ಇದೇ ಬ್ಯಾರಿಕೇಡ್ಗಳನ್ನು ಅಂತರರಾಷ್ಟ್ರೀಯ ಗಡಿಗಳಲ್ಲಿ ಹಾಕಿದ್ದರೆ ಭಾರತ ಹೀಗಿರುತ್ತಿರಲಿಲ್ಲ; ಶಿವಸೇನೆ
ನವದೆಹಲಿ, ಫೆಬ್ರುವರಿ 05: "ನೀವು ದೆಹಲಿ ಗಡಿಗಳಲ್ಲಿ ರೈತರನ್ನು ತಡೆಯಲು ಹಾಕಿರುವ ಬ್ಯಾರಿಕೇಡ್ ಗಳನ್ನು ಅಂತರರಾಷ್ಟ್ರೀಯ ಗಡಿಗಳಲ್ಲಿ ಹಾಕಿದ್ದಿದ್ದರೆ, ಇಂದು ಭಾರತಕ್ಕೆ ನುಗ್ಗುವ ಧೈರ್ಯವನ್ನು ಚೀನಾ ಮಾಡುತ್ತಿರಲಿಲ್ಲ" ಎಂದು ಶಿವಸೇನಾ ಸದಸ್ಯ ಸಂಜಯ್ ರಾವತ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರು ಪ್ರತಿಭಟನೆ ಮುಂದುವರೆಸಿದ್ದು, ಅವರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸಗಳು ಸರ್ಕಾರದಿಂದ ನಡೆಯುತ್ತಿದೆ. ಎಂದು ರಾವತ್ ದೂರಿದ್ದಾರೆ. "ಸತ್ಯ ಹೇಳುವವರನ್ನು ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ. ಸರ್ಕಾರದ ನಡೆಯನ್ನು ಟೀಕಿಸುವವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣಗಳನ್ನು ಹಾಕಲಾಗುತ್ತಿದೆ" ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಮುಂದೆ ಓದಿ...
"ಖಲಿಸ್ತಾನಿಗಳು ಎಂದು ಅವಮಾನಿಸುತ್ತಿದ್ದೀರ"
ಶುಕ್ರವಾರ ರಾಜ್ಯ ಸಭೆಯಲ್ಲಿ ರೈತರ ಪ್ರತಿಭಟನೆ ಕುರಿತು ಹೇಳಿಕೆ ನೀಡಿದ ಶಿವಸೇನಾ ಸದಸ್ಯ ಸಂಜಯ್ ರಾವತ್, "ರೈತರಿಗೂ ಇದೇ ಪರಿಸ್ಥಿತಿ ಎದುರಾಗಿದೆ. ಸತ್ಯ ಹೇಳಿದರೆ ದೇಶದ್ರೋಹಿ ಎನ್ನುತ್ತಿದ್ದಾರೆ. ತಮ್ಮ ನ್ಯಾಯಕ್ಕಾಗಿ ಹೋರಾಡುತ್ತಿರುವವರನ್ನು ರಾಷ್ಟ್ರದ್ರೋಹಿಗಳು ಎನ್ನುತ್ತಿದ್ದಾರೆ. ಖಲಿಸ್ತಾನಿಗಳು ಎಂದು ಅವಮಾನಿಸುತ್ತಿದ್ದಾರೆ" ಎಂದು ದೂರಿದರು.
ಅಹಂಕಾರದಿಂದ ದೇಶ ಮುನ್ನೆಡೆಸಲು ಆಗುತ್ತದೆಯೇ; ಸಂಜಯ್ ರಾವತ್
"ರೈತರನ್ನು ಸೈನಿಕರು ಎನ್ನುತ್ತಿದ್ದರು"
ಸ್ವಾತಂತ್ರ್ಯ ಕಾಲದಲ್ಲಿ ರೈತರನ್ನು ಸೈನಿಕರು ಎಂದೇ ಕರೆಯಲಾಗುತ್ತಿತ್ತು. ಮೊಘಲರು ಹಾಗೂ ಬ್ರಿಟಿಷರ ವಿರುದ್ಧ ಹೋರಾಡಿದ ರೈತರನ್ನು ಸೈನಿಕರಂತೆ ನಡೆಸಿಕೊಳ್ಳಲಾಗುತ್ತಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ದೆಹಲಿ ಗಡಿಯಲ್ಲಿ ರೈತರು ತಮ್ಮ ಹಕ್ಕುಗಳಿಗೆ ಹೋರಾಡಬೇಕಿದೆ. ಅವರನ್ನ ರಾಷ್ಟ್ರದ್ರೋಹಿಗಳು ಎಂದು ಕರೆಯುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಸುಳ್ಳನ್ನೇ ಸತ್ಯವೆಂದು ಪ್ರತಿಪಾದಿಸುತ್ತಿದ್ದಾರೆ"
ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ಹಲವು ರೈತರು ದೆಹಲಿ ಗಡಿಗಳಲ್ಲಿ ಕುಳಿತು ತಿಂಗಳುಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಸತ್ಯ ಅರ್ಥಮಾಡಿಕೊಳ್ಳಿ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಹೇಳುತ್ತಿದ್ದಾರೆ. ಕಳೆದ ಆರು ವರ್ಷಗಳಿಂದಲೂ ನಾವು ಸತ್ಯವನ್ನು ಕೇಳುತ್ತಲೇ ಇದ್ದೇವೆ. ಅವರು ಸುಳ್ಳನ್ನೇ ಸತ್ಯವೆಂದು ಪ್ರತಿಪಾದಿಸುತ್ತಲೇ ಇದ್ದಾರೆ. ದೇಶದಲ್ಲಿ ಈಗ ಯಾರೇ ಸತ್ಯ ಹೇಳಿದರೂ ಅವರನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದರು.
"ಇದೇ ಕೆಲಸವನ್ನು ಅಂತರರಾಷ್ಟ್ರೀಯ ಗಡಿಗಳಲ್ಲಿ ಮಾಡಿ"
"ದೆಹಲಿ ಗಡಿಗಳಲ್ಲಿ ರೈತರನ್ನು ತಡೆಯಲು ಹಾಕಿರುವ ಬ್ಯಾರಿಕೇಡ್ ಗಳನ್ನು ಅಂತರರಾಷ್ಟ್ರೀಯ ಗಡಿಗಳಲ್ಲಿ ಹಾಕಿದ್ದಿದ್ದರೆ, ಇಂದು ಭಾರತಕ್ಕೆ ನುಗ್ಗುವ ಧೈರ್ಯವನ್ನು ಚೀನಾ ಮಾಡುತ್ತಿರಲಿಲ್ಲ. ರೈತರನ್ನು ಅವಮಾನಿಸುವುದು ದೇಶಕ್ಕೆ ಒಳಿತಲ್ಲ" ಎಂದಿರುವ ರಾವತ್, ಸರ್ಕಾರವನ್ನು ಪ್ರಶ್ನೆ ಮಾಡಿದರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಇದಕ್ಕೆ ಸಂಜಯ್ ಸಿಂಗ್, ಶಶಿ ತರೂರ್ ನಂಥವರೇ ಉದಾಹರಣೆ ಎಂದು ಹೇಳಿದರು.