ಮಂತ್ರ ಪಠಿಸಿ ಜಾಸ್ತಿ ಬೆಳೆ ತೆಗೆಯಿರಿ, ಗೋವಾ ಕೃಷಿ ಸಚಿವರ ಪುಕ್ಕಟೆ ಸಲಹೆ
ಪಣಜಿ, ಜುಲೈ 5: ಹೆಚ್ಚಿನ ಬೆಳೆ ಬರಬೇಕಿದ್ದರೆ ಏನು ಮಾಡಬೇಕು? ಇದಕ್ಕೆ ಸರಳ ಸಲಹೆ ನೀಡಿದ್ದಾರೆ ಗೋವಾದ ಕೃಷಿ ಸಚಿವ ವಿಜಯ್ ಸರ್ದೇಸಾಯಿ. ಗದ್ದೆಗಳಲ್ಲಿ ಹೆಚ್ಚಿನ ಭತ್ತ ಬೆಳೆಯಬೇಕಿದ್ದರೆ ರೈತರು ವೇದದ ಮಂತ್ರಗಳ ಪಠಿಸಬೇಕಂತೆ. ಹೀಗೆ ಮಾಡಿ ಜೊತೆಗೆ ಕಾಸ್ಮಿಕ್ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಿ ಎಂದವರು ಸಲಹೆ ನೀಡಿದ್ದಾರೆ.
ಫಟೋರ್ಡದಲ್ಲಿ ಬುಧವಾರ ಶಿವ ಯೋಗ್ ಕಾಸ್ಮಿಕ್ ಫಾರ್ಮಿಂಗ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಗೋವಾ ಸರಕಾರ ಕಾಸ್ಮಿಕ್ ಫಾರ್ಮಿಂಗ್ ಗೆ ಉತ್ತೇಜನ ನೀಡುತ್ತಿದೆ ಎಂದಿದ್ದಾರೆ.
"ರಸಾಯನಿಕ ಅಥವಾ ರಸಗೊಬ್ಬರಗಳನ್ನು ಬಳಸದ ಸುರಕ್ಷಿತ ಆಹಾರಗಳನ್ನು ಕಾಸ್ಮಿಕ್ ಕೃಷಿ ನಿಮಗೆ ನೀಡಲಿದೆ. ಈ ವಿಧಾನದಲ್ಲಿ ಭತ್ತ ಬೆಳೆಯಲು ರಸಾಯನಿಕ ಪದಾರ್ಥಗಳನ್ನು ಬಳಸುವುದಿಲ್ಲ. ಕೇವಲ ಸಾವಯವ ವಿಧಾನದಲ್ಲಿ ಬೆಳೆ ಬೆಳೆಯಲಾಗುತ್ತದೆ," ಎಂದು ಸರ್ದೇಸಾಯಿ ಮಾಹಿತಿ ನೀಡಿದ್ದಾರೆ.

ಈ ತಂತ್ರಜ್ಞಾನದಲ್ಲಿ ಕಾಸ್ಮಿಕ್ ಶಕ್ತಿ ಬೆಳೆಗಳಿಗೆ ಹರಿಯಲು ರೈತರು ಕನಿಷ್ಠ 30 ನಿಮಿಷ ಮಂತ್ರವನ್ನು ಪಠಿಸಬೇಕು ಎಂದು ಗೋವಾ ಫಾರ್ವರ್ಡ್ ಪಕ್ಷದ ನಾಯಕರೂ ಆದ ಕೃಷಿ ಸಚಿವರು ಹೇಳಿದ್ದಾರೆ.
"ಕೃಷಿ ಯೋಗ್ ಕೃಷಿಯಲ್ಲಿ ಕ್ರಾಂತಿಯುಂಟು ಮಾಡಿದೆ. ಈ ಕಾರಣಕ್ಕೆ ನಾವು ಇದನ್ನು ಗೋವಾದಲ್ಲಿ ಜಾರಿಗೆ ತರುತ್ತಿದ್ದೇವೆ," ಎಂದು ಸರ್ದೇಸಾಯಿ ಮಾಹಿತಿ ನೀಡಿದರು. ಈ ತಂತ್ರಜ್ಞಾನ ಲಾಭದಾಯಕವಾಗಿದೆ ಎಂಬುದಕ್ಕೆ ಸಾಕ್ಷಿಗಳಿವೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.












Click it and Unblock the Notifications