದೇ ಬೆಳೆ ಬೆಲೆ ಕುಸಿದರೆ ತಕ್ಷಣ ಸ್ಪಂದಿಸಿ ಬೆಂಬಲ ಬೆಲೆ ಅಡಿ ಭತ್ತ, ರಾಗಿ, ತೊಗರಿ ಅಡಕೆ ಬೆಳೆಗಳಿಗೆ ಬೆಂಬಲ ಬೆಲೆ ನೀಡಲಾಗಿದೆ. ರೈತರಿಗೆ ಯಶಸ್ವಿನಿ ಯೋಜನೆಯನ್ನು ಪುನಾರಾಂಭಿಸಲಾಗಿದೆ. 3,600 ಕೋಟಿ ಆವರ್ತ ನಿಧಿ ಇಡಲಾಗಿದೆ. ರಾಗಿ ಮತ್ತು ಜೋಳ ರಾಜ್ಯದ ಆಹಾರವಾಗಿದ್ದು, ಇದನ್ನು ಮೊದಲ ಬಾರಿಗೆ ಪಡಿತರದಲ್ಲಿ ವಿತರಿಸಲಾಗುತ್ತಿದೆ ಎಂದು ಬೊಮ್ಮಾಯಿ ವಿವರಿಸಿದರು.
180 ಕೋಟಿ ರೂ.ನಲ್ಲಿ ವಿಮಾ ಯೋಜನೆ ಜಾರಿ
ಕೃಷಿ ಬೆಳೆಗೆ ತಕ್ಕಂತೆ ಸಾಲದ ಪ್ರಮಾಣ ಶೂನ್ಯ ಬಡ್ಡಿ ಸಹಿತ ಐದ ಲಕ್ಷ ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. ರೈತರಿಗೆ ಸಿಗುವ ಸಾಲದ ಪ್ರಮಾಣ ಏರಿಕೆ ಕಂಡಿದೆ. ರೈತ ವಿದ್ಯಾನಿಧಿ ರೂಪಿಸುವ ಮೂಲಕ ರೈತರ ಮಕ್ಕಳು ಉನ್ನತ ವ್ಯಾಸಂಗ ಮಾಡಿ ಬೇರೆ ವೃತ್ತಿ ಮಾಡುವ ಮೂಲಕ ಆದಾಯ ಹೆಚ್ಚಳ ಪಡೆಯುವಂತಾಗಬೇಕು. ಗ್ರಾಮೀಣ ಭಾಗದ ಮಕ್ಕಳು ಹೆಚ್ಚು ಬುದ್ದಿವಂತರಿರುತ್ತಾರೆ. ಅವರನ್ನು ಕಡೆಗಣಿಸಬಾರದು. 180 ಕೋಟಿ ರೂ.ಗಳ ವೆಚ್ಚದಲ್ಲಿ ರೈತರಿಗೆ ವಿಮಾ ಯೋಜನೆ ಜಾರಿಯಾಗಿದೆ ಎಂದು ಹೇಳಿದರು.

ರೈತ ಯಾವ ಪಕ್ಷಕ್ಕೂ ಸೇರಿದವನಲ್ಲ
ದೇಶ ಕೃಷಿಕರು ಯಾವೊಂದು ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಎಲ್ಲ ರಾಜಕೀಯ ಪಕ್ಷಗಳು ರೈತನಿಗೆ ಸೇರಿವೆ. ಇದನ್ನು ಅರ್ಥ ಮಾಡಕೊಳ್ಳಬೇಕಿದೆ. ವಿಶ್ವವೇ ಅವಲಂಬಿಸಿರುವುದು ಕೃಷಿಯಲ್ಲಿ ತೊಡಗಿರುವ ರೈತನನ್ನು. ಒಂದು ಕಾಳು ಹಾಕಿದರೆ ನೂರಾರು ಕಾಳು ನೀಡುವ ಪವಾಡ ಭೂಮಿಯಲ್ಲಿದೆ. ಇದು ನಡೆಯದಿದ್ದರೆ ಈ ಜಗತ್ತು ನಡೆಯುತ್ತಿರಲಿಲ್ಲ. ಆಹಾರ ಉತ್ಪಾದಿಸುವ ರೈತ ಇಡೀ ಮನುಕುಲವನ್ನು ಮುಂದುವರೆಸಿಕೊಂಡು ಹೋಗುವ ಕೆಲಸ ಮಾಡುತ್ತಾನೆ ಎಂದ ರೈತರು ಮತ್ತು ಕೃಷಿಯ ಮಹತ್ವ ವಿವರಿಸಿದರು.
ಮೀನುಗಾರರು ಗುಡ್ಡಗಾಡು ಜನ ಕಠಿಣ ಪರಿಶ್ರಮದಿಂದ ಕಾರ್ಯ ನಿರ್ವಹಿಸುತ್ತಾರೆ. ಆದರೆ ಅಲ್ಲಿ ಆತಂಕವಿರುತ್ತದೆ. ರೈತ ಅಂದರೆ ಭರವಸೆ, ಅವನು ಮಣ್ಣಿನ ಜೊತೆ ಬದುಕುತ್ತಾನೆ. ರೈತರು ಕಠಿಣ ಪರಿಶ್ರಮಿಗಳೂ ಹೌದು, ಪ್ರಾಮಾಣಿಕರೂ ಹೌದು. ಭರವಸೆ ರೈತನ ಕಾಯಕ ಗುಣ ಧರ್ಮ, ಅದರಿಂದ ನಮಗೆ ನಿರಂತರ ಆಹಾರ ದೊರೆಯುತ್ತಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ವೇಳೆ ವಿದೇಶದಿಂದ ಆಹಾರ ಪದಾರ್ಥ ಆಮದಾಗುತ್ತಿತ್ತು. ಈಗ 130 ಕೋಟಿ ಜನರಿಗೆ ಆಹಾರ ಉತ್ಪಾದನೆ ನಾವೇ ಮಾಡಲಾಗುತ್ತಿದೆ. ಕೃಷಿ ಬೆಳೆದಂತೆ ರೈತ ಬೆಳೆದಿಲ್ಲ. ರೈತ ಉತ್ಪಾದನೆ ಮಾಡುತ್ತಾನೆ. ಆದರೆ ಲಾಭ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ್, ವಿಜಯ ಕರ್ನಾಟಕ ಸಿಇಒ ರಂಜಿತ್ ಕಾಟೆ, ಕುಲಪತಿ ಸುರೇಶ್ , ಸಂಪಾದಕರಾದ ಸುದರ್ಶನ್ ಮೊದಲಾದವರು ಉಪಸ್ಥಿತರಿದ್ದರು.












Click it and Unblock the Notifications