ಕೂಲಿ ನಂ 1 ನಾಯ್ಡು ಅಧಿಕಾರಕ್ಕೆ; ನಿವೃತ್ತಿ ವಯಸ್ಸು ಏರಿಕೆ
ಗುಂಟೂರು, ಜೂನ್ 9: ಸರಿಯಾಗಿ ಒಂದು ರಾಜಧಾನಿಯೂ ಇಲ್ಲದೆ ಸ್ಥಾಪನೆಗೊಂಡಿರುವ ಸೀಮಾಂಧ್ರಕ್ಕೆ ಆಂಧ್ರದ ಹಳೆಯ ಹುಲಿ ಚಂದ್ರಬಾಬು ನಾಯ್ಡು ಅವರು ನಿನ್ನೆ ಸಂಜೆ 7.27ರ ಶುಭ ಘಳಿಗೆಯಲ್ಲಿ ಅಪಾರ ಜನಸ್ತೋಮದ ಎದುರಿಗೆ ಅಪಾರ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಅದ್ದೂರಿ ಸಮಾರಂಭದಲ್ಲಿ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಗುಂಟೂರು ಮತ್ತು ವಿಜಯವಾಡಾ ನಗರಗಳ ಮಧ್ಯೆ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ವಿಶಾಲ ಆವರಣದಲ್ಲಿ ಲಕ್ಷಾಂಯರ ಜನರ ಸಮ್ಮುಖದಲ್ಲಿ ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿ ಮೂರನೆಯ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು.
ನಾನು
ಮುಖ್ಯಮಂತ್ರಿಯಾಗಿ
ಅಧಿಕಾರ
ಚಲಾಯಿಸುವುದಿಲ್ಲ.
ಬದಲಿಗೆ
ಒಬ್ಬ
ಸಾಮಾನ್ಯ
ಕೂಲಿಯಾಗಿ
ಸೀಮಾಂಧ್ರವನ್ನು
ಕಟ್ಟಿಬೆಳೆಸುವೆ.
ಇದಕ್ಕೆ
ಜನ
ಸಹ
ತನಗೆ
ಹೆಗಲಿಗೆ
ಹೆಗಲು
ನೀಡಬೇಕು
ಎಂದು
ಚಂದ್ರಬಾಬು
ಆಶಿಸಿದರು.
ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುತ್ತಿದ್ದಂತೆ ಅಕ್ಷರಶಃ ನಿಂತ ನಿಲುವಿನಲ್ಲೇ ಚಂದ್ರಬಾಬು ನಾಯ್ಡು ಅವರು ಸರಣಿಯಲ್ಲಿ 5 ಕಡತಗಳಿಗೆ ಸಹಿ ಹಾಕಿ ದಾಖಲೆ ನಿರ್ಮಿಸಿದರು. ತನ್ಮೂಲಕ ಚುನಾವಣೆ ವೇಳೆ ತಾವು ನೀಡಿದ್ದ ವಾಗ್ದಾನವನ್ನು ವಿನೂತನ ರೀತಿಯಲ್ಲಿ ಪೂರೈಸಿದರು.
ಅಕ್ರಮ ಮದ್ಯದಂಗಡಿಗಳನ್ನು ಮುಚ್ಚುವುದು, ವೃದ್ಧಾಪ್ಯರಿಗೆ ಮಾಸಿಕ ಪಿಂಚಣಿ 1,000 ರೂ. ಗೆ ಏರಿಕೆ, ವಿಧವೆಯರಿಗೆ 1,500 ರೂ ಮಾಸಿಕ ಧನ ಸಹಾಯ, ಗ್ರಾಮಿಣರಿಗೆ ಕುಡಿಯುವ ನೀರಿಗಾಗಿ ಎನ್ಟಿಆರ್ ಸುಜಲಾ ಯೋಜನೆ ಜಾರಿ ಮುಂತಾದ ಯೋಜನೆಗಳು ಅಡಕವಾಗಿರುವ ಕಡತಗಳಿಗೆ ನಿನ್ನೆ ಭಾನುವಾರದಂದೇ ಸಿಎಂ ನಾಯ್ಡು ಸಹಿ ಹಾಕಿದರು.
ಮೊತ್ತಮೊದಲಿಗೆ ನಿರೀಕ್ಷೆಯಂತೆ 54000 ಕೋಟಿ ರೂ ರೈತ ಸಾಲ ಮನ್ನಾ ಕಡತಕ್ಕೆ ಮುಖ್ಯಮಂತ್ರಿ ಸಹಿ ಹಾಕಿದರು. ಇದಕ್ಕೆ 45 ದಿನಗಳ ಕಾಲಮಿತಿ ಹಾಕಿಕೊಂಡಿರುವ ಸಿಎಂ ನಾಯ್ಡು, 45 ದಿನಗಳ ಸಾಲ ಮನ್ನಾ ಕಾರ್ಯಾಚರಣೆ ಮುಗಿಯುತ್ತಿದ್ದಂತೆ ಮತ್ತೆ ಹೊಸ ಸಾಲಕ್ಕೆ ರೈತರು ಅರ್ಜಿ ಹಾಕಬಹುದು ಎಂದು ಡಬಲ್ ಧಮಾಕಾ ನೀಡಿದರು. ಇತ್ತ ರೈತರ ಮೊಗದಲ್ಲಿ ಸಾಲ ಮನ್ನಾ ಆಗಿರುವ ಸಂತಸದೊಂದಿಗೆ ಮತ್ತೆ ಸಾಲ ಪಡೆಯಬಹುದು ಎಂಬುದನ್ನೂ ಕೇಳಿ ಆನಂದತುಂದಿಲಿತರಾಗಿದ್ದಾರೆ.
ಅಷ್ಟೇ ಅಲ್ಲ. ಅಸಲಿಗೆ ರಾಜಧಾನಿಯೂ ಇಲ್ಲದಂತೆ ಸೀಮಾಂಧ್ರ ರಾಜ್ಯ ನಿರ್ಮಾಣವಾಗಿದೆ ಎಂದು ಗೊಣಗಿದ ಸಿಎಂ ನಾಯ್ಡು, ಈ ಪಾಟಿ ಸಾಲ ಮನ್ನಾಕ್ಕೆ ಹಣ ಎಲ್ಲಿಂದ ಒದಗಿಸುತ್ತಾರೆ ಎಂಬುದಕ್ಕೆ ನಿನ್ನೆ ವೇದಿಕೆಯ ಮೇಲೆ ಅವರ ಮಾಡಿದ ಭಾಷಣದಲ್ಲಿ ಸುಳಿವು ನೀಡಿದ್ದಾರೆ. ಕೇಂದ್ರದ ಅನೇಕ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ವಿರಾಜಮಾನರಾಗಿದ್ದರೂ ಮುಖ್ಯವಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಅನುಪಸ್ಥಿತಿ ಎದ್ದುಕಾಣುತ್ತಿತ್ತು.
ಆದರೂ ಅವರ ಹೆಸರನ್ನು ಪ್ರಸ್ತಾಪಿಸಿದ ಸಿಎಂ ನಾಯ್ಡು, ಅರುಣ್ ಜೇಟ್ಲಿ ಅವರೇ ತಮ್ಮ ಆಪತ್ಬಾಂಧವರು ಎಂದು ಬಣ್ಣಿಸಿದ ಸಿಎಂ ನಾಯ್ಡು ಅವರು 54000 ಕೋಟಿ ರೂ ರೈತ ಸಾಲ ಮನ್ನಾಕ್ಕೆ ಶ್ಯೂರಿಟಿ ನೀಡುವ ಜವಾಬ್ದಾರಿಯನ್ನು ಅವರೇ (ಅರುಣ್ ಜೇಟ್ಲಿ) ಹೊರಲಿದ್ದಾರೆ ಎಂದು ತಮ್ಮ ಭುಜದ ಮೇಲಿನ ಹೊರೆಯನ್ನು ಜೇಟ್ಲಿ ಹೆಗಲಿಗೆ ವರ್ಗಾಯಿಸಿದರು.
ಅದಾದ ನಂತರ ಇನ್ನೂ 4 ಕಡತಗಳಿಗೆ ಸಹಿ ಹಾಕಿದ 64 ವರ್ಷದ ಸಿಎಂ ನಾಯ್ಡು, ರಾಜ್ಯ ಸರಕಾರಿ ನೌಕರರ ನಿವೃತ್ತಿ ವಯಸ್ಸನ್ನು (58 ರಿಂದ) 60 ವರ್ಷಕ್ಕೇರಿಸಿ, ಧನ್ಯೋಸ್ಮಿ ಅಂದರು.
ಕೇವಲ 10 ಪ್ಲಸ್ ಜಿಲ್ಲೆಗಳನ್ನೊಳಗೊಂಡ ನೂತನ ರಾಜ್ಯದಲ್ಲಿ ಅಧಿಕಾರ ಹಂಚಿಕೆಗೆ ಒತ್ತು ನೀಡಿರುವ ಸಿಎಂ ನಾಯ್ಡು, 2 ಉಪ ಮುಖ್ಯಮಂತ್ರಿಗಳನ್ನು ನೇಮಿಸಿಕೊಂಡಿದ್ದಾರೆ. ಉಳಿದಂತೆ ಎಲ್ಲ ಜಿಲ್ಲೆಗಳಿಗೂ ತಲಾ ಒಬ್ಬೊಬ್ಬ ಮಂತ್ರಿಯನ್ನು ಕರುಣಿಸಿದ್ದಾರೆ. ಆದರೆ ಒಂದು ಜಿಲ್ಲೆಗೆ ಮಂತ್ರಿ ಭಾಗ್ಯವೇ ಇಲ್ಲ. ಅದು ಯಾವುದಪ್ಪಾ ನತದೃಷ್ಟ ಜಿಲ್ಲೆ ಅಂದರೆ ಕಡಪಾ. ಅದ್ಯಾಕೆ ಅಂದರೆ, ಅದು ವೈಎಸ್ಸಾರ್ ಜಗನ್ ಪ್ರತಿನಿಧಿಸುವ ಜಿಲ್ಲೆ!